ಸಾರಾಂಶ
ವಿಶ್ವ ಆರೋಗ್ಯ ಸಂಸ್ಥೆ ಮುಂಬರುವ 5ರಿಂದ 6 ವರ್ಷಗಳಲ್ಲಿ ಎಚ್ಐವಿ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಧ್ಯೇಯ ಹೊಂದಿದೆ. ಇದರ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಹಾಗೂ ಸಮುದಾಯಗಳು ಜಾಗೃತಿ ವಹಿಸಲು ಕರೆ ನೀಡಿದರು.
ಭದ್ರಾವತಿ : ದೇಶದಲ್ಲೇ ಎಚ್ಐವಿ ಸೋಂಕಿತರಲ್ಲಿ ಕರ್ನಾಟಕ 9ನೇ ಸ್ಥಾನದಲ್ಲಿದೆ. ಇದು ವಿಷಾದನೀಯ ಸಂಗತಿ ಎಂದು ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸ್ತ್ರೀರೋಗ ಹಾಗೂ ಪ್ರಸೂತಿ ತಜ್ಞೆ ಡಾ. ವೀಣಾ ಭಟ್ ಹೇಳಿದರು.
ನಗರದ ನ್ಯೂ ಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಎಚ್ಐವಿ ವೈರಸ್ 4 ವಿಧಗಳಲ್ಲಿ ನಮ್ಮ ಶರೀರವನ್ನು ಪ್ರವೇಶಿಸುತ್ತದೆ. ಸೋಂಕಿತ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಭೋಗ, ಸೋಂಕಿತ ಸಿರಿಂಜ್ ಮತ್ತು ಸೂಜಿಗಳನ್ನು ಹಂಚಿಕೊಳ್ಳುವುದು, ಕಲುಷಿತ ರಕ್ತ ಮತ್ತು ರಕ್ತದ ಉತ್ಪನ್ನಗಳೊಂದಿಗೆ ವರ್ಗಾವಣೆ ಹಾಗೂ ಗರ್ಭಾವಸ್ಥೆಯಲ್ಲಿ ಸೋಂಕಿತ ತಾಯಿಯ ಮೂಲಕ ವೈರಸ್ ಶರೀರ ಪ್ರವೇಶಿಸುತ್ತದೆ ಎಂದರು.
ತಾಯಿಯಿಂದ ಮಗುವಿಗೆ ಹೆಚ್ಚಾಗಿ ಶೇ.30ರಷ್ಟು ಸೋಂಕು ಹರಡುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸುವುದರಿಂದ ಸೋಂಕು ಹರಡದಂತೆ ತಡೆಗಟ್ಟಬಹುದು. ಎಚ್ಐವಿ ಪೀಡಿತರಿಗೆ ಮತ್ತು ಮಕ್ಕಳಿಗೆ ಅನೇಕ ಉಚಿತ ಯೋಜನೆಗಳು ಜಾರಿಯಲ್ಲಿವೆ. ಇವುಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.ವಿಶ್ವ ಆರೋಗ್ಯ ಸಂಸ್ಥೆ ಮುಂಬರುವ 5ರಿಂದ 6 ವರ್ಷಗಳಲ್ಲಿ ಎಚ್ಐವಿ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಧ್ಯೇಯ ಹೊಂದಿದೆ. ಇದರ ನಿಟ್ಟಿನಲ್ಲಿ ಹೆಣ್ಣುಮಕ್ಕಳು ಹಾಗೂ ಸಮುದಾಯಗಳು ಜಾಗೃತಿ ವಹಿಸಲು ಕರೆ ನೀಡಿದರು.
ಕರುಣಾ ಸೇವಾ ಕೇಂದ್ರ ನಿರ್ದೇಶಕಿ ಸಿಸ್ಟರ್ ಹೆಲನ್ ಮೋರಸ್, ಸಿಸ್ಟರ್ ಪ್ರಭ, ಒಕ್ಕೂಟದ ಸದಸ್ಯರು, ಕಾರ್ಯಕರ್ತೆಯರು ಇನ್ನಿತರರು ಉಪಸ್ಥಿತರಿದ್ದರು.- - - -ಡಿ5ಬಿಡಿವಿಟಿ1:
ಭದ್ರಾವತಿ ನ್ಯೂಟೌನ್ ಸೇಂಟ್ ಚಾರ್ಲ್ಸ್ ಕರುಣಾ ಸೇವಾ ಕೇಂದ್ರದಲ್ಲಿ ಏಡ್ಸ್ ದಿನಾಚರಣೆ ಪ್ರಯುಕ್ತ ಮಾಹಿತಿ ಕಾರ್ಯಾಗಾರ ನಡೆಯಿತು.