ಸಾರಾಂಶ
ರಾಮನಾಥಪುರ: ಇಲ್ಲಿಯ ಕಾವೇರಿ ನದಿ- ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಾಲಯಕ್ಕೆ ಹೋಗುವ ರಸ್ತೆಯು ಗುಂಡಿ ಬಿದ್ದು ಹಾಳಾಗಿದ್ದು, ಸಂಚಾರಕ್ಕೆ ತೊಂದರೆ ಉಂಟಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ರಾಜ್ಯದ ಹೆದ್ದಾರಿಯ ಮುಖ್ಯರಸ್ತೆಯಿಂದ ಶ್ರೀ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದವರೆಗೆ ಸುಮಾರು 500 ಮೀಟರ್ ಉದ್ದದ ರಸ್ತೆ ಮೂಲಕ ಪ್ರತಿನಿತ್ಯ ನೂರಾರು ವಾಹನಗಳು ಬರುತ್ತವೆ. ಈ ರಸ್ತೆಯು ಗುಂಡಿ ಬಿದ್ದಿರುವುದರಿಂದ ಬೈಕ್, ಆಟೋ, ಕಾರ್ ಮತ್ತಿತರೆ ವಾಹನಗಳ ಓಡಾಟಕ್ಕೆ ತೀರ ಸಮಸ್ಯೆಯಾಗುತ್ತಿದೆ ಎಂದು ಸಾರ್ವಜನಿಕರು ದೂರಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಈ ರಸ್ತೆಯು ಹಾಳಾಗಿ ಎರಡು ವರ್ಷ ಕಳೆದರೂ ಗುಂಡಿ ಮುಚ್ಚುವ ಕೆಲಸ ಆಗಿಲ್ಲ, ಕೇಳಿದರೆ ಕೇವಲ ಭರವಸೆಯಷ್ಟೇ ದೊರೆಯುತ್ತದೆ. ತಾಲೂಕಿನ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಇತ್ತ ಗಮನ ಹರಿಸಿ, ಈ ಗುಂಡಿಗಳನ್ನು ಮುಚ್ಚಿಸಿ ಡಾಂಬರೀಕರಣ ಮಾಡಿಸಿ ಎರಡು ಬದಿ ಚರಂಡಿ ಮಾಡಿಸುವಂತೆ ಇಲ್ಲಿಯ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.