ಸಾರಾಂಶ
ತಾಲೂಕಿನ ದಬ್ಬೇಘಟ್ಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ 29ರಂದು ಹಮ್ಮಿಕೊಳ್ಳಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು.
ಕನ್ನಡಪ್ರಭ ವಾರ್ತೆ ತುರುವೇಕೆರೆ
ತಾಲೂಕಿನ ದಬ್ಬೇಘಟ್ಟ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಕ್ಟೋಬರ್ 29ರಂದು ಹಮ್ಮಿಕೊಳ್ಳಲಾಗುವುದು ಎಂದು ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷ ಸುಬ್ರಮಣಿ ಶ್ರೀಕಂಠೇಗೌಡ ತಿಳಿಸಿದರು. ಪಟ್ಟಣದ ಕನ್ನಡಭವನದಲ್ಲಿ ನಡೆದ ಸುದ್ದಿಗೋಷ್ಠಿ ಮಾತನಾಡಿ, ತಾಲೂಕು ಕಸಾಪ ಸಹಕಾರದೊಂದಿಗೆ ಈ ಬಾರಿ ದಬ್ಬೇಘಟ್ಟದಲ್ಲಿ ಹೋಬಳಿ ಮಟ್ಟದ ಎರಡನೇ ಸಾಹಿತ್ಯ ಸಮ್ಮೇಳನ ನಡೆಸಲಾಗುವುದು. ಹಿಂದೆ ಹೊಡಿಕೇಘಟ್ಟದಲ್ಲಿ ಮೊದಲ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲಾಗಿತ್ತು. ನಂತರ ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿರಲಿಲ್ಲ. ಆದ್ದರಿಂದ ಈ ಬಾರಿ ಹೋಬಳಿಯ ಎಲ್ಲ ಜನರ ಸಹಕಾರ ಮತ್ತು ಕನ್ನಡ ಪರ ಸಂಘಟನೆ, ಕನ್ನಡ ಅಭಿಮಾನಿಗಳು, ಕಸಾಪ ಸದಸ್ಯರ ಸಹಕಾರದಿಂದ ಹಬ್ಬದ ರೀತಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು. ಕಸಾಪ ತಾಲೂಕು ಅಧ್ಯಕ್ಷ ಡಿ.ಪಿ.ರಾಜು ಮಾತನಾಡಿ, ತಾಲೂಕು ಸಾಹಿತ್ಯ ಸಮ್ಮೇಳನ ಮಾಡುವ ಮುನ್ನ ತಾಲೂಕಿನ ಎಲ್ಲ ಹೋಬಳಿಗಳಲ್ಲಿ ಸಾಹಿತ್ಯ ಸಮ್ಮೇಳನ ಮಾಡಲಾಗುತ್ತಿದೆ. ಮೊದಲು ದಬ್ಬೇಘಟ್ಟ ಹೋಬಳಿಯಿಂದ ಪ್ರಾರಂಭ ಮಾಡಲಾಗಿದೆ. ಸಮ್ಮೇಳನ ಸ್ವಾಗತ ಸಮಿತಿ ಅಧ್ಯಕ್ಷರನ್ನಾಗಿ ಸುಬ್ರಮಣಿ ಶ್ರೀಕಂಠೇಗೌಡರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನ ಸಂಚಾಲಕರನ್ನಾಗಿ ಮಾಜಿ ಶಾಸಕ ಎಚ್.ಬಿ.ನಂಜೇಗೌಡ, ಸಹ ಸಂಚಾಲಕರಾಗಿ ಜಿ.ಪಂ.ಮಾಜಿ ಸದಸ್ಯ ಎ.ಬಿ.ಜಗದೀಶ್, ಅರೇಮಲ್ಲೇನಹಳ್ಳಿ ಗ್ರಾಪಂ ಅಧ್ಯಕ್ಷ ಹೇಮಚಂದ್ರು, ಆಹಾರ ಸಮಿತಿ ಅಧ್ಯಕ್ಷರಾಗಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಮೇಶ್ಗೌಡರನ್ನು ಆಯ್ಕೆ ಮಾಡಲಾಗಿದೆ. ಸಮ್ಮೇಳನದ ಸಂಪೂರ್ಣ ದಾಸೋಹದ ವ್ಯವಸ್ಥೆಯನ್ನು ನಿರ್ವಹಿಸಲು ಒಪ್ಪಿದ್ದಾರೆ ಎಂದು ತಿಳಿಸಿದರು. ಮೆರವಣಿಗೆ ಅಧ್ಯಕ್ಷರಾಗಿ ದಬ್ಬೇಘಟ್ಟ ರಮೇಶ್, ವೇದಿಕೆ ಸಮಿತಿ ಅಧ್ಯಕ್ಷ ಭೈರವೇಗೌಡರು, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎಸ್.ತ್ಯಾಗರಾಜು, ಸಾಂಸೃತಿಕ ಸಮಿತಿ ಅಧ್ಯಕ್ಷ ಚೂಡಾಮಣಿ, ಸ್ಮರಣ ಸಂಚಿಕೆ ಅಧ್ಯಕ್ಷರನ್ನಾಗಿ ಮಾವಿನಕೆರೆ ಚಂದ್ರಶೇಖರ್ರನ್ನು ಆಯ್ಕೆ ಮಾಡಲಾಗಿದೆ. ಮುಂದಿನ ಸಭೆಯಲ್ಲಿ ಸಮ್ಮೇಳನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದರು.ಸಾಪ ಹೋಬಳಿ ಘಟಕದ ಆಧ್ಯಕ್ಷ ಸಂಪತ್, ಕೋಶಾಧ್ಯಕ್ಷ ರಾಮಕೃಷ್ಣೇಗೌಡ, ಹಿರಿಯ ಮುಖಂಡರಾದ ಟಿ.ಎಸ್. ಬೋರೇಗೌಡ, ಮಂಜಯ್ಯಗೌಡ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹೇಮಚಂದ್ರು, ತ್ಯಾಗರಾಜು ಇತರರು ಇದ್ದರು.