ಸಾರಾಂಶ
ಕನ್ನಡಪ್ರಭ ವಾರ್ತೆ ಸಕಲೇಶಪುರ
ಹಿಂದೂ ಸಮಾಜ ಈ ಹಿಂದಿಗಿಂತಲೂ ಜಾಗೃತವಾಗಿದ್ದರು ಸಹ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಆದರೆ ಸವಾಲುಗಳನ್ನು ಎದುರಿಸಿ ಗಟ್ಟಿಯಾಗಿ ನಿಲ್ಲುವ ಶಕ್ತಿ ಹಿಂದೂ ಸಮಾಜಕ್ಕಿದೆ ಎಂದು ಪ್ರಾಂತ ಧರ್ಮ ಪ್ರಸಾರ ಪ್ರಮುಖ್ ಸುನೀಲ್ ಕಾರ್ಕಳ ಹೇಳಿದರು.ಪಟ್ಟಣದ ಗುರುವೇಗೌಡ ಕಲ್ಯಾಣಮಂಟಪದ ಆವರಣದಲ್ಲಿ ತಾಲೂಕು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ವತಿಯಿಂದ ಗುರುವಾರ ಸಂಜೆ ಆಯೋಜಿಸಲಾಗಿದ್ದ ದತ್ತ ಶೋಭಾಯಾತ್ರೆ ಹಾಗೂ ಸಭಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ದತ್ತಪೀಠದ ಕುರಿತು ಸ್ಕಂದ ಪುರಾಣದಲ್ಲೇ ಉಲ್ಲೇಖವಾಗಿದ್ದು, ಆದರೆ ಅಲ್ಲಿ ಸುಳ್ಳಿನ ಇತಿಹಾಸ ಸೃಷ್ಟಿ ಮಾಡಿ ಆ ಜಾಗವನ್ನು ಮುಸ್ಲಿಂರು ತಮ್ಮ ವಶಕ್ಕೆ ತೆಗೆದುಕೊಳ್ಳುವ ಪಿತೂರಿ ನಡೆಸಿದರು. ಆದರೆ ಹಿಂದೂ ಸಂಘಟನೆಗಳ ಹೋರಾಟದಿಂದ ಜಾಗ ಉಳಿದಿದ್ದು ಮುಂದಿನ ದಿನಗಳಲ್ಲಿ ಅಯೋಧ್ಯೆಯಂತೆ ದತ್ತಪೀಠವನ್ನು ಸಂಪೂರ್ಣವಾಗಿ ಹಿಂದೂಗಳ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ಹಿಂದೂ ಸಂಘಟನೆಗಳ ಹೋರಾಟದಿಂದ ಅಲ್ಲಿ ಹಿಂದೂ ಅರ್ಚಕರ ನೇಮಕವಾಗಿದ್ದು ಇದರಿಂದ ಅಲ್ಲಿ ದೀಪ ಹಚ್ಚಲಾಗುತ್ತಿದೆ. ಹಿಂದೂಗಳ ಮೇಲೆ ೧೫೦೦ ವರ್ಷಗಳಿಂದ ಅನ್ಯಮತೀಯರು ದಾಳಿ ಮಾಡಿದರೂ ಸಹ ಹಿಂದುತ್ವವನ್ನು ಅಳಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ದೇಶದಲ್ಲಿ ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಭಯೋತ್ಪಾದನೆಗಳು ನಡೆಯುತ್ತಿದ್ದು ಜೊತೆಗೆ ಮತಾಂತರ ಸಹ ಮಾಡಲಾಗುತ್ತಿದೆ. ಈ ಎಲ್ಲಾ ಸವಾಲುಗಳನ್ನು ಎದುರಿಸಬೇಕಾದ ಅನಿವಾರ್ಯತೆ ಇಂದು ಹಿಂದೂ ಸಮಾಜಕ್ಕಿದೆ. ಬಾಂಗ್ಲಾ, ಶ್ರೀಲಂಕಾ, ಪಾಕಿಸ್ತಾನ, ಬರ್ಮಾ ದೇಶಗಳಲ್ಲಿ ವಿಪರೀತ ಇಸ್ಲಾಮೀಕರಣದಿಂದ ಹಿಂದೂಗಳು ಅಲ್ಲಿ ಬದುಕಲು ಅತ್ಯಂತ ಕಷ್ಟಕರವಾಗಿದೆ. ಆದರೆ ಭಾರತದಲ್ಲಿ ಮಾತ್ರ ಅನ್ಯ ಧರ್ಮೀಯರು ಯಾವುದೇ ಸಮಸ್ಯೆಯಿಲ್ಲದೆ ಹಿಂದೂಗಳ ಮೇಲೆಯೇ ದಬ್ಬಾಳಿಕೆ ಮಾಡಿಕೊಂಡು ಬದುಕುತ್ತಿದ್ದಾರೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಒಗ್ಗೂಡಬೇಕಾದ ಅವಶ್ಯಕತೆಯಿದೆ ಎಂದರು.ತಾಲೂಕಿನ ಚಂಗಡಿಹಳ್ಳಿ ಸಮೀಪದ ಹೆಗ್ಗಡಿಹಳ್ಳಿ ಮಠದ ಸ್ವಾಮೀಜಿಗಳು ಆಶೀರ್ವಚನ ನೀಡಿ, ಪ್ರಪಂಚದಲ್ಲಿ ಪವಾಡಗಳು ನಡೆಯುವುದು ಭರತ ಭೂಮಿಯಲ್ಲಿ ಮಾತ್ರ, ಹಿಂದೂ ಧರ್ಮದ ಮೇಲೆ ನಿರಂತರ ದಾಳಿಗಳು ನಡೆದರೂ ಸಹ ಧರ್ಮವನ್ನು ಅಳಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಧರ್ಮದ ಉಳಿವು ಮಾತೆಯರ ಮೇಲಿದೆ. ಮಾತೆಯರು ಮಕ್ಕಳಿಗೆ ವಿದೇಶಿ ಸಂಸ್ಕೃತಿಯನ್ನು ಕಲಿಸದೆ ಧರ್ಮದ ಆಧಾರದಲ್ಲಿ ಸಂಸ್ಕಾರ ಕೊಟ್ಟಲ್ಲಿ ಮಾತ್ರ ಧರ್ಮದ ಉಳಿವು ಸಾಧ್ಯವಾಗುತ್ತದೆ. ದಿನನಿತ್ಯ ಕನಿಷ್ಠ ಅರ್ಧಗಂಟೆಗಳ ಕಾಲ ಮಕ್ಕಳಿಗೆ ಪೋಷಕರು ಧರ್ಮದ ಬೋಧನೆ ಮಾಡಬೇಕು ಎಂದು ಹೇಳಿದರು. ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದ ಆವರಣದಿಂದ ಸಭಾ ಕಾರ್ಯಕ್ರಮದ ವೇದಿಕೆಯವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆ ಸಂಪೂರ್ಣ ಕೇಸರಿಮಯವಾಗಿದ್ದು, ನೂರಾರು ಮಂದಿ ಯುವಕರು ವಾದ್ಯವೃಂದಕ್ಕೆ ನರ್ತನ ಮಾಡುತ್ತಾ ಕೇಸರಿ ಧ್ವಜಗಳನ್ನು ಹಿಡಿದು ಸಾಗಿದ್ದು ನೋಡುಗರ ಗಮನ ಸೆಳೆಯಿತು. ಉಪ್ಪಿನಂಗಡಿಯ ಸಹಸ್ರ ಚಂಡೆ ಬಳಗ ಹಾಗೂ ಕುಣಿತಾ ಭಜನಾ ತಂಡದ ಪ್ರದರ್ಶನ ನೋಡುಗರ ಗಮನ ಸೆಳೆಯಿತು.ಕಾರ್ಯಕ್ರಮದ ಅಧಕ್ಷತೆಯನ್ನು ಉದ್ಯಮಿ ಸಂತೋಷ್ ಹಾಗೂ ಬಿರಡಹಳ್ಳಿ ರೈಸ್ ಮಿಲ್ ಮಾಲೀಕ ಕೃಷ್ಣಪ್ರಸಾದ್ ವಹಿಸಿದ್ದರು. ವೇದಿಕೆಯಲ್ಲಿ ಸಂಘಟನೆಯ ಪ್ರಮುಖರಾದ ಹರೀಶ್ ಕರಡಿಗಾಲ, ಬಾಲಕೃಷ್ಣ ಬಿರಡಹಳ್ಳಿ, ಲೋಹಿತ್ ಯಡವಾರಹಳ್ಳಿ, ನವೀನ್ ಹೊಸಕೋಟೆ, ವಿಜಯ್ ಕುಮಾರ್, ಕಿಶೋರ್ ಶೆಟ್ಟಿ, ರವಿತೇಜಾ, ಸುರೇಶ್, ಷಣ್ಮುಖ, ಶ್ರೀಜಿತ್ ಹೆಬ್ಬಸಾಲೆ, ಶಶಿ ನಡೆಹಳ್ಳಿ ಮುಂತಾದವರು ಹಾಜರಿದ್ದರು.