ಅಖಿಲ ಭಾರತ ಗೃಹರಕ್ಷಕದಳ ಉತ್ಥಾನ ದಿನಾಚರಣೆ ಅಂಗವಾಗಿ ಮೇರಿಹಿಲ್‌ನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಗೃಹರಕ್ಷಕರ ದಿನಾಚರಣೆ ಆಚರಿಸಲಾಯಿತು.

ಮಂಗಳೂರು: ಅಖಿಲ ಭಾರತ ಗೃಹರಕ್ಷಕದಳ ಉತ್ಥಾನ ದಿನಾಚರಣೆ ಅಂಗವಾಗಿ ಮೇರಿಹಿಲ್‌ನ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕದಳ ಕಚೇರಿಯಲ್ಲಿ ಗೃಹರಕ್ಷಕರ ದಿನಾಚರಣೆ ಆಚರಿಸಲಾಯಿತು.

ಪಾಲಿಕೆ ಹೆಚ್ಚುವರಿ ಉಪಾಯುಕ್ತರು ಹಾಗೂ ಸ್ಮಾರ್ಟ್ ಸಿಟಿ ಎಂಡಿ ಡಾ.ಸಂತೋಷ್‌ ಕುಮಾರ್‌ ಮಾತನಾಡಿ, ಖಾಕಿ ಸಮವಸ್ತ್ರವನ್ನು ಧರಿಸಿದಾಗ ಸಾರ್ವಜನಿಕರಲ್ಲಿ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿರಬೇಕು ಹಾಗೂ ತಮ್ಮ ಆರೋಗ್ಯವನ್ನು ಕಾಪಾಡುವಂತೆ ಸಮವಸ್ತ್ರದಲ್ಲಿರುವಾಗ ಶ್ರದ್ಧೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯವನ್ನು ನಿರ್ವಹಿಸಬೇಕು. ಸಾರ್ವಜನಿಕ ಆಸ್ತಿಪಾಸ್ತಿಯನ್ನು ಕಾಪಾಡುವ ಗೃಹರಕ್ಷಕರಿಗೆ ಗೃಹರಕ್ಷಕ ದಿನಾಚರಣೆ ಅಂಗವಾಗಿ ಅಭಿನಂದಿಸಿದರು.

ಗೃಹರಕ್ಷಕದಳ ಮಾಜಿ ಸಮಾದೇಷ್ಟ ಡಾ.ಮುರಲಿ ಮೋಹನ ಚೂಂತಾರು ಮಾತನಾಡಿ, ಗೃಹರಕ್ಷಕರು ದೇಶದ ಒಳಗೆ ಕಾಯುವ ಸೈನಿಕರು, ಇವರು ಸಮಾಜಸೇವೆ ಮಾಡುವುದರೊಂದಿಗೆ ಸಾರ್ವಜನಿಕರಿಗೆ ಜೀವರಕ್ಷಣೆ ಹಾಗೂ ಆಸ್ತಿ ಪಾಸ್ತಿಗಳನ್ನು ಕಾಪಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಗೃಹರಕ್ಷಕ ದಳದಲ್ಲಿ ನಾನು ೧೦ ವರ್ಷಗಳ ಸೇವೆ ಸಲ್ಲಿಸಿರುವ ಬಗ್ಗೆ ಹೆಮ್ಮೆ ಇದೆ ಹಾಗೂ ಈ ಇಲಾಖೆ ಎಲ್ಲ ಕಡೆ ನನ್ನನ್ನು ಗುರುತಿಸುವಂತೆ ಮಾಡಿದೆ ಎಂದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾ ಗೃಹರಕ್ಷಕದಳದ ಪ್ರಭಾರ ಸಮಾದೇಷ್ಟ ಅನಿಲ್ ಕುಮಾರ್ ಎಸ್. ಬೂಮರಡ್ಡಿ ಅವರು ಪ್ರಸ್ತಾವಿಕದಲ್ಲಿ, ಗೃಹರಕ್ಷಕರ ತರಬೇತಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಚಿನ್ನದ ಪದಕ ಪಡೆದಿರುವ ಹಾಗೂ ಜಿಲ್ಲಾ ವಲಯ ಹಾಗೂ ರಾಜ್ಯ ಮಟ್ಟಗಳ ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾಗಿ ಜಿಲ್ಲೆಗೆ ಕೀರ್ತಿ ತಂದಿರುವ ಗೃಹರಕ್ಷಕರಿಗೆ ಅಭಿನಂದನೆ ಸಲ್ಲಿಸಿದರು. ಇನ್ನು ಮುಂದೆಯೂ ಹೆಚ್ಚು ಹೆಚ್ಚು ಗೃಹರಕ್ಷಕರನ್ನು ಸೇರಿಸಿ ಗೃಹರಕ್ಷಕ ದಳದ ಸಂಖ್ಯಾಬಲವನ್ನು ಹೆಚ್ಚಿಸಿ ಎಂದು ಗೃಹರಕ್ಷಕರಿಗೆ ಕರೆ ನೀಡಿದರು.

೨೦೨೫ನೇ ಸಾಲಿನಲ್ಲಿ ಗೃಹರಕ್ಷಕರ ಸೇವೆಯಲ್ಲಿದ್ದು, ನಿಧನರಾದ ಇಬ್ಬರು ಗೃಹರಕ್ಷಕರಿಗೆ ಗೌರವ ನಮನ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಇಲಾಖೆಯಲ್ಲಿ ಸಾಧನೆಗೈದ ಗೃಹರಕ್ಷಕರಾದ ಶಕಿಲಾ, ಬಂಟ್ವಾಳ ಘಟಕ, ಸಂತೋಷ್ ಸಲ್ಡಾನ, ಪ್ರಭಾರ ಘಟಕಾಧಿಕಾರಿ ಉಳ್ಳಾಲ ಘಟಕ, ಮರೀಟಾ ಡಿ’ಸೋಜಾ ಉಳ್ಳಾಲ ಘಟಕ ಇವರುಗಳನ್ನು ಸನ್ಮಾನಿಸಲಾಯಿತು.

ಗೃಹರಕ್ಷಕದಳ ಸಹಾಯಕ ಆಡಳಿತಾಧಿಕಾರಿ ಕವಿತಾ ಕೆ.ಸಿ. ಇದ್ದರು. ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸುಖಿತಾ ಎ.ಶೆಟ್ಟಿ ಪ್ರಾರ್ಥಿಸಿದರು. ಘಟಕಾಧಿಕಾರಿ ವೀರನಾಥ ಬೆಳ್ಳಾರೆ ಸ್ವಾಗತಿಸಿದರು. ತೀರ್ಥೇಶ್ ಪ್ರತಿಜ್ಞಾ ಸ್ವೀಕಾರ ನಡೆಸಿಕೊಟ್ಟರು. ಶ್ಯಾಮಲಾ ಸನ್ಮಾನ ಪತ್ರ ವಾಚಿಸಿದರು. ಜಗದೀಶ್ ಉಳ್ಳಾಲ ನಿರೂಪಿಸಿದರು. ಪ್ಲಟೂನ್ ಕಮಾಂಡರ್ ಮಾರ್ಕ್‌ಶೇರಾ ವಂದಿಸಿದರು.

ಕಾರ್ಯಕ್ರಮದಲ್ಲಿ ೧೫ ಘಟಕಗಳ ಘಟಕಾಧಿಕಾರಿಗಳು ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಭಾಗವಹಿಸಿದ್ದರು.