ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರ ರೈತರು ದಲ್ಲಾಳಿಗಳ ಕಪಿಮುಷ್ಟಿಂದ ಹೊರತಾಗಿ ತಾವು ಬೆಳೆದ ಹಣ್ಣು, ತರಕಾರಿಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಲು ಸ್ಥಾಪಿಸಿಕೊಂಡಿದ್ದ ನೇರ ಮಾರುಕಟ್ಟೆ ಹಾಫ್ ಕಾಮ್ಸ್ ಸಹಕಾರ ಸಂಸ್ಥೆ ಇದೀಗ ದಿನೇ ದಿನೇ ಕುಸಿಯುತ್ತಿದ್ದು, ಸಂಸ್ಥೆಯ ರಾಜ್ಯಾಧ್ಯಕ್ಷ ಗೋಪಾಲ್ಕೃಷ್ಣೇಗೌಡರ ತವರು ಜಿಲ್ಲೆಯಲ್ಲಿಯೇ ಅವನತಿಯ ಹಾದಿ ಹಿಡಿದಿದೆ. ಅದನ್ನು ಉಳಿಸಿ ಉತ್ತೇಜಿಸಲು ಹಾಪ್ ಕಾಮ್ಸ್ ಸಹಕಾರ ಸಂಸ್ಥೆ, ರೈತರು ಮತ್ತು ಸರ್ಕಾರ ದಿಟ್ಟ ಹೆಜ್ಜೆ ಇಡಬೇಕಿದೆ.ಕಳೆದ ೩ ದಶಕಗಳ ಹಿಂದೆ ಲಾಲ್ ಬಾಗ್ ಸಂಯುಕ್ತಾಶ್ರಯದಲ್ಲಿ ಸ್ಥಾಪನೆಗೊಂಡ ಹಾಪ್ ಕಾಮ್ಸ್ ಪ್ರತಿ ಜಿಲ್ಲಾ ಕೇಂದ್ರದಲ್ಲಿ ರೈತರಿಂದ ಹಣ್ಣು, ತರಕಾರಿಗಳನ್ನು ಯಾವುದೇ ದಲ್ಲಾಳಿ ಇಲ್ಲದೆ ನೇರವಾಗಿ ಖರೀದಿ ಮಾಡಲು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಆ ಖರೀದಿ ಕೇಂದ್ರಗಳು ಪ್ರತಿ ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಜನನಿಬಿಡ ಪ್ರದೇಶಗಳಲ್ಲಿ ಹಾಪ್ಕಾಮ್ಸ್ ಅಂಗಡಿ ತೆರೆದು ನೇರವಾಗಿ ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಗುಣಮಟ್ಟದ ಹಣ್ಣು ತರಕಾರಿಗಳನ್ನು ಮಾರಾಟ ಮಾಡಿ, ಉತ್ತಮ ಲಾಭ ಗಳಿಸುವ ಮೂಲಕ ರೈತರಿಗೆ ಉತ್ತಮ ಬೆಲೆ ನೀಡಲಾಗುತ್ತಿತ್ತು. ಆದರೆ ಬಂಡವಾಳ ಶಾಹಿಗಳ ಕೆಂಗಣ್ಣಿಗೆ ಗುರಿಯಾದ ಹಾಪ್ ಕಾಮ್ಸ್ ಕಳೆದ ೧೦ ವರ್ಷಗಳಿಂದ ಕ್ಷೀಣಿಸುತ್ತಿದ್ದು, ಇದೀಗ ಬಹುತೇಕ ಹಾಪ್ ಕಾಮ್ಸ್ ಅಂಗಡಿಗಳು ಬಾಗಿಲು ಮುಚ್ಚಿದರೆ ಖರೀದಿ ಕೇಂದ್ರದಲ್ಲಿಯೂ ಕೇವಲ ಕೆ.ಜಿಗಳ ಲೆಕ್ಕದಲ್ಲಿ ರೈತರಿಂದ ಹಣ್ಣು ತರಕಾರಿ ಖರೀದಿ ಮಾಡುವ ಹಂತಕ್ಕೆ ಬಂದು ತಲುಪಿದೆ. ಸಹಕಾರಿ ಕೇಂದ್ರವಾಗಿರುವ ಕೋಲಾರದಲ್ಲಿ ೧೯೯೧ರಲ್ಲಿ ಸ್ಥಾಪನೆಗೊಂಡು ಸತತ ಎರಡು ದಶಕಗಳ ಕಾಲ ಯಶಸ್ವಿಯಾಗಿ ಮುನ್ನಡೆ ಕಂಡಿತ್ತು. ಕೋಲಾರ ಜಿಲ್ಲೆಯೊಂದರಲ್ಲಿಯೇ ೩೮ ಹಾಪ್ ಕಾಮ್ಸ್ ಮಳಿಗೆಗಳನ್ನು ತೆರೆದು, ಉತ್ತಮ ವಹಿವಾಟು ಸಹ ನಡೆಸಲಾಗುತ್ತಿತ್ತು, ಇದರಲ್ಲಿ ರೈತರಿಂದ ನೇರವಾಗಿ ಖರೀದಿ ಮಾಡುತ್ತಿದ್ದರಿಂದ ಹಾಪ್ ಕಾಮ್ಸ್ ಗಳಿಸುತ್ತಿದ್ದ ಲಾಭಾಂಶ ರೈತರಿಗೂ ಸೇರುತ್ತಿತ್ತು. ಆದರೆ ಕಳೆದ ೧೦ ವರ್ಷಗಳಿಂದೀಚೆಗೆ ಜಿಲ್ಲೆಯಲ್ಲಿ ಹಾಪ್ ಕಾಮ್ಸ್ ಅಂಗಡಿಗಳು ದಿನೇ ದಿನೇ ಮುಚ್ಚಲು ಪ್ರಾರಂಭಿಸಿ ಇದೀಗ ಜಿಲ್ಲೆಯಲ್ಲಿ ಕೇವಲ ೪ ಹಾಫ್ ಕಾಮ್ಸ್ ಅಂಗಡಿಗಳು ಮಾತ್ರ ವಹಿವಾಟು ಮಾಡುತ್ತಿವೆ.ಶ್ರೀನಿವಾಸಪುರ-೧, ಮುಳಬಾಗಿಲು-೧, ಬಂಗಾರಪೇಟೆ-೧, ಕೋಲಾರ-೧ ಒಟ್ಟು ೪ ಮಳಿಗೆಗಳು ಮಾತ್ರ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೋಲಾರದಲ್ಲಿ ಖರೀದಿಸಲು ಪ್ರತಿದಿನ ಒಂದೂವರೆ ಟನ್ ರಷ್ಟು ತರಕಾರಿ ಮತ್ತು ೫೦೦ ಕೆ.ಜಿ. ಬಾಳೆಹಣ್ಣು, ೪೦೦ ಕೆ.ಜಿ.ಯಷ್ಟು ವಿವಿಧ ರೀತಿಯ ಹಣ್ಣುಗಳು ಖರೀದಿ ಕೇಂದ್ರಕ್ಕೆ ಬರುತ್ತಿದೆ. ಬರುವ ತರಕಾರಿಯನ್ನು ಕೆ.ಜಿ.ಎಫ್. ಬಿಜಿಎಂಎಲ್ಗೆ ರವಾನಿಸಲಾಗುತ್ತಿದೆ. ರಸ್ತೆಗಳ ಅಗಲೀಕರಣದಲ್ಲಿ ಅಂಗಡಿಗಳನ್ನು ತೆರವುಗೊಳಿಸಿರುವ ಕಾರಣ ಹಾಗೂ ಸಿಬ್ಬಂದಿ ಇಲ್ಲದ ಕಾರಣ ಕೇವಲ ಜಿಲ್ಲೆಯಲ್ಲಿ ೪ ಅಂಗಡಿಗಳು ಮಾತ್ರ ಕಾರ್ಯನಿರ್ವಜಿಸುತ್ತಿವೆ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸಿದ್ದಾರೆ. ಮಾಲ್ ಮುಂಭಾಗ ವ್ಯಾಪಾರ ಕೇಂದ್ರ ತೆರೆಯಲಿ: ಇದೀಗ ಮಾವಿನ ಸುಗ್ಗಿ ಪ್ರಾರಂಭವಾಗಿದ್ದು ಹಾಫ್ ಕಾಮ್ಸ್ ಹೆಚ್ಚು ಕಾರ್ಯಪ್ರವೃತ್ತರಾಗಿ ರೈತರಿಂದ ಹೆಚ್ಚು ಮಾವು ಖರೀದಿಸಿ ನಗರ ಪ್ರದೇಶಗಳ ಮಾಲ್ ಗಳ ಸಹಭಾಗಿತ್ವದಲ್ಲಿ ಮಾಲ್ ಗಳ ಮುಂಭಾಗ ವ್ಯಾಪಾರ ಕೇಂದ್ರ ತೆರೆದು ವಹಿವಾಟು ನಡೆಸಿದರೆ ಹಾಪ್ ಕಾಮ್ಸ್ ಸಹಕಾರಿ ಸಂಸ್ಥೆಗೆ ಹೆಚ್ಚು ಉತ್ತೇಜನ ನೀಡಬಹುದಾಗಿದೆ. ಇದರಿಂದ ರೈತರೂ ಸಹ ದಲ್ಲಾಳಿಗಳ ಕಪಿ ಮುಷ್ಟಿಯಿಂದ ತಪ್ಪಿಸಿಕೊಂಡು ಹೆಚ್ಚು ಲಾಭ ಗಳಿಸಬಹುದಾಗಿದೆ.ರಾಜ್ಯದಲ್ಲಿ ಹೆಚ್ಚು ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುವ ಜಿಲ್ಲೆಗಳಲ್ಲಿ ಒಂದಾದ ಕೋಲಾರ ಜಿಲ್ಲೆಯಲ್ಲಿ ಹಾಫ್ ಕಾಮ್ಸ್ ಸಹಕಾರಿ ವಲಯವನ್ನು ಅಭಿವೃದ್ದಿಪಡಿಸಿ ನಂದಿನಿ ಪಾರ್ಲರ್ ರೀತಿಯಲ್ಲಿ ಪ್ರಮುಖ ಜನಬಿಡ ಮತ್ತು ವಸತಿ ಪ್ರದೇಶಗಳಲ್ಲಿ ವ್ಯಾಪಾರ ಕೇಂದ್ರಗಳನ್ನು ಹೆಚ್ಚು ಹೆಚ್ಚು ತೆರೆದು ಗ್ರಾಹಕರಿಗೆ ನೇರವಾಗಿ ರೈತರಿಂದ ಖರೀದಿಸಿದ ಹಣ್ಣು ತರಕಾರಿಗಳನ್ನು ಕೈಗೆಟುಕುವ ದರದಲ್ಲಿ ಸಿಗುವಂತೆ ಮಾಡಿ ರೈತರನ್ನು ದಲ್ಲಾಳಿದಾರರಿಂದ ಮುಕ್ತಿಗೊಳಿಸಬೇಕಿದೆ.-ಚಿನ್ನಪ್ಪರೆಡ್ಡಿ, ಜಿಲ್ಲಾ ಮಾವು ಬೆಳೆಗಾರರ ಸಂಘದ ಅಧ್ಯಕ್ಷ