ಸಾರಾಂಶ
ಹಾನಗಲ್ಲ: ಕೇಂದ್ರದ ಅನ್ಯಾಯದ ವಿರುದ್ಧ ಧ್ವನಿ ಎತ್ತುವೆ, ಜನರ ನೋವು-ನಲಿವುಗಳಿಗೆ ಸ್ಪಂದಿಸುವೆ, ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರ ದೊರಕಿಸಲು ಪ್ರಾಮಾಣಿಕ ಸೇವೆ ಸಲ್ಲಿಸುವೆ. ವಿಶ್ವಾಸವಿಟ್ಟು ಅವಕಾಶ ಮಾಡಿಕೊಡಿ ಎಂದು ಹಾವೇರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮನವಿ ಮಾಡಿದರು.ತಾಲೂಕಿನ ಮಲಗುಂದ ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದ ಪ್ರಚಾರ ಸಭೆಯಲ್ಲಿ ಭಾಗವಹಿಸಿ, ಗ್ರಾಮಸ್ಥರು ನೀಡಿದ ಬೆಲ್ಲದ ತುಲಾಭಾರ ಸ್ವೀಕರಿಸಿ ಮಾತನಾಡಿದ ಅವರು, ಈ ಚುನಾವಣೆ ಸಂವಿಧಾನದ ಅಳಿವು, ಉಳಿವಿನ ಪ್ರಶ್ನೆಯಾಗಿದೆ. ಜನರ ಹಕ್ಕು ಕಸಿಯಲೆತ್ನಿಸುತ್ತಿರುವ ಬಿಜೆಪಿಗೆ ಪಾಠ ಕಲಿಸುವ ಅವಕಾಶ ನಮ್ಮ ಮುಂದಿದೆ. ಈಗಾಗಲೇ ಬೆಲೆ ಏರಿಕೆ, ಕೇಂದ್ರದ ಧೋರಣೆಗಳಿಂದ ಜನ ಹತಾಶಗೊಂಡಿದ್ದಾರೆ. ಬಿಜೆಪಿ ಕಿತ್ತೆಸೆಯುವುದೊಂದೇ ಇದಕ್ಕೆಲ್ಲ ಏಕೈಕ ಪರಿಹಾರವಾಗಿದೆ ಎನ್ನುವುದನ್ನು ಅರಿತಿದ್ದಾರೆ ಎಂದು ಹೇಳಿದರು.ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ರಾಜ್ಯದಲ್ಲಿ ಬರಗಾಲ ಘೋಷಿಸಿ ಬರೋಬ್ಬರಿ ೭ ತಿಂಗಳು ಗತಿಸಿವೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಲು ಕೇಂದ್ರ ಸರ್ಕಾರ ಮುಂದೆ ಬಂದಿಲ್ಲ. ನಯಾಪೈಸೆ ಬರ ಪರಿಹಾರ ಹಣ ಬಿಡುಗಡೆ ಮಾಡಿಲ್ಲ. ಬರಗಾಲದಿಂದ ಕೂಲಿ ಕಾರ್ಮಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸದ ದಿನಗಳನ್ನು ಹೆಚ್ಚಿಸಿ ಎಂದು ಮನವಿ ಮಾಡಿದರೂ ಕಿವಿಗೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಪಂ ಸದಸ್ಯ ಮಂಜಪ್ಪ ತಳವಾರ, ಮುಖಂಡರಾದ ರಾಮಪ್ಪ ತಳವಾರ ಸೇರಿದಂತೆ ಇನ್ನೂ ಹಲವರು ಈ ಸಂದರ್ಭದಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಂಜು ಗೊರಣ್ಣನವರ, ವಿಜಯಕುಮಾರ ದೊಡ್ಡಮನಿ, ಕೆಪಿಸಿಸಿ ಸದಸ್ಯ ಟಾಕನಗೌಡ ಪಾಟೀಲ, ಯುವ ಕಾಂಗ್ರೆಸ್ ಅಧ್ಯಕ್ಷ ಶಿವು ತಳವಾರ, ಗ್ರಾಪಂ ಉಪಾಧ್ಯಕ್ಷೆ ಗಂಗವ್ವ ಬಾರ್ಕಿ, ಮುಖಂಡರಾದ ಯಾಸೀರಖಾನ ಪಠಾಣ, ಗೀತಾ ಪೂಜಾರ, ಮಂಜುಳಾ ವಡ್ಡರ, ಗುತ್ತೆಪ್ಪ ತಳವಾರ, ಚಿದಾನಂದಸ್ವಾಮಿ ಹಿರೇಮಠ, ಗಜೇಂದ್ರ ಕಲ್ಲಾಪೂರ, ಫಕ್ಕೀರೇಶ ಗುಡ್ಡದವರ, ತಿಪ್ಪಣ್ಣ ದೊಡ್ಡಕೋವಿ, ಫಕ್ಕೀರಪ್ಪ ಚಾಳಕ್ಕನವರ ಈ ಸಂದರ್ಭದಲ್ಲಿದ್ದರು.