ಸಾರಾಂಶ
ದಾವಣಗೆರೆ: ಪರಿಸರ ಸಮತೋಲನ ಕಾಪಾಡಲು ಜೇನುಹುಳು ಸಂತತಿ ರಕ್ಷಣೆ ಅತ್ಯವಶ್ಯಕ ಎಂದು ದಾವಣಗೆರೆ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ. ಟಿ.ಎನ್. ದೇವರಾಜ ಹೇಳಿದರು.
ನಗರದಲ್ಲಿ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ಬೆಂಗಳೂರಿನ ರಾಷ್ಟ್ರೀಯ ಕೃಷಿ ಕೀಟ ಸಂಪನ್ಮೂಲ ಬ್ಯೂರೋ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಜೇನು ದಿನಾಚರಣೆ ಹಾಗೂ ಕೈತೋಟ ತರಬೇತಿಯಲ್ಲಿ ಅವರು ಮಾತನಾಡಿದರು.ಇಂದು ಇಡೀ ಸಸ್ಯ ಸಂಕುಲದಲ್ಲಿ ವೈವಿಧ್ಯತೆ ಮತ್ತು ಉತ್ಪಾದನೆ ಜೇನು ಹುಳಗಳ ಕಾರ್ಯದ ಮೇಲೆ ಅವಲಂಬನೆಯಾಗಿದೆ. ಪರಿಸರಸ್ನೇಹಿ ಕೃಷಿಗೆ ಜೇನು ಸಹಾಯವಾಗುತ್ತದೆ. ಪರಾಗಸ್ಪರ್ಶ ಕ್ರಿಯೆ ನಡೆಯಲು ಮತ್ತು ಮಕರಂದವನ್ನು ಹೀರಿ ನಮಗೆಲ್ಲ ಸಿಹಿಜೇನು ದೊರೆಯಲು ಇವು ಅನುಕೂಲ ಆಗುತ್ತವೆ ಎಂದರು.
ಕೇಂದ್ರದ ತೋಟಗಾರಿಕೆ ವಿಜ್ಞಾನಿ ಎಂ.ಜಿ. ಬಸವನಗೌಡ ಮಾತನಾಡಿ, ಜಗಳೂರು ತಾಲೂಕಿನ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ ಜಾಸ್ತಿ ಇದೆ. ಇದನ್ನು ನಿವಾರಿಸಲು ಮನೆಯ ಸುತ್ತ ಮುತ್ತ ಸಾವಯವ ರೂಪದಲ್ಲಿ ಕೈತೋಟ ಬೆಳೆಸಿ, ತರಕಾರಿಗಳನ್ನು ಆಹಾರದಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಪರಿಶಿಷ್ಟ ಪಂಗಡ ಉಪಯೋಜನೆಯಲ್ಲಿ ಆಯ್ದ 40 ಕುಟುಂಬಗಳಿಗೆ ಈ ವರ್ಷ ಪೌಷ್ಠಿಕ ಕೈತೋಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಟಿ.ಜಿ.ಅವಿನಾಶ್, ಧಾನ್ಯಗಳ ಸುರಕ್ಷಣಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿ, ಆಹಾರ ಧಾನ್ಯಗಳನ್ನು ಮನೆಗಳಲ್ಲಿ ಶೇಖರಿಸುವಾಗ ಮೋಹಕ ಸಾಧನ ಬಳಸುವುದರಿಂದ ರಾಸಾಯನಿಕ ಮುಕ್ತವಾಗಿ ಕೀಟಗಳ ಬಗ್ಗೆ ಮಾಹಿತಿ ಮತ್ತು ನಿಯಂತ್ರಣ ಸಾಧ್ಯ ಎಂದರು.
ಕಲ್ಲೇದೇವರಪುರ ಗ್ರಾಪಂ ಅಧ್ಯಕ್ಷೆ ವಸಂತ ಕುಮಾರಿ, ಬಿದರಕೆರೆ ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿ ನಿರ್ದೇಶಕ ಕೃಷ್ಣಮೂರ್ತಿ ಮಾಸ್ತರ್, ರೈತರು ಮತ್ತು ರೈತ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.- - - (* ಈ ಫೋಟೋ-ಕ್ಯಾಪ್ಷನ್ ಪ್ಯಾನೆಲ್ಗೆ ಬಳಸಿ)
-20ಕೆಡಿವಿಜಿ31:ದಾವಣಗೆರೆಯ ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ನಡೆದ ವಿಶ್ವ ಜೇನು ದಿನಾಚರಣೆ, ಕೈತೋಟ ತರಬೇತಿ ಕಾರ್ಯಕ್ರಮದಲ್ಲಿ ಡಾ. ಟಿ.ಎನ್.ದೇವರಾಜ ಮಾತನಾಡಿದರು.