ಸಂಡೂರು ಪ್ರದೇಶದ ಇತಿಹಾಸ ದರ್ಶನ ಪುಸ್ತಕ ಬಿಡುಗಡೆ

| Published : Jun 10 2025, 05:10 AM IST

ಸಾರಾಂಶ

ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ತಳವಾರ ನರಸಿಂಹ ಸಂಪಾದಿಸಿರುವ ‘ಸಂಡೂರು ಪ್ರದೇಶದ ಇತಿಹಾಸ ದರ್ಶನ’ ಗ್ರಂಥ ಸಂಡೂರಿನ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ.

ಕನ್ನಡಪ್ರಭ ವಾರ್ತೆ ಸಂಡೂರು

ಸಂಡೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ತಳವಾರ ನರಸಿಂಹ ಸಂಪಾದಿಸಿರುವ ‘ಸಂಡೂರು ಪ್ರದೇಶದ ಇತಿಹಾಸ ದರ್ಶನ’ ಗ್ರಂಥ ಸಂಡೂರಿನ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲಿದೆ. ಇದು ಅಧ್ಯಯನ ಯೋಗ್ಯವಾಗಿದೆ ಎಂದು ನಿವೃತ್ತ ಉಪನ್ಯಾಸಕ ಸಿ.ಎಂ. ಶಿಗ್ಗಾವಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಾಲೇಜಿನ ೨೦೨೪-೨೫ನೇ ಸಾಲಿನ ಕ್ರೀಡೆ, ಸಾಂಸ್ಕೃತಿಕ, ಎನ್‌ಎಸ್‌ಎಸ್, ರೆಡ್‌ಕ್ರಾಸ್ ಹಾಗೂ ವಿವಿಧ ಸಮಿತಿಗಳ ಸಮಾರೋಪ, ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಮತ್ತು ‘ಸಂಡೂರು ಪ್ರದೇಶದ ಇತಿಹಾಸ ದರ್ಶನ’ ಎಂಬ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.

ಕುರುಗೋಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ತಿಪ್ಪೇರುದ್ರ ಸಂಡೂರು ಪುಸ್ತಕ ಕುರಿತು ಮಾತನಾಡಿ, ಸಂಪಾದಕ ತಳವಾರ ನರಸಿಂಹ ತಮ್ಮ ಪುಸ್ತಕದ ಮೂಲಕ ಸಂಡೂರು ಪ್ರದೇಶದ ಇತಿಹಾಸ, ಸಂಸ್ಕೃತಿ, ಪರಂಪರೆ ಹಾಗೂ ಪ್ರಸಕ್ತ ಸಂಡೂರಿನ ಸ್ಥಿತಿಗತಿಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇಲ್ಲಿ ಪ್ರಾಗೈತಿಹಾಸ ಕಾಲದಿಂದ ಜನ ವಸತಿ ಇದ್ದಿದ್ದ ಸಾಕ್ಷಗಳಿವೆ. ಜಗತ್ತಿನ ಮಾನವ ಸಂಸ್ಕೃತಿಗೆ ತನ್ನದೇ ಆದ ಕೊಡುಗೆ ನೀಡಿರುವ ಸಂಡೂರು ಪ್ರದೇಶವು ಅದ್ವಿತೀಯವಾದ ಇತಿಹಾಸ ಹೊಂದಿದೆ ಎಂಬುದನ್ನು ನಮಗೆ ಮನದಟ್ಟು ಮಾಡಿಕೊಟ್ಟಿದ್ದಾರೆ. ಈ ಕ್ಷೇತ್ರದ ಮೇಲೆ ಮುಂದೆ ಸಂಶೋಧನೆ ಮಾಡುವವರಿಗೆ ಈ ಕೃತಿ ಒಂದು ವರದಾನವಾಗಲಿದೆ. ಇದೊಂದು ಶ್ರೇಷ್ಠ ಸಂಗ್ರಹ ಯೋಗ್ಯ ಆಕರ ಗ್ರಂಥವಾಗಿದೆ ಎಂದು ಅಭಿಪ್ರಾಯಪಟ್ಟರು.

ಸಂಸದ ಈ. ತುಕಾರಾಂ ಅವರ ಪುತ್ರಿ ಚೈತನ್ಯ ತುಕಾರಾಂ ಕಾರ್ಯಕ್ರಮ ಉದ್ಘಾಟಿಸಿದರು. ಬಳ್ಳಾರಿಯಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಮುಖ್ಯಸ್ಥ ತಿಪ್ಪೇಸ್ವಾಮಿ ವಿದ್ಯಾರ್ಥಿಗಳು ಹಾಗೂ ಪುಸ್ತಕ ಕುರಿತು ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಡಾ. ಎಚ್. ಬಸವರಾಜ್ ಅಧ್ಯಕ್ಷೀಯ ನುಡಿಗಳನ್ನಾಡಿದರು.

ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ತಳವಾರ ನರಸಿಂಹ, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ, ಜಿ. ವೀರೇಶ್, ಜಿ.ಕೆ. ರೇಖಾ, ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಶಂಕರೇಗೌಡ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಟಿ. ಶ್ರೀನಿವಾಸ ಹಾಗೂ ಜಿ. ಆನಂದ್ ಕಾರ್ಯಕ್ರಮ ನಿರೂಪಿಸಿದರು.