ಸಾರಾಂಶ
ಹತ್ಯೆಗೀಡಾದ ರಹ್ಮಾನ್ರ ತಂದೆ ಅಬ್ದುಲ್ ಖಾದರ್, ಸಹೋದರ ಹನೀಫ್ ಮತ್ತಿತರರನ್ನು ಬಡಗಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ಆಳ್ವ ಗುಂಡಾಲ ನೇತೃತ್ವದ ನಿಯೋಗದಲ್ಲಿದ್ದ ಮುಖಂಡರು ಭೇಟಿ ಮಾಡಿ ಸಾಂತ್ವನ ಹೇಳಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ದುಷ್ಕರ್ಮಿಗಳಿಂದ ಇತ್ತೀಚೆಗೆ ಹತ್ಯೆಗೀಡಾದ ಕೊಳತ್ತಮಜಲಿನ ಅಬ್ದುಲ್ ರಹಿಮಾನ್ ಮನೆಗೆ ಹಿಂದೂ ಸಮುದಾಯದ ಮುಖಂಡರ ನಿಯೋಗ ಭಾನುವಾರ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದೆ.ಹತ್ಯೆಗೀಡಾದ ರಹ್ಮಾನ್ರ ತಂದೆ ಅಬ್ದುಲ್ ಖಾದರ್, ಸಹೋದರ ಹನೀಫ್ ಮತ್ತಿತರರನ್ನು ಬಡಗಬೆಳ್ಳೂರು ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಪ್ರಕಾಶ್ ಆಳ್ವ ಗುಂಡಾಲ ನೇತೃತ್ವದ ನಿಯೋಗದಲ್ಲಿದ್ದ ಮುಖಂಡರು ಭೇಟಿ ಮಾಡಿ ಸಾಂತ್ವನ ಹೇಳಿದರು.ರಹಿಮಾನ್ ಸ್ಥಳೀಯವಾಗಿ ಎಲ್ಲಾ ಸಮುದಾಯದವರ ಜೊತೆ ಆತ್ಮೀಯವಾಗಿ ಸ್ನೇಹದಿಂದ ಇದ್ದ ವಿಚಾರ, ಜಾತಿಮತದ ಅಂತರವಿಲ್ಲದೆ ಎಲ್ಲರಿಗೆ ನೆರವಾಗುತ್ತಿದ್ದ ಎಂದು ರಹಿಮಾನ್ ಗುಣನಡತೆಯ ಬಗ್ಗೆ ಇದ್ದ ಅಭಿಮಾನ ತಿಳಿಸಿದ ಹಲವು ಪ್ರಮುಖರು, ಆಗಬಾರದ್ದು ಆಗಿ ಹೋಗಿದೆ, ನಿಮ್ಮ ನೋವಿನಲ್ಲಿ ನಾವೂ ಸಹಭಾಗಿಗಳು, ನಾವುನಿಮ್ಮೊಂದಿಗೆ ಇದ್ದೇವೆ ಎಂದು ಸಾಂತ್ವನ ಹೇಳಿದರು.
ಸ್ಥಳೀಯ ಪ್ರಮುಖರಾದ ಬಾಬಣ್ಣ ನಡ್ಯೋಡಿ, ಮೋಹನ್ ಶೆಟ್ಟಿ ನಡ್ಯೋಡಿ, ಶಾಕೇತ್ ಭಂಡಾರಿ ಪರಕೂರು, ಕೃಷ್ಣ ಶೆಟ್ಟಿ ಗುಂಡಾಲ, ದೇವಪ್ಪ ಪೂಜಾರಿ ಬಾಳಿಕೆ ಸಹಿತ ಸುಮಾರು 25ಕ್ಕೂ ಅಧಿಕ ಮಂದಿ ನಿಯೋಗದಲ್ಲಿದ್ದರು.