ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ತಂತ್ರಜ್ಞಾನ ಬಳಕೆಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ ಪೊಲೀಸ್ ಇಲಾಖೆ ಇದೀಗ ಕೃತಕ ಬುದ್ದಿಮತ್ತೆ (ಎಐ) ಮತ್ತು ಮೆಷಿನ್ ಲರ್ನಿಂಗ್ (ಎಂಎಲ್)ನಂಥ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಇಲಾಖೆಗೆ ಮತ್ತಷ್ಟು ಹೈಟೆಕ್ ಸ್ಪರ್ಶ ನೀಡಿದೆ.
ಎಐ ಮತ್ತು ಎಂಎಲ್ ತಂತ್ರಜ್ಞಾನ ಬಳಸಿಕೊಂಡು, ಕೆಎಸ್ಪಿ ಎ.ಐ, ಪೊಲೀಸ್ ಐ.ಟಿ. ವಿ2 ತಂತ್ರಾಂಶ, ಐಟಿಪಿಎ ಸರಳ ಮೊಬೈಲ್ ಆ್ಯಪ್, ಚಾಟ್ಬಾಟ್, ಅನುಕಂಪ ಆಧಾರದ ನೇಮಕಾತಿ ಪೋರ್ಟಲ್, ಆರ್ಥಿಕ ಅಪರಾಧಗಳ ತನಿಖಾ ತಂತ್ರಾಂಶ, ಕರ್ನಾಟಕ ರಾಜ್ಯ ಪೊಲೀಸ್ ಡೇಟಾಥಾನ್-2024 ರೂಪಿಸಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಚಾಲನೆ ನೀಡಿದರು.
ಈ ತಂತ್ರಾಂಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಪೂರ್ಣ ಪ್ರಮಾಣದಲ್ಲಿ ತನಿಖಾ ಪ್ರಕ್ರಿಯೆಯನ್ನು ಸಮಗ್ರವಾಗಿ ಕೈಗೊಳ್ಳಬಹುದು. ಎಫ್ಐಆರ್ ನೋಂದಣಿಯಿಂದ ಹಿಡಿದು ಪ್ರಕರಣದ ವಿಲೇವಾರಿವರೆಗಿನ ಎಲ್ಲ ಕಾರ್ಯಚಟುವಟಿಕೆಗಳನ್ನು ತಡೆ ರಹಿತವಾಗಿ ನಿರ್ವಹಿಸಬಹುದಾಗಿದೆ.
ಡಿಜಿಟಲ್ ಸಾಕ್ಷ್ಯ ನಿರ್ವಹಣೆ ಸೇರಿದತೆ ವಿವಿಧ ಸೇವೆಗಳನ್ನು ಒಳಗೊಂಡಂತೆ ಪೊಲೀಸ್ ಇಲಾಖೆ ಮತ್ತು ನಾಗರಿಕರಿಗೆ ಹೆಚ್ಚಿನ ಸೇವೆಗಳನ್ನು ಒದಗಿಸುವಂತೆ ಎಐ ಮತ್ತು ಎಂಎಲ್ ತಂತ್ರಜ್ಞಾನವನ್ನು ಬಳಸಿ ವಿನ್ಯಾಸಗೊಳಿಸಲಾಗಿದೆ.
ಮಾನವ ಕಳ್ಳಸಾಗಣಿಕೆ ವಿರುದ್ಧ ಕಾನೂನುಗಳು ನಿರ್ಣಾಯಕವಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಅಗತ್ಯವಿರುವ ದಾಖಲೆಗಳು, ಕಾರ್ಯವಿಧಾನಗಳು, ಅನ್ವಯವಾಗುವ ಕಾನೂನುಗಳು ಮತ್ತು ಸಂತ್ರಸ್ತರಿಗೆ ಆಶ್ರಯ ತಂಗುದಾಣಗಳ ಕುರಿತು ಸುಲಭವಾದ ಮಾರ್ಗದರ್ಶನ ನೀಡಲು ಸಹಕಾರಿಯಾಗಲಿದೆ.
ರಾಜ್ಯ ಪೊಲೀಸ್ ಇಲಾಖೆ ವಿಹಾನ್ ಮತ್ತು ಟಾರ್ಗೆಟ್ ಸಹಯೋಗದಲ್ಲಿ ಈ ಆ್ಯಪ್ ರೂಪಿಸಿದೆ.ಈ ತಂತ್ರಾಂಶವು ದಿನದ 24 ಗಂಟೆಯೂ ಸಾರ್ವಜನಿಕರ ವಿವಿಧ ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ. ಇಲಾಖೆಯ ಅಧಿಕೃತ ಜಾಲತಾಣ ಮತ್ತು ಕೆಎಸ್ಪಿ ಆ್ಯಪ್ ಮೂಲಕ ಸಂಯೋಜಿಸಲಾಗಿದೆ.
ಸೈಬರ್ ಅಪರಾಧ, ಸಂಚಾರ, ಮಹಿಳೆ ಮಕ್ಕಳ ಮೇಲಿನ ಸಮಸ್ಯೆಗಳು ಮತ್ತು ಹಿರಿಯ ನಾಗರೀಕರ ಸಮಸ್ಯೆಗಳಿಗೆ ಸಂಬಂಧಿಸಿದ ಪ್ರಶ್ನೆಗಳಿಗೆ ‘ಪೊಲೀಸ್ ಮಿತ್ರ ಚಾಟ್ ಬಾಟ್’ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಉತ್ತರ ನೀಡಲಿದೆ.
ಇದು ರಾಜ್ಯ ಪೊಲೀಸ್ ಇಲಾಖೆಯ ಜನ್ನೇಹಿ ಸೇವೆಯ ಮುಂದುವರೆದ ಡಿಜಿಟೆಲ್ ಸಂವಹನ ಮಾಧ್ಯಮವಾಗಿದೆ.ರಾಜ್ಯ ಪೊಲೀಸ್ ಇಲಾಖೆಯು ಹೊಸದಾಗಿ ಅನುಷ್ಠಾನಗೊಳಿಸುತ್ತಿರುವ ಈ ತಂತ್ರಾಂಶವು ಜಿಪಿಟಿ ಮತ್ತು ಎಲ್ಎಲ್ಎಂ ಆಧಾರಿತ ಎಐ ತ್ರಂಜ್ಞಾನವು ಪೊಲೀಸ್ ತನಿಖೆ ನಡೆಸುವ ರೀತಿಯನ್ನು ಕ್ರಾಂತಿಕಾರಕಗೊಳಿಸುವ ಸಾಮರ್ಥ್ಯ ಹೊಂದಿದೆ.
ಈ ತಂತ್ರಾಂಶ ಬಳಕೆಯಿಂದ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ, ಅಪರಾಧಗಳ ತನಿಖೆಯಲ್ಲಿ ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ.
ಜತೆಗೆ ಪ್ರಕರಣದ ಸಂಕ್ಷಿಪ್ತ ಸಂಗತಿಗಳನ್ನ ಉಪ ಸಂಗತಿಗಳಾಗಿ ವಿಭಜಿಸುವ, ಪ್ರಕ್ರಿಯೆಯನ್ನು ಸ್ವಯಂಚಾಲಿತ ಗೊಳಿಸಕೊಳ್ಳುವ ಮೂಲಕ ಪ್ರಕರಣದ ವಿಶ್ಲೇಷಣೆಯಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತರಲಿದೆ. ಮಾನವ ಹಸ್ತಕ್ಷೇಪವಿಲ್ಲದೆ ಪ್ರಕರಣಕ್ಕೆ ಸಂಬಂಧಿಸಿದ ಕಾಯ್ದೆಗಳು ಮತ್ತು ವಿಭಾಗಗಳನ್ನು ಪರಿಣಾಮಕಾರಿಯಾಗಿ ಗುರುತಿಸಲಿದೆ.
ಆನ್ಲೈನ್ ಹಣಕಾಸು ವಹಿವಾಟುಗಳು ಹೆಚ್ಚಿರುವ ದಿನಗಳಲ್ಲಿ ಆರ್ಥಿಕ ಅಪರಾಧಗಳು ಸಹ ಹೆಚ್ಚಾಗುತ್ತಿವೆ. ಅಪಾರ ಪ್ರಮಾಣದ ದತ್ತಾಂಶವನ್ನು ವಿಶ್ಲೇಷಿಸಲು ಮತ್ತು ಅಪರಾಧಕ್ಕೆ ಸಂಬಂಧಪಟ್ಟ ಕುರುಹುಗಳನ್ನು ಗುರುತಿಸಲು, ಸ್ವಯಂಚಾಲಿತ ಮಾದರಿ ಗುರುತಿಸುವಿಕೆ, ಹಣಕಾಸು ವಹಿವಾಟಿನ ಪರಸ್ಪರ ಸಂಬಂಧಗಳ ವಿಶ್ಲೇಷಣೆಯಲ್ಲಿ ಈ ತಂತ್ರಾಂಶವು ಸಹಕಾರಿಯಾಗಲಿದೆ.
ಇಲಾಖೆಯಲ್ಲಿ ಈಗಾಗಲೇ ಸಂಗ್ರಹಿಸಿರುವ ದತ್ತಾಂಶಗಳನ್ನು ಬಳಸಿಕೊಂಡು ದತ್ತಾಂಶ ವಿಶ್ಲೇಷಣೆ, ದತ್ತಾಂಶ ದೃಶ್ಯೀಕರಣ ಮತ್ತು ಅಪರಾಧ ವಿಶ್ಲೇಷಣೆ ಮಾಡಲು ಅನುಕೂಲವಾಗುವಂತೆ ಪೊಲೀಸ್ ಡೇಟಾಥಾನ್-2024 ಅನ್ನು ಆಯೋಜಿಸಲಾಗಿದೆ.
ಈ ಡೇಟಾಥಾನ್ನಲ್ಲಿ ಭಾಗವಹಿಸಲು ಸೋಮವಾರದಿಂದ ನೋಂದಣಿ ಆರಂಭವಾಗಿದೆ. ಪೊಲೀಸ್ ಇಲಾಖೆಯ ಕರ್ತವ್ಯದಲ್ಲಿ ಪ್ರಾಣ ಕಳೆದುಕೊಂಡ ಪೊಲೀಸ್ ಅಧಿಕಾರಿ-ಸಿಬ್ಬಂದಿ ಕುಟುಂಬಗಳಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅನುಕಂಪ ನೇಮಕಾತಿಯನ್ನು ಪಾರದರ್ಶಕವಾಗಿ ಹಾಗೂ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಪೋರ್ಟಲ್ ರೂಪಿಸಲಾಗಿದೆ.
ಅದರಿಂದ ಅರ್ಜಿದಾರರು ಕಚೇರಿಗಳಿಗೆ ಅನವಶ್ಯಕವಾಗಿ ಭೇಟಿ ನೀಡುವ ಅವಧಿ ಕಡಿಮೆಯಾಗಲಿದ್ದು, ಮೃತ ನೌಕರನ ಕುಟುಂಬಕ್ಕೆ ನೆಮ್ಮದಿಯನ್ನು ನೀಡುವಲ್ಲಿ ನೆರವಾಗಲಿದೆ. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿದ ಕೂಡಲೇ ಮೊಬೈಲ್ಗೆ ಸಂದೇಶ ರವಾನೆಯಾಗುತ್ತದೆ.
ಮುಂದಿನ ಎಲ್ಲ ಹಂತಗಳ ನೇಮಕಾತಿ ಪ್ರಕ್ರಿಯೆಗಳ ಮಾಹಿತಿಯನ್ನು ಪೋರ್ಟಲ್ ಮುಖಾಂತರ ಪಡೆಯಬಹುದಾಗಿದೆ.ರಾಜ್ಯ ಪೊಲೀಸ್ ಇಲಾಖೆಯು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಅಭಿವೃದ್ಧಿಪಡಿಸಿರುವ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ದಳದ ಮೊಬೈಲ್ ಲ್ಯಾಬ್, ವಿಧಿ ವಿಜ್ಞಾನ ಮೊಬೈಲ್ ಲ್ಯಾಬ್ ವಾಹನ, ಮೊಬೈಲ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ವಾಹನ, ಗರುಡಪಡೆ ಕಾರ್ಯಕ್ಷಮತೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ವೀಕ್ಷಿಸಿದರು.