ಸಹಕಾರ ರತ್ನ ಲಕ್ಕೇಗೌಡರಿಗೆ ಹುಟ್ಟೂರಿನ ಗೌರವ

| Published : Feb 17 2025, 12:35 AM IST

ಸಹಕಾರ ರತ್ನ ಲಕ್ಕೇಗೌಡರಿಗೆ ಹುಟ್ಟೂರಿನ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಮಾಗಡಿ: ಗ್ರಾಮೀಣ ಭಾಗದಲ್ಲಿ ಹುಟ್ಟಿ ನೂರಾರು ಕುಟುಂಬಗಳಿಗೆ ಆಸರೆಯಾಗಿ ಸಹಕಾರ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಸಹಕಾರ ರತ್ನ ಬಿ.ಎಲ್‌.ಲಕ್ಕೇಗೌಡರನ್ನು ಹುಟ್ಟೂರಲ್ಲಿ ಸ್ಮರಿಸಿ ಗೌರವಿಸುತ್ತಿರುವುದು ಸಂತೋಷ ಎಂದು ಆದಿಚುಂಚನಗಿರಿ ವಿಜಯನಗರ ಶಾಖೆಯ ಮಠಾಧ್ಯಕ್ಷರಾದ ಸೋಮನಂದನಾಥ ಸ್ವಾಮೀಜಿ ಹೇಳಿದರು.

ಮಾಗಡಿ: ಗ್ರಾಮೀಣ ಭಾಗದಲ್ಲಿ ಹುಟ್ಟಿ ನೂರಾರು ಕುಟುಂಬಗಳಿಗೆ ಆಸರೆಯಾಗಿ ಸಹಕಾರ ಕ್ಷೇತ್ರದಲ್ಲಿ ತನ್ನದೆ ಆದ ಛಾಪು ಮೂಡಿಸಿದ ಸಹಕಾರ ರತ್ನ ಬಿ.ಎಲ್‌.ಲಕ್ಕೇಗೌಡರನ್ನು ಹುಟ್ಟೂರಲ್ಲಿ ಸ್ಮರಿಸಿ ಗೌರವಿಸುತ್ತಿರುವುದು ಸಂತೋಷ ಎಂದು ಆದಿಚುಂಚನಗಿರಿ ವಿಜಯನಗರ ಶಾಖೆಯ ಮಠಾಧ್ಯಕ್ಷರಾದ ಸೋಮನಂದನಾಥ ಸ್ವಾಮೀಜಿ ಹೇಳಿದರು.

ತಾಲೂಕಿನ ಬೆಳಗುಂಬದಲ್ಲಿ ಸಹಕಾರ ರತ್ನ ದಿ.ಬಿ.ಎಲ್.ಲಕ್ಕೇಗೌಡ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಲಕ್ಕೇಗೌಡರ ಪುತ್ಥಳಿ ಅನಾವರಣಗೊಳಿಸಿ, ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಬೆಂಗಳೂರಿನಲ್ಲಿ ದಿ ಭಾರತ್ ಕೋ ಆಪರೇಟಿವ್ ಸೊಸೈಟಿ ನಿರ್ಮಿಸಿ, ಶಿಕ್ಷಣ ಸಂಸ್ಥೆಯನ್ನೂ ಕಟ್ಟಿ ಬೆಳೆಸಿರುವ ಲಕ್ಕೇಗೌಡರ ಪುತ್ಥಳಿ ಹುಟ್ಟೂರಿನಲ್ಲಿ ಸ್ಥಾಪಿಸಿ, ಮುಂದಿನ ಪೀಳಿಗೆಗೆ ಅವರ ಆದರ್ಶಗಳನ್ನು ತಿಳಿಸುವುದು ಉತ್ತಮ ಬೆಳವಣಿಗೆ ಎಂದರು.

ಶಾಸಕ ಬಾಲಕೃಷ್ಣ ಮಾತನಾಡಿ, ಹುಟ್ಟೂರಲ್ಲಿ ಲಕ್ಕೇಗೌಡರಿಗೆ ಕೊಡುತ್ತಿರುವ ಗೌರವ ಅಭಿನಂದನಾರ್ಹ. ಸಹಕಾರ ಕ್ಷೇತ್ರದಲ್ಲಿ ಲಕ್ಕೇಗೌಡರು ಅನೇಕರಿಗೆ ಅನ್ನದ ಆಸರೆಯಾದವರು. ಬೆಂಗಳೂರು, ಮಾಗಡಿಯಲ್ಲೂ ಸಹಕಾರ ಬ್ಯಾಂಕ್ ಹಾಗೂ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು. ಲಕ್ಕೇಗೌಡರು ದೇಶ ಮೆಚ್ಚುವ ಸಾಧನೆ ಮಾಡಿದವರು. ಇಂತಹ ಮಹನೀಯರ ಸಾಧನೆ ಪ್ರತಿಯೊಬ್ಬರಿಗೂ ಪರಿಚಯಿಸಬೇಕು. ಪ್ರತಿ ವರ್ಷವೂ ಲಕ್ಕೇಗೌಡರ ಹೆಸರಿನಲ್ಲಿ ನಡೆಯುವ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಸಹಕಾರ ಇರಲಿದೆ ಎಂದರು.

ಮಾಜಿ ಶಾಸಕ ಎ.ಮಂಜುನಾಥ್, ವಿಧಾನ ಪರಿಷತ್ ಮಾಜಿ ಸದಸ್ಯ ಅ.ದೇವೇಗೌಡ ಲಕ್ಕೇಗೌಡರ ಒಡನಾಟ ಕುರಿತು ಮಾತನಾಡಿದರು. ಲಕ್ಕೇಗೌಡರ ಪುತ್ರಿ ನಂದಿನಿ ಜಗತ್ ತಂದೆಯ ಸ್ಮರಣಾರ್ಥ ಬೆಳಗವಾಡಿ ಗ್ರಾಮಕ್ಕೆ ಉಚಿತ ಸೋಲಾರ್ ದೀಪ ಹಾಗೂ ಸೋಲಾರ್ ಫ್ಯಾನ್ ನೀಡಿದರು.

ಕಾರ್ಯಕ್ರಮದಲ್ಲಿ ಮಾಗಡಿ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪೂಜಾರಿ ಪಾಳ್ಯ ಕೃಷ್ಣಮೂರ್ತಿ, ದಿಶಾ ಸಮಿತಿ ಮಾಜಿ ಸದಸ್ಯ ಜೆ.ಪಿ.ಚಂದ್ರೇಗೌಡ, ಬೆಂಗಳೂರು ನಿರ್ಮಾತೃ ಕೆಂಪೇಗೌಡ ಕೇಂದ್ರ ಸಮಿತಿ ಕಾರ್ಯದರ್ಶಿ ಮರಿಮಲ್ಲಯ್ಯ, ಜೆಡಿಎಸ್ ಹಿರಿಯ ಮುಖಂಡರಾದ ಎಚ್.ಜಿ.ತಮ್ಮಣ್ಣ ಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ಟಿ.ವೆಂಕಟೇಶ್, ಜಯನಗರ ಭಾರತ್ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಸುಧಾಕರ್ ನಿವೃತ್ತ ವಿಶೇಷ ಜಿಲ್ಲಾಧಿಕಾರಿ ಕೋಡಿಪಾಳ್ಯ ಕೃಷ್ಣಪ್ಪ, ಲಕ್ಕೇಗೌಡ ಪ್ರತಿಷ್ಠಾನ ಟ್ರಸ್ಟ್ ನ ಅಧ್ಯಕ್ಷ ಬಿ.ಟಿ.ಮರಿಸ್ವಾಮಿ, ಉಪಾಧ್ಯಕ್ಷ ದೇವರಾಜು, ಕಾರ್ಯದರ್ಶಿ ಬಿ.ಪಿ.ರಂಗಸ್ವಾಮಿ, ಖಜಾಂಚಿ ಕುಮಾರ್, ನಿರ್ದೇಶಕರಾದ ನಿಂಗೇಗೌಡ, ಸುರೇಶ್, ಕುಮಾರ್ ಸ್ವಾಮಿ ಇತರರು ಭಾಗವಹಿಸಿದ್ದರು.

(ಫೋಟೋ ಕ್ಯಾಪ್ಷನ್‌)

ಮಾಗಡಿ ತಾಲೂಕಿನ ಬೆಳಗುಂಬ ಗ್ರಾಮದಲ್ಲಿ ಸಹಕಾರ ರತ್ನ ದಿ.ಬಿ.ಎಲ್.ಲಕ್ಕೇಗೌಡರ ಪುತ್ಥಳಿಯನ್ನು ಆದಿಚುಂಚನಗಿರಿ ವಿಜಯನಗರ ಶಾಖೆಯ ಮಠಾಧ್ಯಕ್ಷರಾದ ಸೋಮನಂದನಾಥ ಸ್ವಾಮೀಜಿ ಅನಾವರಣಗೊಳಿಸಿದರು.