ಸನ್ಮಾನ ಸ್ವೀಕರಿಸಿದ ಬಳಿಕ ಉಮಾಶಂಕರ ಅವರು ಶೀಘ್ರ ಭಾಲ್ಕಿಯ ಪಟ್ಟದ್ದೇವರ ಶಿಕ್ಷಣ ಸಂಸ್ಥೆಗೆ ಭೇಟಿ ನೀಡುತ್ತೇನೆ ಎಂದು ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಎಸಿಎಸ್) ಆಗಿ ವರ್ಗವಾಗಿರುವ ಉಮಾಶಂಕರ ಎಸ್‌ಆರ್‌ ಅವರನ್ನು ಭಾಲ್ಕಿಯ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ಸನ್ಮಾನಿಸಿ ಅಭಿನಂದಿಸಿದರು.

ಬೆಂಗಳೂರಿನ ವಿಧಾನಸೌಧದ ಗೃಹ ಇಲಾಖೆ ಕಚೇರಿಯಲ್ಲಿ ಮಂಗಳವಾರ ಪೂಜ್ಯರು ಉಮಾಶಂಕರ ಅವರನ್ನು ಸತ್ಕರಿಸಿ ನಂತರ ಮಾತನಾಡಿದ ಶ್ರೀಗಳು, ಐಎಎಸ್‌ ಅಧಿಕಾರಿ ಆಗಿರುವ ಉಮಾಶಂಕರ ಅವರು ದಕ್ಷ ಅಧಿಕಾರಿಯಾಗಿ ಉನ್ನತ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದರು.

ಈ ಹಿಂದೆ ಗೃಹ ಇಲಾಖೆಯ ಎಸಿಎಸ್‌ ಆಗಿದ್ದ ರಜನೀಶ ಗೋಯಲ್‌ ಅವರ ಜಾಗಕ್ಕೆ ಉಮಾಶಂಕರ ಅವರು ನಿಯೋಜನೆ ಗೊಂಡಿರುವುದು ಸಂತಸ ತರಿಸಿದೆ. ನಮ್ಮ ಗಡಿ ಭಾಗದ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಕ್ಕಳಿಗೆ ಮಾರ್ಗದರ್ಶನ ಮಾಡುವಂತೆ ಕೋರಿದರು.

ಸನ್ಮಾನ ಸ್ವೀಕರಿಸಿದ ಗೃಹ ಇಲಾಖೆ ಎಸಿಎಸ್‌ ಉಮಾಶಂಕರ ಅವರು ಮಾತನಾಡಿ, ಗಡಿ ಭಾಗದಲ್ಲಿ ಪಟ್ಟದ್ದೇವರು ಕಟ್ಟಿದ ಶಿಕ್ಷಣ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಅಂತಹ ಸಂಸ್ಥೆಗೆ ಭೇಟಿ ಕೊಡಲು ನಾನು ಕೂಡ ಉತ್ಸುಕನಾಗಿದ್ದೇನೆ. ಆದಷ್ಟು ಬೇಗ ಸಮಯ ನಿಗದಿ ಮಾಡಿಕೊಂಡು ಭೇಟಿ ಕೊಡುವುದಾಗಿ ಭರವಸೆ ನೀಡಿರುವುದಾಗಿ ಪೂಜ್ಯರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಇದ್ದರು.