ಸಾರಾಂಶ
ಮರಾಕಲ್ ವಿಭಾಗದಲ್ಲಿ ೨೧ ಕಂಬಗಳು ಒಟ್ಟೂ ೯೬ ಕಂಬಗಳು ಮುರಿದು ₹೧೪.೪೪ ಲಕ್ಷ ಹಾನಿಯಾಗಿದೆ.
ಕುಮಟಾ: ಕಳೆದ ಮೇ ೨೦ರಿಂದ ಈವರೆಗೆ ಹೆಸ್ಕಾಂನ ಕುಮಟಾ ಉಪವಿಭಾಗ ವ್ಯಾಪ್ತಿಯಲ್ಲಿ ಗಾಳಿ-ಮಳೆ ಹೊಡೆತಕ್ಕೆ ಬಹಳಷ್ಟು ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ಗಳು ಹಾಳಾಗಿದ್ದು, ₹೩೬.೮೯ ಲಕ್ಷ ಹಾನಿಯಾಗಿದೆ ಎಂದು ಮಾಹಿತಿ ಲಭಿಸಿದೆ.
ಗೋಕರ್ಣ ವಿಭಾಗದಲ್ಲಿ ವಿದ್ಯುತ್ ಕಂಬಗಳು ೧೪, ಪಟ್ಟಣ ಭಾಗದಲ್ಲಿ ೧೬, ಗ್ರಾಮೀಣ ಭಾಗದಲ್ಲಿ ೪೫ ಹಾಗೂ ಮರಾಕಲ್ ವಿಭಾಗದಲ್ಲಿ ೨೧ ಕಂಬಗಳು ಒಟ್ಟೂ ೯೬ ಕಂಬಗಳು ಮುರಿದು ₹೧೪.೪೪ ಲಕ್ಷ ಹಾನಿಯಾಗಿದೆ.ಇದೇ ರೀತಿಯಾಗಿ ಟ್ರಾನ್ಸಫಾರ್ಮರ್ಗಳು(ಡಿಟಿಸಿ) ಗೋಕರ್ಣ ವಿಭಾಗದಲ್ಲಿ ೯, ಪಟ್ಟಣ ಭಾಗದಲ್ಲಿ ೩, ಗ್ರಾಮೀಣ ಭಾಗದಲ್ಲಿ ೭ ಹಾಗೂ ಮರಾಕಲ್ ವಿಭಾಗದಲ್ಲಿ ೬, ಒಟ್ಟೂ ೨೫ ಟ್ರಾನ್ಸಫಾರ್ಮರ್ಗಳು ಹಾಳಾಗಿ ₹೨೨.೪೫ ಲಕ್ಷರೂ. ಹಾನಿಯಾಗಿದೆ.
ಈಗಾಗಲೇ ಹಾನಿಗೊಳಗಾದ ಬಹುತೇಕ ಎಲ್ಲೆಡೆ ವಿದ್ಯುತ್ ಕಂಬಗಳನ್ನು ಹಾಗೂ ಟ್ರಾನ್ಸಫಾರ್ಮರ್ಗಳನ್ನು ಅಳವಡಿಸಲಾಗಿದ್ದು ಶೇ.೯೯ ರಷ್ಟು ವಿದ್ಯುತ್ ಸಂಪರ್ಕ ಮರುಸ್ಥಾಪಿಸಲಾಗಿದೆ ಎಂದು ಹೆಸ್ಕಾಂ ಕಚೇರಿಯ ಮೂಲಗಳು ತಿಳಿಸಿದೆ.ಉಳಿದಂತೆ ತಾಲೂಕಿನ ಮಳೆಯ ಪ್ರಮಾಣ ಸೋಮವಾರ ಹಗಲಿಡೀ ಇಳಿಕೆಯಾಗಿದ್ದು ಸಂಜೆಯಾಗುತ್ತಿದ್ದಂತೆ ಪುನಃ ಆರಂಭವಾಗಿದೆ. ಭಾನುವಾರ ರಾತ್ರಿ ತಾಲೂಕಿನ ಹರಕಡೆ ಮೂಲಕ ಮುಸಗುಪ್ಪೆ, ಮೂರೂರು ಸಂಪರ್ಕಿಸುವ ಪಿಡಬ್ಲುಡಿ ರಸ್ತೆಯಲ್ಲಿ ಬಿದ್ದಿದ್ದ ಕಲ್ಲುಮಣ್ಣಿನ ರಾಶಿಯನ್ನು ಸೋಮವಾರ ಜೆಸಿಬಿಯಿಂದ ತೆರವುಗೊಳಿಸಲಾಗಿದೆ.
ದೊಡ್ಡ ಪ್ರಮಾಣದಲ್ಲಿ ಗುಡ್ಡದ ದೊಡ್ಡ ಕಲ್ಲುಬಂಡೆಗಳು ಕೂಡ ಬಿದ್ದಿದ್ದರಿಂದ ರಸ್ತೆಯಲ್ಲಿ ಸಂಚಾರ ಬಂದ್ ಆಗಿತ್ತು. ಆಸುಪಾಸಿನಲ್ಲಿ ಜನವಾಸ್ತವ್ಯ ಇಲ್ಲದ್ದರಿಂದ ಯಾವುದೇ ಜೀವಾಪಾಯದ ಘಟನೆ ನಡೆದಿಲ್ಲ. ಕಲ್ಲುಬಂಡೆ ಮಣ್ಣಿನ ರಾಶಿ ಹಾಗೂ ಇನ್ನಷ್ಟು ಸಂಭವನೀಯ ಗುಡ್ಡ ಕುಸಿತದ ಭಾಗವನ್ನು ತೆರವುಗೊಳಿಸಿದ ಬಳಿಕ ಪುನಃ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿದುಬಂದಿದೆ.