ಮಂಗಳೂರಿನ ಸ್ವರಲಯ ಸಾಧನಾ ಫೌಂಡೇಷನ್‌ ವತಿಯಿಂದ ಬುಧವಾರ ಇಲ್ಲಿನ ಪುರಭವನದಲ್ಲಿ ನಡೆದ ‘ಸ್ವರ ಸಂಕ್ರಾಂತಿ’ ಉತ್ಸವದಲ್ಲಿ ಹಿಂದೂಸ್ತಾನಿ ಗಾಯಕ, ಪಂಡಿತ್ ಅಜೋಯ್ ಚಕ್ರವರ್ತಿ ಅವರಿಗೆ ‘ಸ್ವರ ರತ್ನ’ ಪ್ರಶಸ್ತಿ

ಕನ್ನಡಪ್ರಭ ವಾರ್ತೆ ಮಂಗಳೂರು

ಭಾರತೀಯ ಕಲೆಗಳಲ್ಲಿ ಸಿಗುವ ಏಕಾಗ್ರತೆ ಬೇರೆ ಯಾವುದರಲ್ಲೂ ಸಿಗುವುದಿಲ್ಲ, ಹಾಗಾಗಿ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮುಂದುವರಿಸಲು ವಿಶೇಷ ಒತ್ತು ನೀಡಬೇಕು ಎಂದು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಹೇಳಿದರು.

ಮಂಗಳೂರಿನ ಸ್ವರಲಯ ಸಾಧನಾ ಫೌಂಡೇಷನ್‌ ವತಿಯಿಂದ ಬುಧವಾರ ಇಲ್ಲಿನ ಪುರಭವನದಲ್ಲಿ ನಡೆದ ‘ಸ್ವರ ಸಂಕ್ರಾಂತಿ’ ಉತ್ಸವದಲ್ಲಿ ಹಿಂದೂಸ್ತಾನಿ ಗಾಯಕ, ಪಂಡಿತ್ ಅಜೋಯ್ ಚಕ್ರವರ್ತಿ ಅವರಿಗೆ ‘ಸ್ವರ ರತ್ನ’ ಪ್ರಶಸ್ತಿ ನೀಡಿ ಗೌರವಿಸಿ ಅವರು ಮಾತನಾಡಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪಂಡಿತ್ ಅಜೋಯ್ ಚಕ್ರವರ್ತಿ, ಶಾಸ್ತ್ರೀಯ ಸಂಗೀತದಲ್ಲಿ ಸಾಹಿತ್ಯ ಅತ್ಯಂತ ಮುಖ್ಯ. ಉತ್ತರ ಭಾರತದ ಭಾಗಗಳಲ್ಲಿ ರಾಗ ಪ್ರಧಾನವಾಗಿ ಸಾಹಿತ್ಯ ಹಿಂದೆ ಸರಿದಿದೆ. ಆದರೆ ದಕ್ಷಿಣ ಭಾರತದಲ್ಲಿ ಇಂದಿಗೂ ಸಾಹಿತ್ಯಕ್ಕೆ ರಾಗದಷ್ಟೇ ಪ್ರಾಧಾನ್ಯತೆ ಇದೆ. ಶಾಸ್ತ್ರೀಯ ಗಾಯನಕ್ಕೆ ಇದು ಹೆಚ್ಚು ಅನ್ವಯವಾಗುತ್ತದೆ. ವಾದ್ಯಗಳಲ್ಲಿ ಈ ಎಚ್ಚರ ಅಷ್ಟಾಗಿ ಅಗತ್ಯವಿಲ್ಲ ಎಂದರು.ಉಸ್ತಾದ್ ರಫೀಕ್ ಖಾನ್, ವಿದ್ವಾನ್ ಕಲ್ಮಾಡಿ ಸದಾಶಿವ ಆಚಾರ್ ಕಾಸರಗೋಡು, ವಿದ್ವಾನ್ ಉಮಾ ಶಂಕರಿ ಮಣಿಪಾಲ, ವಿದ್ವಾನ್ ಯತಿರಾಜ ಆಚಾರ್ಯ ಮಂಗಳೂರು ಅವರಿಗೆ ಸ್ವರ ಸಾಧನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ನಿಡಸೋಸಿ ದುರದುಂಡೇಶ್ವರ ಮಠದ ಶ್ರೀನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನದಲ್ಲಿ, ಭಾರತೀಯ ಸಂಸ್ಕೃತಿ ಉಳಿಸಲು ಇಂತಹ ಸಂಗೀತ ಕಾರ್ಯಕ್ರಮಗಳ ಬಗ್ಗೆ ಆಸಕ್ತಿ ಬೆಳೆಸುವುದು ಮುಖ್ಯ. ಈ ಮೂಲಕ ಮಂಗಳೂರಿನಲ್ಲಿ ಸಂಗೀತ ಕ್ರಾಂತಿ ಆಗುತ್ತಿದ್ದು, ಸಂಗೀತವನ್ನು ದೈವತ್ವಕ್ಕೆ ಏರಿಸುವ ಸಿದ್ಧಿ ಪಂಡಿತ್‌ ಅಜೋಯ್‌ ಚಕ್ರವರ್ತಿಗೆ ಇದೆ ಎಂದರು.

ಸ್ವರಲಯ ಫೌಂಡೇಷನ್ ಮಾರ್ಗದರ್ಶಕ ವಿದ್ವಾನ್ ವಿಠಲ ರಾಮಮೂರ್ತಿ, ಅಧ್ಯಕ್ಷ ಶ್ರೀಕೃಷ್ಣ ಎನ್, ಉಪಾಧ್ಯಕ್ಷ ರಮೇಶ್ ಕೆ.ಜಿ, ಟ್ರಸ್ಟಿ ವಿಶ್ವಾಸ್‌ಕೃಷ್ಣ ಎಚ್, ಕೋಶಾಧಿಕಾರಿ ಶ್ರೇಷ್ಠಲಕ್ಷ್ಮಿ ಇದ್ದರು.ಸ್ವರಲಯ ಫೌಂಡೇಷನ್ ಉಪ ಕಾರ್ಯದರ್ಶಿ ಆರ್‌.ಸಿ.ಭಟ್‌ ವಂದಿಸಿದರು. ಪ್ರದೀಪ್‌ ಬಡೆಕ್ಕಿಲ ನಿರೂಪಿಸಿದರು.

ಬಳಿಕ ರಾಗ್ ಮಧುವಂತಿಯೊಂದಿಗೆ ಸಂಗೀತ ಕಛೇರಿ ಆರಂಭಿಸಿದ ಪಂಡಿತ್‌ ಅಜೋಯ್‌ ಚಕ್ರವರ್ತಿ ಅವರು, ರಾಗಗಳಿಗೆ ಸಂಬಂಧಿಸಿದ ಮಾಹಿತಿಯೊಂದಿಗೆ ಗಾಯನ ಪ್ರಸ್ತುತಪಡಿಸಿದರು. ಅಜೋಯ್ ಚಕ್ರವರ್ತಿ ಅವರ ಗಾಯನದ ಸುಧೆ ಕಲಾರಸಿಕರನ್ನು ರಂಜಿಸಿತು.