ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಕಳೆದ ಚುನಾವಣೆಯಲ್ಲಿ ಕಲಬುರಗಿಯಿಂದ ಗೆದ್ದಿದ್ದ ಬಿಜೆಪಿ ಸಂಸದ ಜಾಧವ್ ಜನರ ನಿರೀಕ್ಷೆಗೆ ತಕ್ಕಂತೆ ಕೆಲ್ಸ ಮಾಡಿಲ್ಲ, ಅವರ ಧೋರಣೆಗೆ ಜನರೇ ನಿರುತ್ಸಾಹಿಗಳಾಗಿದ್ದಾರೆ, ಈ ಬಾರಿ ನಿಮ್ಮ ಅಮೂಲ್ಯ ಮತ ಕಾಂಗ್ರೆಸ್ನ ಹುರಿಯಾಳು, ಅಭಿವೃದ್ಧಿ ಚಿಂತನೆಯ ರಾಧಾಕೃಷ್ಣ ಅವರಿಗೆ ಮೀಸಲಿಡಿ, ಆ ಮೂಲಕ ಕಲಬುರಗಿಯ ನಿಂತು ಹೋದ ಪ್ರಗತಿಗೆ ಚಾಲನೆ ಕೊಟ್ಟು ಅಭಿವೃದ್ಧಿಗೆ ಸಹಕರಿಸುವಂತೆ ಜನತೆಗೆ ಕೆಕೆಆರ್ಡಿಬಿ ಅಧ್ಯಕ್ಷ, ಜೇವರ್ಗಿ ಶಾಸಕ ಡಾ. ಅಜಯ್ ಸಿಂಗ್ ಕರೆ ನೀಡಿದರು.ಜೇವರ್ಗಿ ಹೊರವಲಯದಲ್ಲಿರುವ ಧರಂಸಿಂಗ್ ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್ ಹುರಿಯಾಳು ರಾಧಾಕೃಷ್ಣ ಪರವಾಗಿ ಮತ ಯಾಚಿಸಿ ಮಾತನಾಡಿದರು.
ಕಳೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಆದ ಸೋಲು ಅವರ ವೈಯಕ್ತಿಕ ಸೋಲಲ್ಲ ಅದು ಅಭಿವೃದ್ಧಿಗೆ ಆದ ಹಿನ್ನೆಡೆಯಾಗಿದೆ. ಈ ಸಲ ಯಾವ ಕಾರಣಕ್ಕೂ ಹಾಗಾಗಬಾರದು. ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಗೆಲ್ಲಿಸುವ ಮೂಲಕ ಕಲಬುರಗಿಯ ಸಮಗ್ರ ಅಭಿವೃದ್ಧಿಗೆ ಸಹಕಾರ ನೀಡಿ, ರಾಜ್ಯದಲ್ಲಿ ನಮ್ಮ ಸರಕಾರವಿದೆ, ಜಿಲ್ಲೆಯ ಸರ್ವತೋಮುಖ ಪ್ರಗತಿಗೆ ಇದು ಸಕಾಲವೆಂದರು.ಬಿಜೆಪಿಯವರ ಸುಳ್ಳು ಭರವಸೆಗಳನ್ನು ನಂಬಬೇಡಿ, ನಾವು ಅದಾಗಲೇ ಪಂಚ ಗ್ಯಾರಂಟಿಗಳ ಬಗ್ಗೆ ಮನೆ ಮನೆಗೂ ಪತ್ರ ತಲುಪಿಸಿ ಅವುಗಳನ್ನ ಅನುಷ್ಠಾನಕ್ಕೆ ತಂದಿದ್ದೇವೆ. ಲೋಕ ಸಭೆಯಲ್ಲೂ 25 ಗ್ಯಾರಂಟಿಗಳನ್ನು ಘೋಷಿಸಿ ನಿಮ್ಮ ಬದುಕಿನ ಏಳಿಗೆಗೆ ಬದ್ಧರಾಗಿದ್ದೇವೆಂದ ಡಾ. ಅಜಯ್ ಸಿಂಗ್ ಈ ಬಾರಿ ಕಲಬುರಗಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವಂತೆ ನಿಮ್ಮ ಅಮೂಲ್ಯ ಮತ ಚಲಾಯಿಸಿರಿ ಎಂದರು.
ಗೃಹಲಕ್ಷ್ಮೀ ಯೋಜನೆಯ ಮಾಸಿಕ ಹಣ ಮಹಿಳೆಯರು ಸಂಸಾರದ ವೆಚ್ಚಕ್ಕೆ, ಪೌಷ್ಟಿಕಾಂಶ ಆಹಾರ ಬಳಸಲು, ಮಕ್ಕಳ ಶಾಲೆ ಟ್ಯೂಷನ್ ಫೀಸಿಗೆ ಬಳಸುತ್ತಿದ್ದಾರೆ. ಹೀಗಿರುವಾಗ ಮಾಜಿ ಸಿಎಂ ಕುಮಾರಸ್ವಾಮಿ ಮಹಿಳೆಯರು ದಾರಿ ತಪ್ಪಿದ್ದಾರೆ ಎಂದು ಹೇಳಿ ಮಹಿಳೆಯರಿಗೆ ಅವಮಾನ ಮಾಡಿದ್ದಾರೆಂದು ಡಾ. ಅಜಯ್ ಸಿಂಗ್ ಟೀಕಿಸಿದರು.ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಪ್ರತಿ ಮಹಿಳೆಯರಿಗೆ ವಾರ್ಷಿಕ ರು.1 ಲಕ್ಷ ಪರಿಹಾರ ನೀಡಲಾಗುವುದು ಎಂದು ಹೇಳಿದ ಡಾ ಅಜಯ್ ಸಿಂಗ್ ಜಿಲ್ಲೆಯ ಅಭಿವೃದ್ದಿಗೆ ಪಣತೊಟ್ಟು ಕೆಲಸ ಧರಂ ಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರಂತೆ ರಾಧಾಕೃಷ್ಣ ಅವರು ಕೆಲಸ ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೇವರ್ಗಿ ಮತಕ್ಷೇದಿಂದ ಕನಿಷ್ಠ 10,000-15,000 ಸಾವಿರ ಮತಗಳ ಲೀಡ್ ಕೊಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಡಾ. ಅಜಯ್ ಸಿಂಗ್ ಹೇಳಿದರು.
ಯೋಗ್ಯರಿಗೆ ಮತ ಚಲಾಯಿಸಿ: ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ನಿಮ್ಮ ಒಂದು ಅಮೂಲ್ಯವಾದ ಮತದಿಂದ ರಾಷ್ಟ್ರದ ಭವಿಷ್ಯ ನಿರ್ಮಾಣವಾಗಲಿದೆ. ಯೋಗ್ಯರಿಗೆ ಮತ ಚಲಾಯಿಸುವ ಮೂಲಕ ರಾಷ್ಟ್ರದ ಸುಭದ್ರತೆಗೆ ಹಾಗೂ ಆರ್ಥಿಕ ಸದೃಢತೆಗೆ ಕೈಜೋಡಿಸಿ ಎಂದರು.ಬಿಜೆಪಿ ಅಧಿಕಾರದ ಹತ್ತು ವರ್ಷಗಳ ಅವಧಿಯಲ್ಲಿ ದಿನಬಳಕೆ ವಸ್ತುಗಳು, ಪೆಟ್ರೋಲ್ ಡಿಸೇಲ್, ರಸಗೊಬ್ಬರ ಹಾಗೂ ಇತ್ಯಾದಿ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದೆನಾ ಮೋದಿಯವರ ಅಚ್ಛಾದಿನ್ ? ರೈತರ ಆದಾಯ ದ್ವಿಗುಣ ಗೊಳಿಸುವ ಭರವಸೆ ನೀಡಿದ್ದರು. ಅವರು ನೀಡಿರುವ ಯಾವ ಭರವಸೆ ಈಡೇರಿಸಿದ್ದಾರೆ ಎಂದು ಪ್ರಶ್ನಿಸಿದ ಖರ್ಗೆ, ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಮನಮೋಹನ ಸಿಂಗ್ ರೂ 72,000 ಕೋಟಿ ರೈತರ ಸಾಲ ಮನ್ನಾ ಮಾಡಿದ್ದರು. ಬಿಜೆಪಿ ಸರ್ಕಾರ ರೈತರ ಸಾಲ ಮನ್ನಾ ಮಾಡಲು ಹಣದ ಕೊರತೆ ಕಾರಣ ಹೇಳಿ ಬಂಡವಾಳಶಾಯಿಗಳ 12 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ್ದಾರೆ ಎಂದರು.
ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಮಾತನಾಡಿ, ಅಜಯ್ ಸಿಂಗ್ ಅವರಿಗೆ ಆಶೀರ್ವಾದ ಮಾಡಿದಂತೆ ನನಗೂ ಆಶೀರ್ವಾದ ಮಾಡಿ ಸಂಸದನಾಗಿ ಆಯ್ಕೆ ಮಾಡಿ ಕಳಿಸಿದರೆ, ಜಿಲ್ಲೆಯ ಎಲ್ಲ ಜನಪ್ರತಿನಿದಿಗಳೊಂದಿಗೆ, ಶಾಸಕರೊಂದಿಗೆ ಚರ್ಚೆನಡೆಸಿ ಅಭಿವೃದ್ದಿ ಕೆಲಸ ಮಾಡಲಿದ್ದೇನೆ ಎಂದರು.ವೇದಿಕೆಯ ಮೇಲೆ ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಶಾಸಕ ಅಲ್ಲಮಪ್ರಭು ಪಾಟೀಲ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು, ಕೇದಾರಲಿಂಗಯ್ಯ ಮಠಪತಿ, ಶಿವಶರಣಪ್ಪ ಕೋಬಾಳ ಸೇರಿದಂತೆ ಇತರರು ಇದ್ದರು.