ಸಾರಾಂಶ
ಉಡುಪಿ : ಉಡುಪಿ ಜಿಲ್ಲೆಯ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತಂಬಿತುಳುಕುತ್ತಿವೆ. ಮುಖ್ಯವಾಗಿ ಕಳೆದ ಎರಡು ವಾರಗಳಿಂದ ಉಡುಪಿ ಕೃಷ್ಣಮಠ ಮತ್ತು ಮಲ್ಪೆ ಸಮುದ್ರ ತೀರದಲ್ಲಿ ಜನಜಂಗುಳಿಯಾಗುತ್ತಿದೆ.
ಸಾಲುಸಾಲು ರಜೆಗಳಿಂದಾಗಿ ಹೊರ ಜಿಲ್ಲೆಯ ಭಕ್ತರ ಆಗಮನ, ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ, ಅಯ್ಯಪ್ಪ ಮಾಲಾಧಾರಿಗಳ ಪುಣ್ಯಕ್ಷೇತ್ರ ದರ್ಶನದ ಕಾರಣದಿಂದ ಉಡುಪಿ ಕೃಷ್ಣಮಠದಲ್ಲಿ ವಿಪರೀತ ಜನಜಾತ್ರೆ ಕಂಡು ಬರುತ್ತಿದೆ.
ಮಣಿಪಾಲದಲ್ಲಿ ಮಾಹೆಯ ಅಪೂರ್ವ ಅನಾಟಮಿ ಮ್ಯೂಸಿಯಂ ಮತ್ತು ಟಿ.ಎಂ.ಎ. ಪೈ ಪ್ಲಾನೆಟೋರಿಯಂಗಳಿಗೆ ಹೊರ ಜಿಲ್ಲೆಯ ಶಾಲಾ ಮಕ್ಕಳು ಭೇಟಿ ನೀಡುತ್ತಿದ್ದಾರೆ. ವಾರಾಂತ್ಯದಲ್ಲಿ 25ಕ್ಕೂ ಹೆಚ್ಚು ಶಾಲಾ ಮಕ್ಕಳು ಇಲ್ಲಿಗೆ ಭೇಟಿ ನೀಡಿದ್ದಾರೆ.
ಇನ್ನು ಮಲ್ಪೆ ಸಮುದ್ರ ತೀರದಲ್ಲಿ ವೀಕೆಂಡ್ ಮೋಜಿಗಾಗಿ ಸ್ಥಳೀಯರ ಜೊತೆಗೆ ಮಣಿಪಾಲದ ವಿದ್ಯಾರ್ಥಿಗಳು, ಹೊರ ಜಿಲ್ಲೆಯ ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಶನಿವಾರ ಮಲ್ಪೆ ತೀರದಲ್ಲಿ ಭಾರಿ ಜನಜಂಗುಳಿ ಇತ್ತು.
ಅಲ್ಲದೇ ಜಿಲ್ಲೆಯ ಇತರ ಪುಣ್ಯ ಕ್ಷೇತ್ರಗಳಾದ ಅನೆಗುಡ್ಡೆ, ಕೊಲ್ಲೂರುಗಳಿಗೂ ಕಳೆದೆರಡು ವಾರಗಳಿಂದ ಭಾರಿ ಸಂಖ್ಯೆಯಲ್ಲಿ ಭಕ್ತರು ಆಗಮಿಸುತಿದ್ದಾರೆ.