ಎಸ್ಸೆಸ್ಸೆಲ್ಸಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

| Published : May 06 2025, 12:23 AM IST

ಸಾರಾಂಶ

ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ ಇಂದು ಆಲದ ಮರದ ಹಾಗೆ ಬೆಳೆದಿದ್ದು ಕನ್ನಡ ಭಾಷೆಯನ್ನು ಸದೃಢಗೊಳಿಸಲು ಅಂದೇ ರಾಜರು ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ೧೯೧೫ರಲ್ಲಿ ಸಾಹಿತ್ಯ ಪರಿಷತ್ ಉಗಮವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಪರಿಷತ್‌ ಅನ್ನು ಬೆಳೆಸುತ್ತಿದ್ದಾರೆ, ಅದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಶಾಸಕ ಸಿ. ಎನ್. ಬಾಲಕೃಷ್ಣ ಹೇಳಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ತಾಲೂಕಿನ ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಮಕ್ಕಳನ್ನು ಶಾಸಕ ಸಿ. ಎನ್. ಬಾಲಕೃಷ್ಣ ಅಭಿನಂದಿಸಿದರು.

ಇದೇ ವೇಳೆ ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಕಟ್ಟಿದ ಕನ್ನಡ ಸಾಹಿತ್ಯ ಪರಿಷತ್ ಇಂದು ಆಲದ ಮರದ ಹಾಗೆ ಬೆಳೆದಿದ್ದು ಕನ್ನಡ ಭಾಷೆಯನ್ನು ಸದೃಢಗೊಳಿಸಲು ಅಂದೇ ರಾಜರು ಬುನಾದಿ ಹಾಕಿಕೊಟ್ಟಿದ್ದಾರೆ ಎಂದು ಶಾಸಕ ಬಾಲಕೃಷ್ಣ ತಿಳಿಸಿದರು. ೧೯೧೫ರಲ್ಲಿ ಸಾಹಿತ್ಯ ಪರಿಷತ್ ಉಗಮವಾಯಿತು. ಅಂದಿನಿಂದ ಇಂದಿನವರೆಗೂ ಕನ್ನಡಿಗರು ಪರಿಷತ್‌ ಅನ್ನು ಬೆಳೆಸುತ್ತಿದ್ದಾರೆ, ಅದನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ೨೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಶ್ರವಣಬೆಳಗೊಳದಲ್ಲಿ ನಡೆದದ್ದು ಇತಿಹಾಸ. ಕನ್ನಡದ ಗೌರವವನ್ನು ಹೆಚ್ಚಿಸುವುದು ನಮ್ಮ ಜವಾಬ್ದಾರಿ. ವ್ಯಾಕರಣಬದ್ಧವಾದ ಕನ್ನಡ ಇಲ್ಲದಿದ್ದರೆ ಬೇರೆ ಅರ್ಥವನ್ನು ಕೊಡುತ್ತದೆ ಆದ್ದರಿಂದ ಮಕ್ಕಳು ಚಿಕ್ಕಂದಿನಲ್ಲೇ ವ್ಯಾಕರಣವನ್ನು ಸ್ಪಷ್ಟವಾಗಿ ಕಲಿಯಬೇಕು ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ ತನ್ನದೇ ಆದ ಇತಿಹಾಸ ಹೊಂದಿದೆ. ಸಾಹಿತಿಗಳು, ಕಲಾವಿದರು, ಕನ್ನಡ ಮನಸ್ಸುಗಳು ಒಂದೇ ವೇದಿಕೆಯಲ್ಲಿ ಹೋಗುವ ಹಾಗೇ ಪರಿಷತ್ ಅನ್ನು ರಾಜರು ಸ್ಥಾಪಿಸಿದ್ದಾರೆ. ಆದರೆ ಈಗ ಸರ್ಕಾರ ಪರಿಷತ್ ಅನ್ನು ಮುನ್ನಡೆಸಲು ಸಹಾಯ ಹಸ್ತ ನೀಡುತ್ತಿದ್ದು ಪ್ರತಿ ವರ್ಷ ರಾಜ್ಯ ಸಮ್ಮೇಳನಗಳನ್ನು ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಸಮ್ಮೇಳನಗಳು ನಡೆಯುತ್ತವೆ, ಸಾಹಿತ್ಯ ಪರಿಷತ್ ಗಡಿನಾಡಿನಾಚೆಗೂ ಪಸರಿಸಿದ್ದು ಕನ್ನಡ ಭಾಷೆ ಸಂಸ್ಕೃತಿ, ನೆಲ, ಜಲಕ್ಕೆ ತನ್ನದೇ ಆದ ಮಹತ್ವವಿದೆ ಎಂದರು. ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಇದೇ ವೇಳೆ ರಾಜ್ಯಪ್ರಶಸ್ತಿ ಪುರಸ್ಕೃತರಾದ ವಿಠ್ಠಲದಾಸರು, ಕಲಾವಿದ ದಮ್ಮನಿಂಗಲ ಶಂಕರ್‌ರನ್ನು ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಸಾಹಿತಿ ಡಾ. ನಿಂಬೇಹಳ್ಳಿ ಚಂದ್ರು, ಜಿಲ್ಲಾ ಕಸಾಪ ಕಾರ್ಯಧ್ಯಕ್ಷ ಬೊಮ್ಮೇಗೌಡ, ಸಹ ಕಾರ್ಯದರ್ಶಿ ಎಂ. ಡಿ. ನಾಗೇಶ್, ಹಾಸನ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ರಮೇಶ್, ರಾಜ್ಯ ಸಮಿತಿಯ ಮುಳ್ಕೆರೆ ಪ್ರಕಾಶ್, ಮಲ್ಲೇಗೌಡ, ಯಶೋಧಜೈನ್, ಮಮತಾಜೈನ್, ರೂಪಾ, ಸಾವಿತ್ರಿ ಮತ್ತಿತರಿದ್ದರು. ದಿಂಡಗೂರು ಗೋವಿಂದರಾಜ್, ಶಿವನಗೌಡ ಪಾಟೀಲ್, ಜಬೀಉಲ್ಲಾ ಬೇಗ್ ಇದ್ದರು.