ಪ್ರಶಸ್ತಿಗೆ ಪ್ರಾಮಾಣಿಕತೆಯೇ ಬಹಳ ಮುಖ್ಯ: ಟಿ.ಎಸ್. ಮೋಹನಕುಮಾರ್

| Published : Nov 14 2023, 01:16 AM IST

ಪ್ರಶಸ್ತಿಗೆ ಪ್ರಾಮಾಣಿಕತೆಯೇ ಬಹಳ ಮುಖ್ಯ: ಟಿ.ಎಸ್. ಮೋಹನಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಶಸ್ತಿಗೆ ಪ್ರಾಮಾಣಿಕತೆಯೇ ಬಹಳ ಮುಖ್ಯ: ಟಿ.ಎಸ್. ಮೋಹನಕುಮಾರ್

ಕನ್ನಡಪ್ರಭ ವಾರ್ತೆ, ತರೀಕರೆ

ಪ್ರಶಸ್ತಿಗೆ ಪ್ರಾಮಾಣಿಕತೆಯೇ ಬಹಳ ಮುಖ್ಯವಾದುದು ಎಂದು ತರೀಕೆರೆ ಮಾನವ ಬಂಧುತ್ವ ವೇದಿಕೆ ಲೇಖಕರು, ಪ್ರಗತಿಪರ ಚಿಂತಕ ಟಿ.ಎಸ್.ಮೋಹನಕುಮಾರ್ ಹೇಳಿದರು.

ಸೋಮವಾರ, ಮಾನವ ಬಂದುತ್ವ ವೇದಿಕೆ ತರೀಕೆರೆ ತಾಲೂಕು ವತಿಯಿಂದ ಪಟ್ಟಣದ ಕೋಡಿಕ್ಯಾಂಪ್ ಜಾಮಿಯ ಮಸೀದಿ ಕಬರ್ ಸ್ಥಾನ್ ನಲ್ಲಿ ಏರ್ಪಾಡಾಗಿದ್ದ. ಮೌಢ್ಯದ ಕತ್ತಲೆಯಲ್ಲಿ ವೈಚಾರಿಕ ದೀಪಾವಳಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ನ್ಯಾಯ ಮತ್ತು ಸೌಹಾರ್ದತೆ ಬಿತ್ತರಿಸುವುದು ಈ ಕಾರ್ಯಕ್ರಮದ ಉದ್ದೇಶ. ಹಬ್ಬಗಳು ಸಾಂಸ್ಕೃತಿಕ ಆಚರಣೆಯಾಗಿದೆ. ಕೊನೆಗೆ ಎಲ್ಲರೂ ಬರಿಗೈಯಲ್ಲೇ ಹೋಗಬೇಕು. ಪ್ರಾಮಾಣಿಕತೆ ಕೊರತೆ ಇದ್ದರೆ ದೇಶ ನರಳುತ್ತದೆ. ಪಟ್ಟಣದ ಶ್ರಮಬಂಧು ಮಹಮದ್ ಉಮ್ಮರ್ ಸಾಬ್ ಅವರು ತಮ್ಮ ಕಾಯಕದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಂಡು ಶುದ್ದ ಮನಸ್ಸು ಹೊಂದಿದ್ದಾರೆ. ಎತ್ತು ಸಾಕುತ್ತಾರೆ, ಪ್ರಾಮಾಣಿಕವಾಗಿ ಕಾಯಕ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

ಚಿಕ್ಕಮಗಳೂರು ಜಿಲ್ಲೆ ಜಿಲ್ಲಾ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಪಂಗಡ ವಿಭಾಗದ ಅಧ್ಯಕ್ಷ ಟಿ.ಎನ್. ಸೋಮಶೇಖರ ಕವಾಲಿ ಮಾತನಾಡಿ ಅಮಾವಾಸ್ಯೆ ಪ್ರಕೃತಿದತ್ತವಾದುದು, ಮೌಢ್ಯ ಎನ್ನುವ ಕತ್ತಲು ನಿರಂತರವಾಗಿರುತ್ತದೆ. ಮಾನವ ಬಂಧುತ್ವ ವೇದಿಕೆಯಿಂದ ಮೌಢ್ಯದ ಕತ್ತಲೆಯಲ್ಲಿ ವೈಚಾರಿಕ ದೀಪಾವಳಿ 7ನೇ ವರ್ಷದ ಕಾರ್ಯಕ್ರಮ. ಮೌಢ್ಯದಿಂದ ದೂರ ಇರಬೇಕು. ಸತ್ತು ಹೋದ ಮನುಷ್ಯ ಯಾರಿಗೂ ಕೇಡು ಮಾಡುವುದಿಲ್ಲ. ಸಹಬಾಳ್ವೆಯಿಂದ ಇರಬೇಕು ಎಂದು ಹೇಳಿದರು.

ತಾಪಂ ಮಾಜಿ ಸದಸ್ಯ ಅಸ್ಲಾಂಖಾನ್ ಮಾತನಾಡಿ ಮೌಢ್ಯ ಬಿಡಬೇಕು, ಅನಾರೋಗ್ಯ ಉಂಟಾದಾಗ ವೈದ್ಯರ ಬಳಿ ಹೋಗಬೇಕು. ಶ್ರಮ ಮತ್ತು ಒಳ್ಳೇತನದಿಂದ ಇದ್ದರೆ ಮುಂದುವರಿಯಲು ಸಾಧ್ಯ ಎಂದು ಹೇಳಿದರು.

ಪುರಸಭಾ ಮಾಜಿ ಅಧ್ಯಕ್ಷ ಟಿ.ಕೆ.ರಮೇಶ್ ಮಾತನಾಡಿ ಮನಸ್ಸನ್ನು ಪರಿಶುದ್ದವಾಗಿಟ್ಟುಕೊಳ್ಳಬೇಕು ಎಂದು ಹೇಳಿದರು.

ಜಮಾತೆ ಇಸ್ಲಾಂ ಹಿಂದ್ ಅಧ್ಯಕ್ಷರು ಶೇಖ್ ಜಾವಿದ್ ಮಾತನಾಡಿ ಆಜ್ಞಾನದ ವಿರುದ್ಧ ಜ್ಞಾನದ ದೀಪಾವಳಿ ಆಚರಿಸಲಾಗುತ್ತಿದೆ. ಕೆಡಕಿನ ವಿರುದ್ಧ, ಅನ್ಯಾಯದ ವಿರುದ್ಧ ಹೋರಾಡಬೇಕು. ಆಜ್ಞಾನದ ಅಂಧಕಾರ ತೊಲಗಿಸಬೇಕು ಎಂದು ಹೇಳಿದರು.

ದ.ಸಂ.ಸ.ಸಂಚಾಲಕರಾದ ರಾಮಚಂದ್ರ ಅವರು ಮಾತನಾಡಿ ಸಮಾಜಕ್ಕೆ ಉತ್ತಮ ಸಂದೇಶ ನೀಡಬೇಕು. ಮೂಢ ನಂಬಿಕೆ ವಿರುದ್ಧ ವೈಚಾರಿಕ ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ವಕೀಲ ಟಿ.ಎಂ.ರಾಜು ಮಾತನಾಡಿ ಇದೊಂದು ಅತ್ಯುತ್ತಮ ಕಾರ್ಯಕ್ರಮ ಎಂದರು. ಪುರಸಭೆ ಮಾಜಿ ಸದಸ್ಯ ಅದಿಲ್ ಪಾಷ ಮಾತನಾಡಿ ಮೌಢ್ಯ ಎನ್ನುವುದು ಗೆದ್ದಲು ಹುಳ ಇದ್ದಹಾಗೆ, ಮೌಢ್ಯದಿಂದ ದೂರವಿರಬೇಕು ಎಂದು ಹೇಳಿದರು.

ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ನಾಗರಾಜ್ ಮಾತನಾಡಿ ಮೌಢ್ಯದಿಂದ ಅನ್ಯಾಯ ವಾಗುತ್ತಿದೆ. ಜ್ಞಾನ ಹೆಚ್ಚಾಗಬೇಕು, ಮೌಢ್ಯ ಕ್ಷೀಣಿಸಬೇಕು. ಈ ಚಳುವಳಿ ಯಶಸ್ವಿಯಾಗಬೇಕು ಎಂದು ಹೇಳಿದರು.

ಮುಖಂಡರಾದ ಟಿ.ವಿ.ಶ್ರೀನಿವಾಸ್ ಮತ್ತಿತರರು ಮಾತನಾಡಿದರು. ಮಾನವ ಬಂಧುತ್ವ ವೇದಿಕೆಯಿಂದ ಪಟ್ಟಣದ ಶ್ರಮಿಕ ಬಂಧು ಮಹಮದ್ ಉಮ್ಮರ್ ಸಾಬ್ ಅವರಿಗೆ ಮಾನವ ಬಂಧು ವೈಚಾರಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಚಿಕ್ಕಮಗಳೂರು ಜಿಲ್ಲೆ ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಚ್.ಪರಶುರಾಮ ಸ್ವಾಗತಿಸಿ ನಿರೂಪಿಸಿದರು.

13ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ಮಾನವ ಬಂಧುತ್ವ ವೇದಿಕೆ ವತಿಯಿಂದ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಪಟ್ಟಣದ ಶ್ರಮಬಂಧು ಮಹಮದ್ ಉಮ್ಮರ್ ಸಾಬ್ ಅವರನ್ನು ವೇದಿಕೆ ವತಿಯಿಂದ ಮಾನವ ಬಂಧು ವೈಚಾರಿಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾನವ ಬಂಧುತ್ವ ವೇದಿಕೆ ಸಂಚಾಲಕ ಎಚ್.ಪರಶುರಾಮ ಮತ್ತಿತರರು ಇದ್ದಾರೆ.