ಆಮಿಷ ಹಾಗೂ ಪ್ರೀತಿಯ ಹೆಸರಿನಲ್ಲಿ ಅಮಾನವೀಯ ಚಟುವಟಿಕೆಗಳಿಗೆ ಹಾಗೂ ಮತಾಂತರಕ್ಕೆ ಹಿಂದೂ ಸಮಾಜದ ಹೆಣ್ಣುಮಕ್ಕಳು ಬಲಿಯಾಗಬಾರದು ಎಂದು ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಉಪಾಧ್ಯಕ್ಷ ಗಂಗಾಧರ ಹೆಗಡೆ ಎಚ್ಚರಿಕೆ ನೀಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಆಮಿಷ ಹಾಗೂ ಪ್ರೀತಿಯ ಹೆಸರಿನಲ್ಲಿ ಅಮಾನವೀಯ ಚಟುವಟಿಕೆಗಳಿಗೆ ಹಾಗೂ ಮತಾಂತರಕ್ಕೆ ಹಿಂದೂ ಸಮಾಜದ ಹೆಣ್ಣುಮಕ್ಕಳು ಬಲಿಯಾಗಬಾರದು ಎಂದು ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಉಪಾಧ್ಯಕ್ಷ ಗಂಗಾಧರ ಹೆಗಡೆ ಎಚ್ಚರಿಕೆ ನೀಡಿದರು.

ನಗರದ ನದ್ದೂರು ಸದಾನಂದ ಸ್ವಾಮಿಗಳ ಮಠದ ಆವರಣದಲ್ಲಿ ವಿಶ್ವ ಹಿಂದೂ ಪರಿಷತ್‌ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ವಿಶ್ವ ಹಿಂದೂ ಪರಿಷತ್‌ ಸ್ಥಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮಾಜದಲ್ಲಿ ವ್ಯವಸ್ಥಿತವಾಗಿ ಧರ್ಮ ಪರಿವರ್ತನೆ ಹಾಗೂ ಮತಾಂತರ ನಡೆಯುತ್ತಿದೆ. ಇವುಗಳ ಬಗ್ಗೆ ಸದಾ ಎಚ್ಚರದಿಂದಿರಬೇಕು ಎಂದರು.

ಸ್ವದೇಶದಲ್ಲಿ ಜನ್ಮ ತಾಳಿದರೂ ಹಿಂದೂ ದೇವತೆಗಳನ್ನು ಪೂಜಿಸಲು ಭಾರಿ ಭದ್ರತೆಯ ನಡುವೆ ದೇವಸ್ಥಾನಕ್ಕೆ ಹೋಗಬೇಕಾದ ಪರಿಸ್ಥಿತಿ ಬಂದಿರುವುದು ಆತಂಕದ ವಿಷಯವಾಗಿದೆ. ತಮ್ಮದೇ ದೇವರ ದರ್ಶನಕ್ಕಾಗಿ ಭದ್ರತಾ ಸಿಬ್ಬಂದಿಯ ಹಸ್ತಕ್ಷೇಪ ಅಪೇಕ್ಷಿಸಬೇಕಾದ ಸ್ಥಿತಿ ಇರುವುದು ಹಿಂದೂ ಸಮಾಜಕ್ಕೆ ಹಿನ್ನಡೆಯ ಸಂಕೇತ. ಇಂತಹ ಪ್ರತಿಕೂಲ ಸನ್ನಿವೇಶಗಳಲ್ಲಿ ಹಿಂದೂ ಸಮಾಜವು ಎಚ್ಚೆತ್ತುಕೊಂಡು ತಮ್ಮ ಧಾರ್ಮಿಕ ಆಚರಣೆಗಳನ್ನು ಉಳಿಸಿಕೊಳ್ಳಲು ಒಗ್ಗಟ್ಟಿನಿಂದ ಹೋರಾಡಬೇಕಾದ ಅಗತ್ಯವಿದೆ ಎಂದರು.

ಹಾರಕೂಡ ಶ್ರೀಗಳು ಮಾತನಾಡಿ, ಹಿಂದೂ ಧರ್ಮ ಪ್ರಚಾರ ಕಾರ್ಯಕ್ರಮಗಳು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನಡೆಸಿ ನಮ್ಮ ದೇಶದ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಅವಶ್ಯಕತೆ ಇದೆ ಎಂದರು.

ಈ ಸಂದರ್ಭದಲ್ಲಿ ಮಧುಸೂಧಾನಂದ ಸ್ವಾಮಿ, ಗವಿಮಠದ ಡಾ. ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು ಮಾತನಾಡಿದರು. ಮಧುಕರ ಮಹಾಜನ್‌, ವಿಎಚ್‌ಪಿ ಉತ್ತರ ಪ್ರಾಂತದ ಕಾರ್ಯದರ್ಶಿ ಶಿವಕುಮಾರ ಬೋಳೆಶೆಟ್ಟಿ, ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ, ವಿನೋದ ಬಡಗೇಕರ್‌, ಸಂಜು ಎಕ್ಕಂಬೆ, ಪ್ರಮೋದ ಠಾಕೂರ, ಶಂಕರ ಪವಾರ, ಶಾಂತವೀರ ಸ್ವಾಮಿ, ವಿಕಾಸ ಸಾಳಂಕೆ, ಪ್ರಕಾಶ ನೀರಾ, ರವಿ ನಾವದಗಿ, ಸಚಿನ ಗರಡ ಇತರರಿದ್ದರು.