ಸಾರಾಂಶ
ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ - ಪಂಗಡ ಘಟಕದ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನಾಚರಣೆಯಲ್ಲಿ ಸಂಶೋಧನಾ ವಿದ್ಯಾರ್ಥಿ, ಚಿಂತಕ ಶ್ರೇಯಸ್ ಜಿ. ಕೋಟ್ಯಾನ್ ವಿಶೇಷ ಉಪನ್ಯಾಸ ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿ
ರಾಜಮಹಾರಾಜರ ಇತಿಹಾಸ ಇರುವ ಈ ದೇಶದಲ್ಲಿ ತಳ ಸಮುದಾಯಕ್ಕೆ, ದಲಿತರಿಗೆ ಯಾವುದೇ ಇತಿಹಾಸ ಇರಲಿಲ್ಲ. ಆ ಇತಿಹಾಸ ರಚನೆಯಾದದ್ದು ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ರಚಿಸಿದ ಬಳಿಕ ಎಂದು ಸಂಶೋಧನಾ ವಿದ್ಯಾರ್ಥಿ, ಚಿಂತಕ ಶ್ರೇಯಸ್ ಜಿ. ಕೋಟ್ಯಾನ್ ಹೇಳಿದ್ದಾರೆ.ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ - ಪಂಗಡ ಘಟಕದ ಆಶ್ರಯದಲ್ಲಿ ಕಾಂಗ್ರೆಸ್ ಭವನದಲ್ಲಿ ಜರಗಿದ, ಭಾರತರತ್ನ ಡಾ. ಬಿ.ಆರ್. ಅಂಬೇಡ್ಕರ್ 134ನೇ ಜನ್ಮದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.
ಇಂದು ಜಾತಿ ಇಲ್ಲ ಎಂದು ಹೇಳುತ್ತೇವೆ. ಆದರೆ ಎಲ್ಲಾ ಕಡೆಗಳಲ್ಲಿ ಜಾತಿಯೇ ಮುಂಚೂಣಿಗೆ ಬರುತ್ತಿದೆ. ಅವುಗಳ ಮಧ್ಯೆ ಬದುಕಲು ಅಂಬೇಡ್ಕರ್ ತತ್ವ ಮುಖ್ಯವಾಗುತ್ತದೆ. ಬಸವಣ್ಣ ವೀರಶೈವರಿಗೆ, ಗೌತಮ ಬುದ್ಧ ಬೌದ್ಧರಿಗೆ, ನಾರಾಯಣ ಗುರುಗಳು ಬಿಲ್ಲವರಿಗೆ, ಅಂಬೇಡ್ಕರ್ ದಲಿತರಿಗೆ ಮಾತ್ರ ಸೀಮಿತಗೊಳಿಸಬಾರದು, ಅವರ ಚಿಂತನೆಗಳು ಎಲ್ಲರಿಗೂ ದಕ್ಕಬೇಕು ಎಂದವರು ಹೇಳಿದರು.ಮಾಜಿ ಸಚಿವರಾದ ವಿನಯಕುಮಾರ್ ಸೊರಕೆ, ಕೆ. ಜಯಪ್ರಕಾಶ್ ಹೆಗ್ಡೆ , ಕೆಪಿಸಿಸಿ ಉಪಾಧ್ಯಕ್ಷರಾದ ಎಂ.ಎ. ಗಪೂರ್ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ವಹಿಸಿದ್ದರು. ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಜಯಕುಮಾರ್ ಸ್ವಾಗತಿಸಿದರು. ಪರಿಶಿಷ್ಟ ಪಂಗಡ ಅಧ್ಯಕ್ಷ ಜಯರಾಮ್ ನಾಯ್ಕ್ ಸಂವಿಧಾನ ಪೀಠಿಕೆ ವಾಚಿಸಿದರು. ನಗರಸಭೆ ಮಾಜಿ ಅಧ್ಯಕ್ಷ ಯುವರಾಜ್ ಪುತ್ತೂರು ಅವರು ವಂದಿಸಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗೋಪಿ ಕೆ .ನಾಯ್ಕ್ ಕಾರ್ಯಕ್ರಮ ನಿರ್ವಹಿಸಿದರು.