ಸಾರಾಂಶ
ಹಿರೇಕೆರೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಹೈಟೆಕ್ ಶಿಕ್ಷಣದ ಕ್ರಾಂತಿಯಾಗಬೇಕು. ದೃಶ್ಯ ಮಾಧ್ಯಮದಿಂದ ಮಕ್ಕಳ ಕಲಿಕೆಯಲ್ಲಿ ಉತ್ತಮ ಬೆಳವಣಿಗೆ ಕಾಣುತ್ತಿದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ.ಇತ್ತೀಚಿನ ದಿನಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳಿಗೆ ಪಾಲಕರು ಒಲವು ತೋರುತ್ತಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಧರ ಎನ್ ತಿಳಿಸಿದರು.
ಅವರು ಪಟ್ಟಣದ ಶಾಸಕರ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ೧೯೭೭-೭೮ ನೇ ಸಾಲಿನಿಂದ ೧೯೮೫-೮೬ನೇ ಇಸ್ವಿಯವರೆಗೆ ಕಲಿತ ಹಳೆಯ ವಿದ್ಯಾರ್ಥಿಗಳ ಕಾಣಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇದೆ ಶಾಲೆಯಲ್ಲಿ ಅತಿ ಬಡತನದಲ್ಲಿ ಕಲಿತು ವಿವಿಧ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಹಳೆಯ ವಿದ್ಯಾರ್ಥಿಗಳು ಕೂಡಿಕೊಂಡು ತಾವು ಕಲಿತ ತಮ್ಮೂರ ಶಾಲೆಗೆ ಏನಾದರೂ ಕಾಣಿಕೆ ಕೊಟ್ಟು ಉನ್ನತ ಮಟ್ಟದ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಬೇಕೆಂಬ ಉದ್ದೇಶವಿಟ್ಟುಕೊಂಡು ಅಂದಾಜು ₹೩೬ಸಾವಿರಗಳ ಟಿವಿ ಕಾಣಿಕೆಯಾಗಿ ನೀಡಿದ್ದಾರೆ ಅವರ ಈ ಸೇವಾ ಮನೋಭಾವನೆ ಮುಂದಿನ ಪೀಳಿಗೆಗೂ ಅನುಕರಣೀಯವಾಗಿದೆ. ಮಕ್ಕಳ ಕಲಿಕೆ ಸರ್ಕಾರವು ವಿವಿಧ ಸೌಲಭ್ಯ ಕೊಡುತ್ತಿದ್ದು ಜತೆಗೆ ಇಂತಹ ಹಳೆಯ ವಿದ್ಯಾರ್ಥಿಗಳ ನೆರವು ಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಬೆಳೆಯಲು ದೃಶ್ಯ ಮಾಧ್ಯಮಗಳು ಬಹಳ ಪೂರಕವಾಗಿದೆ. ಮಕ್ಕಳು ಈ ದೂರದರ್ಶನದಲ್ಲಿ ಬರುವ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕಲೆತ ಶಾಲೆಗೆ ಶಿಕ್ಷಕರಿಗೆ, ಪಾಲಕರಿಗೆ ಹೆಸರು ತಂದುಕೊಡಬೇಕೆಂದರು. ಶಾಲಾ ಮುಖ್ಯೋಪಾಧ್ಯಾಯ ಎಂ.ಆರ್. ಕಮ್ಮಾರ ಪ್ರಾಸ್ತಾವಿಕ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳಾದ ಎಸ್.ಆರ್. ಮುರ್ಡೇಶ್ವರ, ವಿಠಲ ಡಾಂಗೆ ಅಂದಿನ ಶಾಲೆಯ ದಿನಗಳ ಹಳೆಯ ನೆನಪು ಮೆಲಕು ಹಾಕಿದರು.
ಇದೇ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷ ಗೋಪಾಲಕೃಷ್ಣ ಬಾದಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಕ್ಷೇತ್ರ ಸಮನ್ವಯ ಅಧಿಕಾರಿ ಎನ್. ಸುರೇಶಕುಮಾರ, ಸಂಪನ್ಮೂಲ ವ್ಯಕ್ತಿ ದಾದಾಪೀರ ನರಗುಂದ, ಶಾಲಾ ಸುಧಾರಣಾ ಸಮಿತಿಯ ಉಪಾಧ್ಯಕ್ಷೆ ಶ್ವೇತಾ ಮಾರವಳ್ಳಿ, ಸದಸ್ಯರಾದ ರಾಜೇಶ್ವರಿ ಅಜ್ಜಪ್ಪನವರ, ಸತೀಶ ಕೋರಿಗೌಡ್ರ ಸೇರಿದಂತೆ ಹಳೆಯ ವಿದ್ಯಾರ್ಥಿಗಳಾದ ವೆಂಕಟೇಶ ಉಪ್ಪಾರ, ಮಹೇಶ ಮಡಿವಾಳರ, ಟಿ. ವಿನಾಯಕ, ವಿಜಯಕುಮಾರ ಹಳಕಟ್ಟಿ, ರವಿ ಚಿಂದಿ, ಕುಮಾರ ಅರ್ಕಾಚಾರಿ, ಜಗದೀಶ ಹೊನ್ನತ್ತಿ, ಹಾಗೂ ಶಾಲಾ ಶಿಕ್ಷಕ-ಶಿಕ್ಷಕಿಯರು ಉಪಸ್ಥಿತರಿದ್ದರು.ಎಂ.ವೈ.ದಾಳಿ ನಿರೂಪಿಸಿದರು, ಶಿವಾನಂದ ಅಣ್ಣಯ್ಯನವರ ಸ್ವಾಗತಿಸಿದರು, ವೆಂಕಟೇಶ ಕೊರಚರ ವಂದಿಸಿದರು, ಇದೇ ಸದಂರ್ಭದಲ್ಲಿ ಹಳೆಯ ವಿದ್ಯಾರ್ಥಿಗಳಿಗೆ ಶಾಲಾ ವತಿಯಿಂದ ಸನ್ಮಾನಿಸಲಾಯಿತು.