ಸಾರಾಂಶ
ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ಬೆಳ್ಳಿ ಪಲ್ಲಕ್ಕಿ ಮಹೋತ್ಸವದ ಎರಡನೇ ದಿನವಾದ ಮಂಗಳವಾರ ಐತಿಹಾಸಿಕ ಹೋರಿಮಟ್ಟಿ ಗುಡ್ಡಕ್ಕೆ ತೆರಳಿದ್ದ ಅಲಂಕೃತ ಮೂಲನಂದೀಶ್ವರ ಬೆಳ್ಳಿ ಪಲ್ಲಕ್ಕಿ ಉತ್ಸವ ಸಂಪನ್ನಗೊಂಡಿದೆ. ಭಕ್ತರ ಜಯಘೋಷ, ಬಸವಣ್ಣನ ಕುದರಿ ಶಿವಾನಂದ ಈರಕಾರ ಮುತ್ಯಾ ಅವರ ಹೇಳಿಕೆ ಬಳಿಕ ಪಲ್ಲಕ್ಕಿ ಮೂಲ ಸ್ಥಾನಕ್ಕೆ ಮರಳಿತು.ಪಟ್ಟಣದ ಬಳಿಯ ಹೋರಿಮಟ್ಟಿ ಗುಡ್ಡದಲ್ಲಿ ಪಲ್ಲಕ್ಕಿ ಮೂಲನಂದೀಶ್ವರ ಅಲಂಕೃತ ಬೆಳ್ಳಿ ಪಲ್ಲಕ್ಕಿ ಉತ್ಸವದ ಹಿನ್ನಲೆಯಲ್ಲಿ ಸಂಜೆ ಆಕರ್ಷಕ ಸಿಡಿಮದ್ದು ಸಿಡಿಸಲಾಯಿತು. ವಿವಿಧ ಕಲಾ ತಂಡಗಳ ಮೆರವಣಿಗೆ, ಭಕ್ತರ ಜಯಘೋಷದೊಂದಿಗೆ ಪುರ ಪ್ರವೇಶ ಮಾಡಿದ ನಂತರ ಅದ್ದೂರಿ ಮೆರವಣಿಗೆಯ ಮೂಲಕ ಮೂಲ ಸ್ಥಾನ ತಲುಪಿದೆ. ಮಂಗಳವಾರ ನಸುಕಿನ ಜಾವ ಬಸವಣ್ಣನ ಕುದರಿ ಶಿವಾನಂದ ಈರಕಾರಮುತ್ಯಾ ಅವರು ಆಗಮಿಸಿದ ನಂತರ ಪಲ್ಲಕ್ಕಿ ಉತ್ಸವವು ದೇವಸ್ಥಾನದ ಪ್ರಾಂಗಣದಲ್ಲಿ ಮೂರು ಪ್ರದಕ್ಷಿಣೆ ಹಾಕಿತು. ನಂತರ ಶಿವಾನಂದ ಈರಕಾರಮುತ್ಯಾ ಈ ವರ್ಷದ ಮಳೆ-ಬೆಳೆಗಳ ಬಗ್ಗೆ ಭವಿಷ್ಯ ನುಡಿದರು. ಹೇಳಿಕೆಯನ್ನು ಹಿರಿಯರಾದ ಬಸವರಾಜ ಹಾರಿವಾಳ ಅವರು ಕೇಳಿ ನೆರೆದ ಭಕ್ತಗಣಕ್ಕೆ ಧ್ವನಿವರ್ದಕದ ಮೂಲಕ ತಿಳಿಸಿದರು.ಉತ್ಸವದಲ್ಲಿ ಹೇಳಿಕೆ
ಶಿವಾನಂದ ಈರಕಾರಮುತ್ಯಾ ನುಡಿದ ಹೇಳಿಕೆಗಳು ಹುಬ್ಬಿ, ಉತ್ತರಿ ಮಳಿಗೆ ಮಂಡಿ ಕಟ್ಟಿಸಿನಿ, ಹಸ್ತ ಚಿತ್ತಿ ಮಳಿ ಒಕ್ಕಲಿಗ್ಯಾಗ ಹಸ್ತಾಗ ಹಾಲು ಹಾಕಿನಿ, ಸ್ವಾತಿ ಮಳಿ ನಾಲ್ಕು ಮೂಲಿ ಸೋಸಿ ನೋಡುವದರೊಳಗ ಒಂದು ಮೂಲಿ ಕಸರ ಉಳಿತು, ಹತ್ತು ಕಾಳಿನಲ್ಲಿ ಬಿಳಿ ಕಾಳು ಮೇಲು, ಹತ್ತಿ ಸಾಲಾಗ ಹಮಿಣಿ ಒಗದಿನಿ, ಒಕ್ಕಲಿಗ್ಯಾಗ ಚಿಂತಿ ಮಾಡಬೇಡ. ನಾಲ್ಕು ಮೂಲಿಗೆ ಜಾಡಿ ಟೊಪ್ಪಿಗಿ ಹಾಕೊಂಡು ಮೂಲಿ ಮೂಲಿಗೆ ನಿಂತಿನಿ, ಗೋಧಿ, ಕುಸಬಿ, ಕಡ್ಲಿ,ಜೋಳದ ಬೆನ್ನ ಹತ್ಯಾವ, ಅಪ್ಪನ ಮ್ಯಾಲಿ ನಂಬಿಗೆ ಇಟ್ಟು ನಡದವನ ಮನಿಯಾಗ ಬಂಗಾರದ ಕಂಬ ಆಗಿ ಇರತೇನಿ. ಈ ವರ್ಷದ ಹೇಳಿಕೆಯನ್ನು ಶಿವಾನಂದ ಈರಕಾರ ಮುತ್ಯಾ ನುಡಿದರು.ಪಲ್ಲಕ್ಕಿ ಉತ್ಸವದಲ್ಲಿ ಗಂಗಯ್ಯ ಕಾಳಹಸ್ತೇಶ್ವರಮಠ, ಬಸವರಾಜ ಹಾರಿವಾಳ, ಸಂಗಪ್ಪ ಡಂಬಳ, ಚಂದ್ರಶೇಖರ ಮುರಾಳ, ನಿಂಗಪ್ಪ ಜೈನಾಪುರ, ಬಸವಂತ ಅಡಗಿಮನಿ, ಸಂಗಪ್ಪ ವಾಡೇದ, ಪವಾಡೆಪ್ಪ ಕರಮಳಕರ, ಶರಣಪ್ಪ ಕೂಡಗಿ, ನಾಗಪ್ಪ ಬಾಡಗಿ, ಮೀರಾಸಾಬ ಕೊರಬು, ಸಿದ್ದಲಿಂಗ ಪೂಜಾರಿ, ಗಿರೀಶ ಬಿರಾದಾರ, ಪುಟ್ಟು ಪಟ್ಟಣಶೆಟ್ಟಿ, ಶಿವು ಸಿಂದಗಿ, ಕುಮಾರ ಒಣರೊಟ್ಟಿ, ಪರಶುರಾಮ ದೇವಕರ, ಸಿದ್ದು ಚವ್ಹಾಣ, ಪ್ರಭು ಮಾಲಗಾರ, ಮಂಜು ಹಾರಿವಾಳ, ಭೀಮು ನಿಕ್ಕಂ, ಮಲ್ಲು ಡೋಣೂರ, ಸಂತೋಷ ಕೂಡಗಿ ಸೇರಿ ಅನೇಕರು ಭಾಗವಹಿಸಿದ್ದರು.
ಬಾಕ್ಸ್ಬಸವೇಶ್ವರರು ಪೂಜೆಗೈದ ಜಾಗವಿದು
ಪಟ್ಟಣದ ಆರಾಧ್ಯದೈವ ಮೂಲನಂದೀಶ್ವರನ ವರಪ್ರಸಾದದಿಂದ ಬಸವೇಶ್ವರರ ತಾಯಿ ಮಾದಲಾಂಬಿಕೆಯು ಬಸವೇಶ್ವರರ ಜನ್ಮ ನೀಡಿದಳು ಎಂಬ ಪ್ರತೀತಿಯಿದೆ. ಬಸವೇಶ್ವರರು ಬಾಲ್ಯದಲ್ಲಿ ಜನ್ಮಸ್ಥಳ ಬಸವನಬಾಗೇವಾಡಿಯ ಮೂಲನಂದೀಶ್ವರ ದೇವಸ್ಥಾನ ಪ್ರಾಂಗಣ, ಬಾವಿಯ ಸುತ್ತಮುತ್ತ ತನ್ನ ಗೆಳೆಯರರೊಂದಿಗೆ ಆಟ ಆಡುವ ಜೊತೆಗೆ ಸಮೀಪದ ಹೋರಿಮಟ್ಟಿ ಗುಡ್ಡದಲ್ಲಿಯೂ ತನ್ನ ಬಾಲ್ಯದ ಆಟ, ಪೂಜೆ ಪುನಸ್ಕಾರ ಮಾಡಿದ್ದರು. ಇದರ ಸವಿನೆನಪಿಗಾಗಿ ಪಲ್ಲಕ್ಕಿ ಉತ್ಸವವು ಹೋರಿಮಟ್ಟಿ ಗುಡ್ಡಕ್ಕೆ ತೆರಳಿ ಮರಳಿ ದೇವಸ್ಥಾನಕ್ಕೆ ಬರುತ್ತದೆ ಎಂಬ ಪ್ರತೀತಿಯೂ ಇದೆ. ಇದರ ಬಗ್ಗೆ ಹೆಚ್ಚು ಬೆಳಕು ಚೆಲ್ಲುವ ಅಗತ್ಯವಿದೆ.