ಹೂವಿನಹಡಗಲಿ: ಈ ದೇಶದ ಮೇಲೆ ಸಾಕಷ್ಟು ಪರಕೀಯರು ದಾಳಿ ಮಾಡಿದ್ದಾರೆ. ಆದರೂ ಹಿಂದೂಗಳು ಎಂದಿಗೂ ಯಾರ ಮೇಲೆ ದಾಳಿ ಮಾಡಿದವರಲ್ಲ. ಆದರೂ ನಮ್ಮ ಧರ್ಮ ಸಂಸ್ಕೃತಿಯನ್ನು ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್‌ ಉತ್ತರ ಕರ್ನಾಟಕ ಪ್ರಾಂತದ ಸಂಪರ್ಕ ಪ್ರಮುಖ ಸುಧೀರ ಸಿಂಹ ಘೋರ್ಪಡೆ ಹೇಳಿದರು.ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆರ್‌ಎಸ್‌ಎಸ್‌ನಿಂದ ಆಯೋಜಿಸಿದ್ದ ಹಿಂದೂ ಸಂಮ್ಮೇಳನದಲ್ಲಿ ಮಾತನಾಡಿದ ಅವರು, ಹಿಂದೂಗಳು ಎಲ್ಲರೊಂದಿಗೆ ಸಂಯಮದಿಂದ ವರ್ತಿಸಿ, ಎಲ್ಲರೊಂದಿಗೆ ಒಂದಾಗಿ ಬದುಕುವುದನ್ನು ನಮ್ಮ ಋುಷಿಮುನಿಗಳು ಸಾರಿದ್ದಾರೆ. ಇದರಿಂದ ಈ ದೇಶದಲ್ಲಿ ಸಂಪ್ರದಾಯ, ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಲು ಸಹಕಾರಿಯಾಗಿದೆ. ನಮ್ಮ ದೇಶಕ್ಕೆ ವಲಸೆ ಬಂದ ವಿದೇಶಿಗರು ನಮ್ಮ ಸಂಸ್ಕೃತಿಯ ಮೇಲೆ ಸಾಕಷ್ಟು ದಾಳಿ ಮಾಡಿದ್ದಾರೆ. ಆದರೆ ಅದರಿಂದ ನಾವು ಧೃತಿಗೆಡದೇ ನಮ್ಮ ಹಿಂದೂ ಸಮಾಜ ಎಲ್ಲಿಯೂ ಸೋತಿಲ್ಲ. ನಮ್ಮ ಪೂರ್ವಜನರು ಜಗತ್‌ ಕಲ್ಯಾಣ ಸಾಕಷ್ಟು ಶ್ರಮಿಸಿದ್ದಾರೆ. ಪ್ರಪಂಚದಲ್ಲಿ ಇಂದಿಗೂ ಕೂಡ ಹಿಂದೂ ಪರಂಪರೆ ನಶಿಸದೇ ಉಳಿದಿದೆ ಎಂದರು.

ನಮ್ಮ ಮುಂದಿನ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ಮರೆಯಬಾರದು, ವಿದೇಶಿ ಸಂಸ್ಕೃತಿಯನ್ನು ಪೂರ್ಣ ಪ್ರಮಾಣದಲ್ಲಿ ಅಪ್ಪಿಕೊಳ್ಳದೇ ಅದರಿಂದ ದೂರ ಉಳಿದು, ನಮ್ಮ ತನವನ್ನು ನಾವು ಉಳಿಸಿಕೊಳ್ಳಬೇಕಿದೆ ಎಂದರು.

ಸಮ್ಮೇಳನ ಸಮಿತಿ ಅಧ್ಯಕ್ಷ ಎಂ.ಪರಮೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ನಾವು ಸಮ್ಮೇಳನ್ನು ಮಾಡಬೇಕಾದ ಅನಿವಾರ್ಯತೆ ಇದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣನಾಯ್ಕ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಹಿಂದೂ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷ ಬೀರಬ್ಬಿ ಬಸವರಾಜ, ಕಾರ್ಯಾಧ್ಯಕ್ಷ ಕೆ.ಮುದುಕಪ್ಪ, ಉಪಾಧ್ಯಕ್ಷ ಎಚ್.ಪೂಜಪ್ಪ, ಕಾರ್ಯದರ್ಶಿ ಡಾ.ಲಕ್ಷ್ಮಣ, ಖಜಾಂಚಿ ಮಂಜುನಾಥ ಜೈನ್ ಸೇರಿದಂತೆ ತಾಲೂಕಿನ ವಿವಿಧ ಮಠಗಳ ಮಠಾಧೀಶರು ಹರಗುರು ಚರಮೂರ್ತಿಗಳು ಉಪಸ್ಥಿತರಿದ್ದರು.