ಹನಿಟ್ರ್ಯಾಪ್‌ ಪ್ರಕರಣ: ಇಬ್ಬರು ಆರೋಪಿಗಳ ಸೆರೆ

| Published : Sep 09 2024, 01:39 AM IST

ಸಾರಾಂಶ

ಮುಂಬೈ ಮೂಲದ ಯುವತಿ ದೂರನ್ನಾಧರಿಸಿ ಪ್ರಕರಣ ದಾಖಲು । ರಾಜು ಲೇಂಗಟಿ, ಪ್ರಭು ಹಿರೇಮಠ ಬಂಧನ

ಕನ್ನಡಪ್ರಭ ವಾರ್ತೆ ಕಲಬುರಗಿ

ಹನಿಟ್ರ್ಯಾಪ್‌, ರೇಪ್‌ ಹಾಗೂ ನ್ಯಾಯ ಕೊಡಿಸುವ ನೆಪದಲ್ಲಿ ಮಾಡಲಾದ ಮೋಸ- ವಂಚನೆಯ ಪ್ರಕರಣ ಕಲಬುರಗಿಯಲ್ಲಿ ಇದೀಗ ಜೋರಾಗಿ ಸದ್ದು ಮಾಡುತ್ತಿದೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಲಬುರಗಿ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ತೀವ್ರಗೊಳಿಸಿದ್ದಾರೆ.

ನ್ಯಾಯ ಒದಗಿಸುವ, ನೌಕರಿ ಕೊಡಿಸುವ ನೆಪ ಮಾಡಿಕೊಂಡು ರೇಪ್‌ ಮಾಡಿ ತನ್ನನ್ನು ಹನಿಟ್ರ್ಯಾಪ್‌ಗೂ ಬಳಸಿದ್ದಾರೆಂದು ಮುಂಬೈ ಮೂಲದ ಯುವತಿ ಸೇರಿದಂತೆ ಸಂತ್ರಸ್ತ ಯುವತಿಯರು ನೀಡಿರುವ ದೂರನ್ನಾಧರಿಸಿ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿನ ಆರೋಪಿಗಳಾದ ರಾಜು ಲೇಂಗಟಿ ಹಾಗೂ ಪ್ರಭು ಹಿರೇಮಠ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಮಾಜಿಕ ಜಾಲ ತಾಣದಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿತ್ತು, ಕಲಬುರಗಿಗೆ ಬಂದರೆ ನೌಕರಿ ಕೊಡಿಸುವ ಭರವಸೆ ನೀಡಿದ್ದರಿಂದ ಮುಂಬೈನ ಹೋಟಲ್ ನೌಕರಿ ಬಿಟ್ಟು ಇಲ್ಲಿಗೆ ಬಂದಾಗ ತನ್ನನ್ನು ನಂಬಿಸಿ ಮೋಸ ಮಾಡಲಾಯ್ತಲ್ಲದೆ ಅತ್ಯಾಚಾರ ಎಸಗಿ, ತನ್ನನ್ನು ಈ ಗ್ಯಾಂಗ್‌ ಹನಿಟ್ರ್ಯಾಪ್‌ಗೂ ಬಳಸಲಾಗಿತ್ತು ಎಂದು ಮುಂಬೈ ಮೂಲದ ಯುವತಿ ತನದಾಗ ನೋವು- ಯಾತನೆಗಳನ್ನೆಲ್ಲ ವಿವರಿಸಿ ಸುದ್ದಿಗೋಷ್ಠಿ ಮಾಡಿದ್ದಳು. ಅದಕ್ಕೂ ಮೊದಲು ಕಮೀಶನರ್‌ ಕಚೇರಿಗೆ ದೂರು ಸಲ್ಲಿಸಿ ಗಮನ ಸೆಳೆದಿದ್ದಳು.

ತಾವು ಕಷ್ಟದಲ್ಲಿದ್ದೇವೆಂದು ನೆರವು ಕೇಳಿ ಬಂದ ಯುವತಿಯರನ್ನ ಖೆಡ್ಡಾಗೆ ಕೆಡವಿ ಲೈಂಗಿಕವಾಗಿ ಬಳಸಿಕೊಂಡು, ನಂತರ ಹನಿಟ್ರ್ಯಾಪ್ ಮಾಡುವ ಗ್ಯಾಂಗ್‌ ಕಲಬುರಗಿಯಲ್ಲಿ ಸಕ್ರೀಯವಾಗಿದೆ. ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳನ್ನೆ ಟಾರ್ಗೇಟ್ ಮಾಡಿ ಗಾಳ ಹಾಕುತ್ತಾರೆ. ನಮ್ಮಂತಹ ಯುವತಿಯರನ್ನ ಮುಂದೆ ಬಿಟ್ಟು ಲಾಡ್ಜ್ ಗೆ ಕರೆಯಿಸುತ್ತಾರೆ, ಬಳಿಕ ತಾವೇ ದಾಳಿ ಮಾಡಿ, ಫೋಟೋ, ವಿಡಿಯೋ ತೆಗೆದು ಹಣ ನೀಡುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಾರೆಂದು ಈಚೆಗೆ ಸಂತ್ರಸ್ತ ಮೂವರು ಯುವತಿಯರು ಸುದ್ದಿಗೋಷ್ಠಿ ನಡೆಸಿ ಗೋಳಾಡಿದ್ದರು.

ಸಂತ್ರಸ್ತ ಯುವತಿಯರು ನೀಡಿರುವ ದೂರನ್ನಾಧರಿಸಿ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ದಲಿತ ಸೇನೆ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ, ರಾಜು ಲೆಂಗಟಿ, ಪ್ರಭು ಹಿರೇಮಠ, ಮಂಜು ಬಂಢಾರಿ, ಶ್ರೀಕಾಂತ ರೆಡ್ಡಿ, ಸಂತೋಷ ಸೇರಿದಂತೆ ಎಂಟು ಜನರ ವಿರುದ್ದ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಸಂತ್ರಸ್ತ ಯುವತಿರ ಗೋಳಾಟದ ಹೇಳಿಕೆಗಳ ಸುದ್ದಿ ಪತ್ರಿಕೆಗಳಲ್ಲಿ ಬರುತ್ತಿದ್ದಂತೆಯೇ ಇಲ್ಲಿನ ಪೊಲೀಸ್‌ ವಲಯದಲ್ಲಿ ತೀವ್ರ ಸಂಚಲನ ಮೂಡಿತ್ತಲ್ಲದೆ ಯುವತಿಯ ದಾರನ್ನಾಧರಿಸಿ ಕಾರ್ಯಪ್ರವೃತ್ತರಾಗಿರುವ ಪೊಲೀಸರು ರಾಜು ಲೇಂಗಟಿ ಹಾಗೂ ಪ್ರಭು ಹಿರೇಮಠರನ್ನ ಬಂಧಿಸಿದ್ದಾರೆ.

ಅಫಜಲ್ಪುರದಿಂದ ಕಲಬುರಗಿಗೆ ವರ್ಗವಾಯ್ತು ಕೇಸ್‌

ಏತನ್ಮಧ್ಯೆ ಅಕ್ಕಲಕೋಟೆ ಮೂಲದ ಸಂತ್ರಸ್ತ ಯುವತಿ ತನನ್ನು ಮದುವೆಯಾಗೋದಾಗಿ ನಂಬಿಸಿ ಪುಸಲಾಯಿಸಿ ಲೈಂಗಿಕವಾಗಿ ಬಳಸಿಕೊಳ್ಳಲಾಗಿದೆ ಎಂದು ಸುಶೀಲ್‌ ಮತ್ತವನ ಗೆಳೆಯರ ವಿರುದ್ಧ ನೀಡಿದ್ದ ದೂರಿನನ್ವಯ ಅಫಜಲ್ಪುರ ಠಾಣೆಯಲ್ಲಿ ದಾಖಲಾಗಿದ್ದ ಗುನ್ನೇ 160, 2024ರ ಪ್ರಕರಣವನ್ನು ಅಲ್ಲಿಂದ ಕಲಬುರಗಿ ಸ್ಟೇಷನ್‌ ಬಜಾರ್‌ ಠಾಣೆಗೆ ವರ್ಗ ಮಾಡಲಾಗಿದೆ. ಈ ಪ್ರಕರಣ ಅಲ್ಲಿಂದ ಕಲಬುರಗಿಗೆ ವರ್ಗವಾದ ನಂತರ ಈ ಪ್ರಕರಣದಲ್ಲಿ ಎಲ್ಲವನ್ನು ಬಗೆಹರಿಸೋದಾಗಿ ಶ್ರೀಕಾಂತ ರೆಡ್ಡಿ, ಮಂಜುನಾಥ ಭಂಡಾರಿ, ರಾಜು ಲೇಂಗಟಿ ಸೇರಿದಂತೆ ಹಲವರು ಮಧ್ಯಸ್ಥಿಕೆ ವಹಿಸಿದ್ದರು. ಸಮಸ್ಯೆಗಳನ್ನು ಬಗೆಹರಿಸದೆ ಇಡೀ ಪ್ರಕರಣದಲ್ಲಿ ಆರೋಪಿ ಪರವಾಗಿ ನಿಲ್ಲುವ ಮೂಲಕ ಗರ್ಭಪಾತ ಮಾಡಿಸಿದ್ದಾರೆಂದು ಅಕ್ಕಲಕೋಟೆ ಮೂಲದ ಯುವತಿ ದೂರಿದ್ದಾಳೆ. ಈ ಪ್ರಕರಣದಲ್ಲಿ ದಲಿತ ಸೇನೆಯವರೆಂದು ಹೇಳಿಕೊಂಡ ಅನೇಕರು ತನ್ನನ್ನು ಹೆದರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ಯುವತಿ ದೂರಿದ್ದು ತನಗೆ ನ್ಯಾಯ ಕೊಡುವಂತೆ ಕೋರಿ ಸುದ್ದಿಗೋಷ್ಠಿ ನಡೆಸಿದ್ದಾಳೆ. ಸದರಿ ಪ್ರಕರಣದಲ್ಲಿ ಪೊಲೀಸರು ಇನ್ನೂ ಕಾರ್ಯಾಚರಣೆಗೆ ಮುಂದಾಗಿಲ್ಲ.

ಕಲಬುರಗಿ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಹನಿಟ್ರ್ಯಾಪ್​ ಮಾಡಿ ಹಣ ತೆಗೆದುಕೊಂಡಿದ್ದರ ಬಗ್ಗೆ ಪ್ರಕರಣದಲ್ಲಿನ ಆರೋಪಿ ಪ್ರಭು ಹಿರೇಮಠ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಉದ್ಯಮಿ ವಿನೋದ್ ಗೆ ಹನಿಟ್ರ್ಯಾಪ್ ಮಾಡಿ ಹಣ ವಸೂಲಿ ಮಾಡಿದ್ದು ನಿಜ. ಅವರು 6 ಲಕ್ಷ ನನ್ನ ಅಕೌಂಟ್ ಗೆ ಆರ್‌ಟಿಜಿಎಸ್‌ ಮಾಡಿದ್ದಾರೆ. ಅದಾದ ಬಳಿಕ ನಮ್ಮ ಮಾವನ ಅಕೌಂಟ್ ಗೆ 8 ಲಕ್ಷ ಹಣ ಹಾಕಲಾಗಿದೆ ಎಂದು ಹೇಳಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಹನಿಟ್ರ್ಯಾಪ್ ಪ್ರಕರಣದ ಆರೋಪಿ ಪ್ರಭು ಹಿರೇಮಠ ಸದ್ಯ ಪೊಲೀಸ್‌ ಬಂಧನದಲ್ಲಿದ್ದಾನೆ, ಈತ ಬಂಧನಕ್ಕೂ ಪೂರ್ವದಲ್ಲಿ ಈ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದ. ನನ್ನ ಅಕೌಂಟ್​ಗೆ ಹಣ ಹಾಕಿ ರಾಜು ಲೆಂಗಟಿ ವಿತ್ ಡ್ರಾ ಮಾಡಿಸಿಕೊಂಡಿದ್ದಾನೆ. ಆ ಹಣವನ್ನು ಸರ್ ಗೆ ಕೊಡಬೇಕು ಅಂತಾ ಹೇಳಿ ತೆಗೆದುಕೊಂಡು ಹೋಗಿದ್ದಾನೆ. ಸದ್ಯ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಭು ಹಿರೇಮಠ ವಿಡಿಯೋ ಸಂಚಲನ ಮೂಡಿಸಿದೆ.

ನೀವು ಎಲ್ಲರು ಪಾಪಿಗಳು... ನನಗೆ ಬಲಿಪಶು ಮಾಡಿದ್ದೀರಿ...

ಏತನ್ಮಧ್ಯೆ ಅಮಾಯಕ ಯುವತಿಯರಿಗೆ ರೇಪ್‌ ಮಾಡಿ ಹನಿಟ್ರ್ಯಾಪ್‌ಗೆ ಬಳಸಲಾಗುತ್ತಿತ್ತು ಎಂಬ ಆರೋಪ ಎದುರಿಸುತ್ತಿರುವ ಹಾಗೂ ಪೊಲೀಸ್‌ ಬಂಧನದಲ್ಲಿರುವ ರಾಜು ಲೇಂಗಟಿ ಹಾಗೂ ಮುಂಬೈ ಮೂಲದ ಯುವತಿ ಇವರಿಬ್ಬರ ನಡುವಿನ ಆಡಿಯೋ ವೈರಲ್‌ ಆಗಿದೆ.

ಇವರಿಬ್ಬರ ಸಂಭಾಷಣೆಯಲ್ಲಿ ರಾಜು ಲೇಂಗಟಿ ಯುವತಿಗೆ ಅನೇಕ ಸಂಗತಿಗಳನ್ನು ಹೇಳಲು ಯತ್ನಿಸಿದಾಗ ಆ ಯುವತಿ ಇವನ ಯಾವ ಮಾತಿಗೂ ಆಸ್ಪದ ಕೊಡದೆ ನೀವು ಪಾಪಿಗಳಿದ್ದೀರಿ, ವಿನೋದ ಅಮಾಯಕ, ಆತನನ್ನೇ ಬಲೆಗೆ ಹಾಕಿದ್ದೀರಿ. ಲಕ್ಷಾಂತರ ಹಣ ವಸೂಲಿ ಮಾಡಿ ನನಗೆ ಬಲಿಪಶು ಮಾಡಿದ್ದೀರಿ. ನಾನು ಇದರಿಂದ ತುಂಬ ನೊಂದಿರುವೆ. ನೀವು ಪಾಪಿಗಳು, ದೇವರು ನಿಮಗೆ ಕ್ಷಮಿಸೋದಿಲ್ಲ ಎಂದು ನೊಂದು ಆಡಿದ ಮಾತುಗಳು ಸ್ಪಷ್ಟವಾಗಿವೆ.

ಸಂಭಾಷಣೆಯುದ್ದಕ್ಕೂ ರಾಜು ಲೆಂಗಟಿ ಯುವತಿಗೆ ನಿಂದಿಸಲು ಯತ್ನಿಸಿದ್ದಾನೆ. ಆದರೆ ಯುವತಿ ಈತನ ಪ್ರತಿ ಮಾತಿಗೂ ಸಿಡಿದೆದ್ದಿದ್ದಾಳೆ. ನಿಮ್ಮ ಮಾತು ನಂಬಿ ಕೆಟ್ಟೆ ಎಂದು ಹೇಳಿ ನಂತರ ತಾನೀಗ ತುಂಬ ಬ್ಯೂಸಿ ಇರೋದಾಗಿ ಹೇಳಿ ಸಂಭಾಷೆ ನಿಲ್ಲಿಸಿದ್ದಾಳೆ.