ಕುಕನೂರು: ಹಿಂದುತ್ವದಿಂದ ಭವ್ಯ ಭಾರತ ನಿರ್ಮಿಸಲು ಸಾಧ್ಯ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಉತ್ತರ ಮತ್ತು ದಕ್ಷಿಣ ಪ್ರಾಂತ ಪ್ರಚಾರಕ ಅರುಣಕುಮಾರ ಹೇಳಿದರು.

ತಾಲೂಕಿನ ಇಟಗಿ ಗ್ರಾಮದಲ್ಲಿ ಭಾನುವಾರ ಜರುಗಿದ ಹಿಂದೂ ಸಮಾಜೋತ್ಸವದಲ್ಲಿ ಮಾತನಾಡಿದ ಅವರು, ಭವ್ಯ ರಾಮಮಂದಿರ ನಿರ್ಮಾಣ ಆದಂತೆ ಭವ್ಯ ಭಾರತ ನಿರ್ಮಾಣ ಆಗಬೇಕು. ಕುಟುಂಬಗಳಲ್ಲಿ ಮೌಲ್ಯ ಕುಸಿಯುತ್ತಿದೆ. ಪ್ರತಿ ಕುಟುಂಬದ ಮೌಲ್ಯ ಹೆಚ್ಚಳವಾಗುವುದರಿಂದ ಭಾರತದ ಮೌಲ್ಯ ಹೆಚ್ಚುತ್ತದೆ. ಸಮಾಜೋಭಿವೃದ್ಧಿ ಕಾರ್ಯ ಮಾಡಬೇಕಿದೆ. ನಾವು ಯಾರು ಎಂಬುದನ್ನು ಅರಿಯಬೇಕು. ಭಾರತ ಹಿಂದೂ ರಾಷ್ಟ್ರ. ಹಿಂದೂ ಸಂಸ್ಕೃತಿ ಎಂದಿಗೂ ಮರೆಯಬಾರದು. ಹಿಂದೂ ಧರ್ಮ ತಳಹದಿ ಮೇಲೆ ಭಾರತದ ದಿವ್ಯತೆ ನಿಂತಿದೆ. ಅದನ್ನು ಮತ್ತಷ್ಟು ಪ್ರಜ್ವಲಿಸುವಂತೆ ಮಾಡಬೇಕು ಎಂದರು.

ಕುಕನೂರಿನ ಅನ್ನದಾನೀಶ್ವರ ಶಾಖಾಮಠದ ಶ್ರೀ ಮಹಾದೇವ ಸ್ವಾಮೀಜಿ ಮಾತನಾಡಿ, ಧರ್ಮದ ಆಚರಣೆ ಸದಾ ಜರುಗುತ್ತಿರಬೇಕು. ಹಿಂದೂ ಧರ್ಮ ಮನುಷ್ಯ ನಿರ್ಮಾಣದ ಧರ್ಮ. ಮಾನವೀಯ ಮೌಲ್ಯದ ಕೈಗನ್ನಡಿ. ಹಿಂದೂ ಎಂಬ ಭಾವ ಸದಾ ಇರಬೇಕು ಎಂದರು.

ಗ್ರಾಮದಲ್ಲಿ ನಾನಾ ಸಾಮಾಜಿಕ ಸೇವೆ ಮಾಡಿದ ಗ್ರಾಮದ ಸಮಾಜ ಸೇವಕಿ ಹುಲಿಗೆಮ್ಮ ಬಾಳಪ್ಪ ಹುರಕಣ್ಣವರ ಅಧ್ಯಕ್ಷತೆ ವಹಿಸಿದ್ದರು. ಸುತ್ತಲಿನ ನಾನಾ ಗ್ರಾಮಸ್ಥರು ಹಾಗೂ ಇಟಗಿ ಗ್ರಾಮಸ್ಥರಿದ್ದರು. ಶ್ರೀಕಾಂತ ಪೂಜಾರ ಪ್ರಾರ್ಥಿಸಿದರು. ಗವಿಸಿದ್ದನಗೌಡ ಮುದ್ದಾಬಳ್ಳಿ ಪ್ರಾಸ್ತಾವಿಕ ಮಾತನಾಡಿದರು.

ಅದ್ಧೂರಿ ಮೆರವಣಿಗೆ: ಗ್ರಾಮದಲ್ಲಿ ಭಾರತಾಂಬೆಯ ಭಾವಚಿತ್ರ ಶೋಭಾಯಾತ್ರೆ ಅದ್ಧೂರಿಯಾಗಿ ಜರುಗಿತು. ರಾಷ್ಟ್ರ ಮುಖಂಡರ ವೇಷಧಾರಿ ಮಕ್ಕಳು ಗಮನ ಸೆಳೆದರು. ನಾನಾ ವಾದ್ಯ ಮೇಳ ಶೋಭಾಯಾತ್ರೆಗೆ ಮೆರಗು ನೀಡಿದವು. ಪ್ರಮುಖರಾದ ಬಸವಲಿಂಗಪ್ಪ ಭೂತೆ, ಬಿ.ಎಂ. ಹಳ್ಳಿ, ರಾಮಣ್ಣ ಹಿರೇಮನಿ, ನಾಗರಾಜ ವೆಂಕಟಾಪುರ, ಸೋಮಣ್ಣ ಬಡಿಗೇರ, ಮಹೇಶ ದೊಡ್ಮನಿ, ಅಂದಪ್ಪ ಹುರುಳಿ, ಪ್ರಭು ಹಳ್ಳಿ, ರಾಮಣ್ಣ ಕೌದಿ, ವಿರೂಪಾಕ್ಷಪ್ಪ ಹುರುಳಿ, ಮಹಾಂತೇಶ ಕೌದಿ, ಶಿವಕುಮಾರ ಗುಳಗಣ್ಣವರ, ಶಾಂತಯ್ಯ ಕಂತಿ, ಸೋಮನಗೌಡ ಇತರರಿದ್ದರು.


ದೇಶ ಕಟ್ಟುವ ಕೆಲಸ ಮಾಡಿ: ಹಿಂದೂ ಧರ್ಮದಿಂದ ಭಾರತ ವಿಶ್ವದಲ್ಲಿ ವಿಶ್ವಗುರು ಸ್ಥಾನದಲ್ಲಿದೆ. ಭಾರತದ ಪರಂಪರೆ ಉಳಿಸಿಕೊಂಡು ಹೋಗುವ ಕಾರ್ಯ ಆಗಬೇಕಿದೆ. ಧರ್ಮದ ಹಾದಿಯಲ್ಲಿ ಸಾಗಿದಾಗ ಮಾತ್ರ ಮನುಷ್ಯನಿಗೆ ನಿಜ ಬೆಲೆ ಬರುತ್ತದೆ. ಆ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯ ಭಾರತ ಕಟ್ಟುವ ಕೆಲಸ ಮಾಡಬೇಕು. ಅದಕ್ಕೆ ಸದಾ ಅಣಿಯಾಗಿರಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ ಗುಳಗಣ್ಣವರ ಹೇಳಿದರು.