ರಟ್ಟೀಹಳ್ಳಿ: ಕಳೆದ ತಿಂಗಳಷ್ಟೇ ದೇವಸ್ಥಾನ ವಿಚಾರವಾಗಿ ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮಸ್ಥರ ಮಧ್ಯ ಕಲ್ಲೂ ತೂರಾಟ, ಗುಂಪು ಘರ್ಷಣೆ ಏರ್ಪಟ್ಟು ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಇದರ ಮಧ್ಯ ಎರಡೂ ಗ್ರಾಮಗಳಲ್ಲಿ ದೇವಿ ಜಾತ್ರಾ ಮಹೋತ್ಸವ ಇರುವ ಕಾರಣ ಜಾತ್ರೆಗೆ ಮನವಿ ಸಲ್ಲಿಸಿದ್ದು, ನಿಮ್ಮ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗುವುದು ಎಂದು ತಾಲೂಕು ದಂಡಾಧಿಕಾರಿ ಶ್ವೇತಾ ಅಮರಾವತಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ತಾಲೂಕು ದಂಡಾಧಿಕಾರಿ ಹಾಗೂ ಪೊಲೀಸ್ ಇಲಾಖೆಯ ಸಹಯೋಗದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮದ ಶ್ರೀ ಮರಡಿ ದುರ್ಗಾದೇವಿ ದೇವಸ್ಥಾನ ವಿಚಾರವಾಗಿ ಕಳೆದ ತಿಂಗಳು ನಡೆದ ಗಲಾಟೆ ಮಾಸುವ ಮುಂಚೆಯೇ ಉಭಯ ಗ್ರಾಮಗಳ ಗ್ರಾಮಸ್ಥರು ದೇವಿ ಜಾತ್ರೆಗೆ ಅವಕಾಶಕ್ಕೆ ತಾಲೂಕಾಡಳಿತಕ್ಕೆ ಮನವಿ ಸಲ್ಲಿಸಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದಾದರೆ ನಿಮ್ಮ ಮನವಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿ ಅವರಿಂದ ಜಾತ್ರೆಗೆ ಅವಕಾಶ ನೀಡಿದರಷ್ಟೇ ಜಾತ್ರೆಗೆ ಅವಕಾಶ ಕಲ್ಪಿಸಲಾಗುವುದು ಎಂದರು. ಹಿರೇಯಡಚಿ ಗ್ರಾಮಸ್ಥರು ಮಾ. 10 ಮತ್ತು 11ರಂದು ಜಾತ್ರೆ ಮಾಡಲು ಮನವಿ ಸಲ್ಲಿಸಿದ್ದಾರೆ. ಆದರೆ ಕ್ಯಾತನಕೇರಿ ಗ್ರಾಮಸ್ಥರು ಜಾತ್ರೆ ಮಾಡಬೇಕಾದರೆ ಹಿರೇಯಡಚಿ ಜಾತ್ರೆ ನಡೆದು 8-10 ದಿನ ಕಳೆದು ಜಾತ್ರೆ ಮಾಡುವುದಾರೆ ಮಾತ್ರ ಅವಕಾಶಕ್ಕೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಇಲ್ಲವಾದರೇ ಎರಡು ಗ್ರಾಮಗಳ ಜಾತ್ರೆಗೆ ನಿರ್ಭಂಧ ಹೇರಲಾಗುವುದು ಎಂದು ತಾಲೂಕಾಡಳಿತ ಸ್ಪಷ್ಟ ಪಡಿಸಿದ ನಂತರ ಕ್ಯಾತನಕೇರಿ ಗ್ರಾಮಸ್ಥರು ಸಭೆ ನಡೆಸಿ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆಯ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುವುದಾಗಿ ಹೇಳಿ ಕ್ಯಾತನಕೇರಿ ಗ್ರಾಮಸ್ಥರು ಯುಗಾದಿ ಅಮಾವಾಸ್ಯೆ ಬಳಿಕ ದೇವಿ ಜಾತ್ರೆ ಮಾಡುವುದಾಗಿ ನಿರ್ಧಾರ ಕೈಗೊಳ್ಳಲಾಯಿತು. ಸಿಪಿಐ ಮಂಜುನಾಥ ಪಂಡಿತ್ ಹಾಗೂ ಪಿ.ಎಸ್.ಐ. ನೀಲರಾಜ್ ನರಲಾರ ಮಾತನಾಡಿ, ಯಾವುದೇ ಧಾರ್ಮಿಕ ಕಾರ್ಯಕ್ರಮಗಳಿಗೆ ತಾಲೂಕಾಡಳಿತ ಹಾಗೂ ಪೊಲೀಸ್ ಇಲಾಖೆ ಮಧ್ಯ ಪ್ರವೇಶಿಸುವುದಿಲ್ಲ. ಆದರೆ ಕಾನೂನು ಸುವ್ಯವಸ್ಥೆ ಹಾಳು ಮಾಡುವ ಹಾಗೂ ಗಲಾಟೆಗಳು ಆದಾಗ ಮಾತ್ರ ನಿರ್ಬಂಧ ಹೇರಲಾಗುವುದು. ಅದೇ ರೀತಿ ಎರಡೂ ಗ್ರಾಮಸ್ಥರು ಗಲಾಟೆ ಮಾಡಿದ್ದರಿಂದ ನಿಮ್ಮ ಮೇಲೆ ನಿರ್ಬಂಧ ಹೇರಲಾಗುತ್ತಿದೆ. ಕಾರಣ ಜಾತ್ರೆಗೆ ಅವಕಾಶ ಸಿಕ್ಕರೆ ನಿಮಗೆ ಇಲಾಖೆಯಿಂದ ಧಾರ್ಮಿಕ ಕಾರ್ಯಕ್ರಮಗಳಿಗಷ್ಟೇ ಅವಕಾಶ ನೀಡಲಾಗುವುದು ಇನ್ನುಳಿದ ಮನೋರಂಜನೆ ಡಿ.ಜೆ, ಮೆರವಣಿಗೆ, ಫ್ಲೆಕ್ಸ ಅಳವಡಿಸಲು ಅವಕಾಶ ಇರುವುದಿಲ್ಲ, ಶಾಂತಿಗೆ ಭಂಗ ಉಂಟಾದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಹಾಗೂ ಗಿಡಿಗೇಡಿಗಳು ಯಾವುದೇ ರೀತಿಯಲ್ಲಾದರೂ ಶಾಂತಿಗೆ ಭಂಗ ತರುವಂತ ಸಾಧ್ಯತೆಗಳಿದ್ದು ಕಾರಣ ಜಾತ್ರೆ ಸಮಯದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಗೂ ದೇವಸ್ಥಾನ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದರೆ ಸೂಕ್ತ ಎಂದು ಮನವಿ ಮಾಡಿದರು.ಈ ಸಂದರ್ಭದಲ್ಲಿ ಹಿರೇಯಡಚಿ ಹಾಗೂ ಕ್ಯಾತನಕೇರಿ ಗ್ರಾಮದ ಮುಖಂಡರು ಇದ್ದರು.