ಹಿಪ್ಪರಗಿ ಬ್ಯಾರೇಜ್ ಗೇಟ್ ದುರಸ್ತಿ ಕಾರ್ಯ ಯಶಸ್ವಿ

| Published : Oct 13 2024, 01:04 AM IST

ಸಾರಾಂಶ

ಕಂದಾಯ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ತಂಡ ಜಾಗರೂಕತೆಯಿಂದ ಹಿಪ್ಪರಗಿ ಜಲಾಶಯದ ಗೇಟ್ ನಂ.೭ ರಲ್ಲಿನ ಸಮಸ್ಯೆಗೆ ದುರಸ್ತಿಯಲ್ಲಿ ತೊಡಗಿರುವುದು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ಕಳೆದ ನಾಲ್ಕೈದು ದಿನಗಳಿಂದ ಬಾಗಲಕೋಟೆ ಜಿಲ್ಲೆಯ ಹಿಪ್ಪರಗಿ ಬ್ಯಾರೇಜ್‌ನ ಗೇಟ್‌ ನಂ.7ಅನ್ನು ಸಂಪೂರ್ಣ ಮುಚ್ಚುವಲ್ಲಿ ಎದುರಾಗಿದ್ದ ತಾಂತ್ರಿಕ ದೋಷದ ರಿಪೇರಿ ಯಶಸ್ವಿಯಾಗಿದೆ. ಹೀಗಾಗಿ ಬ್ಯಾರೇಜ್‌ಗೆ ಎದುರಾಗಿದ್ದ ಗೇಟ್‌ ತೊಂದರೆಯನ್ನು ಆಲಮಟ್ಟಿ ಮತ್ತು ರಾಯಚೂರಿನ ಅಣೆಕಟ್ಟು ತಜ್ಞರು ಆಗಮಿಸಿ ಸರಿಪಡಿಸಿದ್ದಾರೆ.

ಅ.10ರಂದು ಹಿಪ್ಪರಗಿ ಬ್ಯಾರೇಜ್‌ ಗೇಟ್‌ ನಂ.7ಅನ್ನು ಮುಚ್ಚಲು ಆಗದೇ ತಾಂತ್ರಿಕ ತೊಂದರೆ ಎದುರಾಗಿತ್ತು. ನಂತರ ಸ್ಥಳಕ್ಕೆ ತಂತ್ರಜ್ಞರ ತಂಡವು ಆಗಮಿಸಿ ವಾಸ್ತವ ಪರಿಸ್ಥಿತಿ ಪರಿಶೀಲಿಸಿತ್ತು. ಇದಾದ ಬಳಿಕ ಆಲಮಟ್ಟಿ ಮತ್ತು ರಾಯಚೂರಿನಲ್ಲಿ ಡ್ಯಾಂನ ಐವರ ಪ್ರಧಾನ ತಂತ್ರಜ್ಞರು ಮತ್ತು 32 ಕಾರ್ಮಿಕ ತಂತ್ರಜ್ಞರ ತಂಡ ಆಗಮಿಸಿ ಅ.11ರ ರಾತ್ರಿಯಿಂದ ಅ.12ರ ಬೆಳಗಿನ ಜಾವದವರೆಗೆ ಸತತವಾಗಿ ಕಾರ್ಯನಿರ್ವಹಿಸಿ ಬ್ಯಾರೇಜ್‌ನಲ್ಲಿ ಕಾಣಿಸಿಕೊಂಡಿದ್ದ ತೊಂದರೆಯನ್ನು ನಿವಾರಿಸಿತು.

ಹಿಪ್ಪರಗಿ ಬ್ಯಾರೇಜ್‌ನ ಗೇಟ್ ನಂ.7 ಸಂಪೂರ್ಣ ಮುಚ್ಚುವಲ್ಲಿ ತಾಂತ್ರಿಕ ಸಮಸ್ಯೆ ಎದುರಿಸುತ್ತಿದ್ದ ತಾಂತ್ರಿಕ ಅಧಿಕಾರಿಗಳ ತಂಡ ಜಲಾಶಯದಲ್ಲಿನ ನೀರು ಪೋಲಾಗದಂತೆ ತಡೆಯುವ ಜೊತೆಗೆ ದುರಸ್ತಿಗೊಳಿಸಿದೆ ಎಂದು ಜಮಖಂಡಿ ಎಸಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ. ರಬಕವಿ-ಬನಹಟ್ಟಿ ತಹಶೀಲ್ದಾರ ಗಿರೀಶ ಸ್ವಾದಿ ಅವಲೋಕನದಲ್ಲಿ ತಂತ್ರಜ್ಞರು ಗೇಟ್ ಅಳವಡಿಕೆಯಲ್ಲಿ ಯಶಸ್ವಿಯಾಗಿದ್ದಾರೆ.

ಕೃಷ್ಣೆಯಲ್ಲಿ ನೀರಿನ ಒಳಹರಿವು ಕುಸಿತವಾಗಿದ್ದರೂ ಸಂಪೂರ್ಣ ಸ್ಥಗಿತವಾಗಿಲ್ಲ. ಆದ್ದರಿಂದ ಸದ್ಯ ನೀರಿನ ಶೇಖರಣೆ ಪ್ರಮಾಣದಲ್ಲಿ ಸಮಸ್ಯೆಯಿಲ್ಲ. ೪.೫ ಟಿಎಂಸಿಯಷ್ಟು ನೀರು ಸಂಗ್ರಹವಿದ್ದು, ಒಳಹರಿವು ನಿಧಾನವಾಗಿದ್ದರೂ ಜಲಾಶಯದ ಗರಿಷ್ಠ ೬ ಟಿಎಂಸಿ ನೀರು ಸಂಗ್ರಹಣೆ ಕೆಲವೇ ವಾರಗಳಲ್ಲಿ ಪೂರ್ಣಗೊಳ್ಳಲಿದೆ. ಯಾವುದೇ ಕೊರತೆಯಾಗದು ಎಂದು ತಜ್ಞರು ಖಚಿತತೆ ವ್ಯಕ್ತಪಡಿಸಿದ್ದಾರೆ.