ಕನ್ನಡಪ್ರಭ ವಾರ್ತೆ ಗುಬ್ಬಿ

ಲಿಂಕ್ ಕೆನಾಲ್ ನಿಂದ ರಾಮನಗರಕ್ಕೆ ನೀರು ಹರಿಸಲು ಬಿಡುವುದಿಲ್ಲ ಗೋಲಿಬಾರ್ ಆದರೂ ಸಹ ಬಗ್ಗುವುದಿಲ್ಲ ಎಂದು ತುರುವೇಕೆರೆ ಶಾಸಕ ಎಂಟಿ ಕೃಷ್ಣಪ್ಪ ತಿಳಿಸಿದರು.ತಾಲೂಕಿನ ಮಾವಿನಹಳ್ಳಿ, ಮೆಳೆಕಲ್ಲಹಳ್ಳಿ ಹಾಗೂ ಪೆದ್ದನಹಳ್ಳಿ ಗ್ರಾಮದಲ್ಲಿ ಅಂದಾಜು 1.35 ಕೋಟಿ ರೂಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಆಗಲಿ, ಪ್ರಧಾನಮಂತ್ರಿ ಆಗಲಿ, ಸ್ವಾಗತ ಮಾಡುತ್ತೇನೆ. ಆದರೆ ನಮ್ಮ ಜಿಲ್ಲೆಯ ಹೇಮಾವತಿ ನೀರು ರಾಮನಗರದತ್ತ ಹರಿಸಿಕೊಳ್ಳುವ ಲಿಂಕ್ ಕೆನಾಲ್ ಕಾಮಗಾರಿ ಮಾಡಲು ಬಿಡುವುದಿಲ್ಲ. ಗೋಲಿಬಾರ್ ಮಾಡಿದರೂ ಸರಿ ಹೇಮಾವತಿ ನೀರು ಬಿಟ್ಟುಕೊಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಜಿಲ್ಲೆಯ 24 ಲಕ್ಷ ರೈತರ ಜೀವನಾಡಿ ಹೇಮಾವತಿ ಯಾವುದೇ ಕಾರಣಕ್ಕೂ ಮತ್ತೊಂದು ಜಿಲ್ಲೆಗೆ ಹರಿಯಲು ಬಿಡುವುದಿಲ್ಲ. ಕೆಲ ನರಸತ್ತ ಕಾಂಗ್ರೆಸಿಗರು ನೀರು ಕೊಡುವ ಬಗ್ಗೆ ಮಾತನಾಡುತ್ತಾರೆ ಎಂದು ಛೇಡಿಸಿದರು.ಜನತಾದಳ ಎಂದಿಗೂ ರೈತಪರ ಕೆಲಸ ಮಾಡುತ್ತದೆ. ನನಗೆ ಮತ ಹಾಕಿದ ರೈತರ ಹಿತ ಕಾಯುವ ಕೆಲಸ ನನ್ನದು. ಜಿಲ್ಲೆಯ ಯಾವ ಶಾಸಕರೂ ಬರಲಿ ಬಿಡಲಿ ನಾನು ಮಾತ್ರ ಲಿಂಕ್ ಕೆನಾಲ್ ವಿರೋಧವಾಗಿಯೇ ನಿಲ್ಲುತ್ತೇನೆ. ಕುಣಿಗಲ್ ಕ್ಷೇತ್ರಕ್ಕೆ 3.3 ಟಿಎಂಸಿ ನೀರು ಹಂಚಿಕೆಯಾಗಿದೆ. ಆದರೆ ಈಗ 7.5 ಟಿಎಂಸಿ ನೀರು ಎಲ್ಲಿಗೆ ಹೋಗುತ್ತದೆ ತಿಳಿಯಬೇಕಿದೆ. ನಾಲೆಸಂಖ್ಯೆ 26, 27, 28 ಎಲ್ಲಿಗೆ ನೀರು ಹರಿಯುತ್ತದೆ ಎಂಬ ಲೆಕ್ಕವಿದೆ. ಹಾಗೆಯೇ ವಿವರಣೆ ಇಲ್ಲದ ಲಿಂಕ್ ಕೆನಾಲ್ ಎಲ್ಲಿಗೆ ಹರಿಯುತ್ತದೆ ಎಂಬುದೇ ರಹಸ್ಯ ಮಾಡಿದರೆ ನಮ್ಮ ರೈತರ ಪಾಡೇನು ಎಂದು ಪ್ರಶ್ನಿಸಿದರು. ಜೆಡಿಎಸ್ ಪಕ್ಷ ತೊರೆದು ಹೋದವರು ಮರಳಿ ಬರುವುದಾದರೆ ಸ್ವಾಗತ ಮಾಡುತ್ತೇನೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಬಂದರೂ ಸುಸ್ವಾಗತ ಮಾಡುತ್ತೇನೆ. ಯಾಕೆ ಅಂದ್ರೆ ಇಲ್ಲಿಯೇ ರಾಜಕಾರಣ ಮಾಡಿದವರು. ಮರಳಿ ಮನೆಗೆ ಬಂದಂತೆ ಎಂದು ಜೆಡಿಎಸ್ ಬರುವವರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ವಿಚಾರ ಸರ್ಕಾರ ಹೊಣೆ ಆಗಬೇಕಿದೆ. ನಿಯಮ ರೂಪಿಸಿದ ಸರ್ಕಾರದ ಆದೇಶದಂತೆ ಅಧಿಕಾರಿ ಕೆಲಸ ಮಾಡುತ್ತಾರೆ. ಸೂಕ್ಷ್ಮ ವಿಚಾರ ಮಾಧ್ಯಮ ಹಾಗೂ ಸಾರ್ವಜನಿಕರ ಮಧ್ಯೆ ಕೊನೆಗೆ ಆ ಅಧಿಕಾರಿ ತಲೆದಂಡವಾಗುತ್ತದೆ ಎಂದರು. ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಬೋರಪ್ಪನಹಳ್ಳಿ ಕುಮಾರ್, ಸಿ.ಎಸ್.ಪುರ ಹೋಬಳಿ ಜೆಡಿಎಸ್ ಅಧ್ಯಕ್ಷ ಜಗದೀಶ್, ಮುಖಂಡರಾದ ಜನ್ನೇನಹಳ್ಳಿ ಮೂರ್ತಣ್ಣ, ಉಂಗ್ರ ರವಿಕುಮಾರ್, ವೀರಣ್ಣಗುಡಿ ರಾಮಣ್ಣ, ಲಕ್ಷ್ಮಣ್, ನರಸಿಂಹಮೂರ್ತಿ, ಯೋಗೀಶ್, ಚೇತನ್, ಚಂದ್ರೇಗೌಡ ಇತರರು ಇದ್ದರು.