ಕನ್ನಡಪ್ರಭ ವಾರ್ತೆ ಮಡಿಕೇರಿ
ನಾಪೋಕ್ಲುವಿನಲ್ಲಿ ಶುಕ್ರವಾರ ಹಿಂದೂ ಯುವಕನ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದ್ದು, ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಕೊಡಗು ಎಸ್ಪಿ ಬಿಂದುಮಣಿ ಹೇಳಿದ್ದಾರೆ. ನಾಪೋಕ್ಲುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣ ಸಂಬಂಧ ಪೊಲೀಸರು ವಶಕ್ಕೆ ಪಡೆದ ನಾಪೋಕ್ಲುವಿನ ಸುಹೇಲ್, ಸಿದ್ದೀಕ್, ನಾಫಿ, ರಾಶಿದ್ ಎಂಬ ಆರೋಪಿಗಳನ್ನು ವಿರಾಜಪೇಟೆ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಮಾಹಿತಿ ನೀಡಿದರು.ಹಿಂಸಾತ್ಮಕ ಕೃತ್ಯ ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಈ ಸಂದರ್ಭ ಎಚ್ಚರಿಕೆ ನೀಡಿದರು.ಬಲ್ಲಮಾವಟಿಯಲ್ಲಿ ಹಮ್ಮಿಕೊಳ್ಳಲಾಗಿರುವ ಹಿಂದೂ ಸಂಗಮ ಸಮಾವೇಶದ ಸಂಪೂರ್ಣ ಮಾಹಿತಿ ಪಡೆದು ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ಈ ರೀತಿಯ ಘಟನೆ ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ ಎಂದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ಕರೆ ನೀಡಿದರು. ಹಿಂಸಾತ್ಮಕ ಕೃತ್ಯಗಳನ್ನು ನಡೆಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಎಂದು ಸುದ್ದಿಗಾರರ ಜೊತೆ ಮಾತನಾಡುತ್ತ ಎಚ್ಚರಿಕೆ ನೀಡಿದರು.
ಹಲ್ಲೆ ಪ್ರಕರಣ ಸಂಬಂಧ ಶನಿವಾರ ಜಿಲ್ಲಾ ಎಸ್ಪಿ ಬಿಂದುಮಣಿ ಅವರು ಖುದ್ದು ನಾಪೋಕ್ಲುವಿಗೆ ಭೇಟಿ ನೀಡಿ, ಬಲ್ಲಮಾವಟಿಯಲ್ಲಿ ಹಮ್ಮಿಕೊಳ್ಳಲಾಗಿರುವ ಹಿಂದೂ ಸಂಗಮ ಸಮಾವೇಶದ ಸಂಪೂರ್ಣ ಮಾಹಿತಿ ಪಡೆದು ಬಿಗಿ ಬಂದೋಬಸ್ತ್ ಗೆ ಸೂಚನೆ ನೀಡಿದರು.