ಸಾರಾಂಶ
ಬಾಗಲಕೋಟೆ: ವಿದ್ಯಾರ್ಥಿಗಳೇ ನಿಮ್ಮ ಜೀವನದಲ್ಲಿ ಯಶಸ್ಸಸು ಪಡೆಯಬೇಕಾಗಿದ್ದರೆ ಕೆಲವು ನಿಯಮ ಕಟ್ಟುನಿಟ್ಟಾಗಿ ಪಾಲಿಸಿರಿ. ಮನಸ್ಸಿನ ಮೇಲೆ ಹಿಡಿತ ಸಾಧಿಸಿರಿ, ಧೃಢ ನಿರ್ಧಾರಗಳನ್ನು ಕೈಗೊಳ್ಳಿರಿ ಎಂದು ವಿದ್ಯಾಗಿರಿ ಬಸವೇಶ್ವರ ಕಾಲೇಜು ಉಪನ್ಯಾಸಕಿ ವಿಜಯಲಕ್ಷ್ಮೀ ಹಂಡಗಿ ತಿಳಿಸಿದರು. ಬಿವಿವಿ ಸಂಘದ ಬಸವೇಶ್ವರ ಸಂಯುಕ್ತ ಪ್ರೌಢಶಾಲೆಯಲ್ಲಿ 2024-25ನೇ ಸಾಲಿನ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ಅಧ್ಯಯನದಲ್ಲಿ ಎಕಾಗ್ರತೆ ಪಡೆಯಬೇಕಾದರೆ ಧ್ಯಾನವು ತುಂಬಾ ಅವಶ್ಯಕವಾಗಿದೆ. ಕನಸು ನನಸಾಗಲು ಮೊದಲು ನೀವು ಕನಸು ಕಾಣಿರಿ. ನಿಮ್ಮ ಹವ್ಯಾಸ ನಿಮ್ಮ ಭವಿಷ್ಯ ಬದಲಾಯಿಸುತ್ತವೆ. ಚಿಂತನೆ ಮನಸ್ಸು ನಿಮ್ಮದಾಗಿರಲಿ ಕ್ರಿಯಾಶೀಲತೆ ಯಶಸ್ಸಿನ ಕೀಲಿ ಕೈಯಾಗಿದೆ ಎಂದು ಹೇಳಿದರು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಕ್ಕಳಿಗೆ ಅತಿಥಿಗಳು ನಗದು ಬಹುಮಾನ ಮತ್ತು ಪ್ರಮಾಣಪತ್ರ ನೀಡಿದರು. ಶಾಲಾ ಆಡಳಿತ ಮಂಡಳಿ ಸದಸ್ಯ ಬಸವರಾಜ ಇಂಡಿ ಅಧ್ಯಕ್ಷತೆ ವಹಿಸಿದ್ದರು. ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಎಸ್.ಬಿರಾದಾರ್, ಉಪ ಪ್ರಾಚಾರ್ಯ ಎಸ್.ಕೆ.ರಾಠೋಡ ಸಿ.ಬಿ.ಕೋರಿ ಎಂ.ವೈ.ಕೂಗನವರ ಇತರರಿದ್ದರು. ಐಶ್ವರ್ಯ ಹಾಗೂ ಗೌರಿ ಸಂಗಡಿಗರು ಪ್ರಾರ್ಥಿಸಿ, ಕೆ.ಎ.ಯಾದವ ಸ್ವಾಗತಿಸಿ ಪರಿಚಯಿಸಿದರು. ಸಂಗಮೇಶ ಅಂಗಡಿ ನಿರೂಪಿಸಿ ವಂದಿಸಿದರು.