ಕನ್ನಡಪ್ರಭ ವಾರ್ತೆ ದಾಂಡೇಲಿ
ಭಾರತ ಸರ್ಕಾರದ ನಿರ್ದೇಶನದಂತೆ ದೇಶಾದ್ಯಂತ ನಡೆಯುತ್ತಿರುವ ‘ಭಾರತದ ಜನಗಣತಿ 2027’ರ ಪ್ರಕ್ರಿಯೆಯು ದಾಂಡೇಲಿ ನಗರ ಸಭೆಯ ವ್ಯಾಪ್ತಿಯಲ್ಲಿ ಏ. 16ರಿಂದ ಅಧಿಕೃತವಾಗಿ ಆರಂಭಗೊಂಡಿದೆ. ಈ ಮಹತ್ವದ ಜನಗಣತಿ ಕಾರ್ಯವು ಒಟ್ಟು ಎರಡು ಹಂತಗಳಲ್ಲಿ ನಡೆಯಲಿದ್ದು, ಪ್ರಸ್ತುತ ಮೊದಲ ಹಂತದ ‘ಮನೆಪಟ್ಟಿ ಕಾರ್ಯಾಚರಣೆ’ಗೆ ಚಾಲನೆಗೆ ನೀಡಲಾಗಿದೆ ಎಂದು ನಗರಸಭೆಯ ಪೌರಾಯುಕ್ತ ವಿವೇಕ ಬನ್ನೆ ಹೆಳಿದರು.ಕಾರ್ಯಾಚರಣೆಯ ವಿವರಗಳು:ಮೊದಲ ಹಂತ (ಮನೆಪಟ್ಟಿ ಕಾರ್ಯಾಚರಣೆ): 2026ರ ಏ. 1ರಿಂದ ಮೇ 15ರವರೆಗೆ ನಡೆಯಲಿದೆ. ಸ್ವಯಂ ಗಣತಿ (Self Enumeration): ಸರ್ಕಾರದ ಸೂಚನೆಯಂತೆ ಏ. 1 ರಿಂದ 15 ರವರೆಗೆ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡಿಕೊಳ್ಳಲು ಅವಕಾಶ ನೀಡಲಾಗಿತ್ತು, ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಎರಡನೇ ಹಂತ (ಜನಗಣತಿ ಕಾರ್ಯಾಚರಣೆ): ಮುಂದಿನ ವರ್ಷ ಅಂದರೆ 2027ರ ಫೆಬ್ರವರಿ ತಿಂಗಳಿನಲ್ಲಿ ನಡೆಯಲಿದೆ.ದಾಂಡೇಲಿ ನಗರದ ಸನ್ನದ್ಧತೆ:
ಇಂದು ನಗರಸಭೆಯ ಆವರಣದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗಣತಿದಾರರು, ಮೇಲ್ವಿಚಾರಕರು ಮತ್ತು ನಗರಸಭೆ ಸಿಬ್ಬಂದಿ ವರ್ಗದವರಿಗೆ ಅಗತ್ಯ ಸೂಚನೆ ನೀಡಲಾಯಿತು. 2011ರ ಜನಗಣತಿಯ ಪ್ರಕಾರ ದಾಂಡೇಲಿಯ ಜನಸಂಖ್ಯೆ 52,069 ಆಗಿದ್ದು, 12,627 ಕುಟುಂಬಗಳಿದ್ದವು. 2027ರ ವೇಳೆಗೆ ಜನಸಂಖ್ಯೆ ಮತ್ತು ಮನೆಗಳ ಸಂಖ್ಯೆಯಲ್ಲಿ ಶೇ.15 ರಿಂದ 20 ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಸುಮಾರು 60,000 ಜನಸಂಖ್ಯೆ ಹಾಗೂ 13 ರಿಂದ 14 ಸಾವಿರ ಮನೆಗಳ ಪಟ್ಟಿ ಸಿದ್ಧಪಡಿಸುವ ಗುರಿ ಹೊಂದಲಾಗಿದೆ.ವ್ಯವಸ್ಥಿತ ಆಯೋಜನೆ:ನಗರದ ಒಟ್ಟು 31 ವಾರ್ಡ್ಗಳನ್ನು ಜನಸಂಖ್ಯೆಗೆ ಅನುಗುಣವಾಗಿ ಸಣ್ಣ ಬ್ಲಾಕ್ಗಳನ್ನಾಗಿ ವಿಂಗಡಿಸಲಾಗಿದೆ. ಒಟ್ಟು 99 ಬ್ಲಾಕ್ ರಚಿಸಲಾಗಿದ್ದು, ಪ್ರತಿ 6 ಬ್ಲಾಕ್ಗಳಿಗೆ ಒಬ್ಬರಂತೆ ಒಟ್ಟು 16 ಜನ ಮೇಲ್ವಿಚಾರಕರನ್ನು (Supervisors) ನೇಮಿಸಲಾಗಿದೆ. ಈ ಕಾರ್ಯಕ್ಕಾಗಿ ವಿವಿಧ ಶಾಲೆಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ಸರ್ಕಾರಿ ಇಲಾಖೆಗಳ ನುರಿತ ಅಧಿಕಾರಿಗಳನ್ನು ಗಣತಿದಾರರನ್ನಾಗಿ ನಿಯೋಜಿಸಲಾಗಿದೆ. ಸಾರ್ವಜನಿಕರಿಗೆ ಮನವಿ:
ಈ ಮನೆಪಟ್ಟಿ ಕಾರ್ಯಾಚರಣೆಯಲ್ಲಿ ಒಟ್ಟು 32 ವಿವಿಧ ಪ್ರಶ್ನೆ ಕೇಳಲಾಗುತ್ತದೆ. ದೇಶದ ನಿಖರವಾದ ದತ್ತಾಂಶ (Data) ಸಿದ್ಧಪಡಿಸುವಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಆದ್ದರಿಂದ, ಮನೆ ಮನೆಗೆ ಭೇಟಿ ನೀಡುವ ಗಣತಿದಾರರಿಗೆ ದಾಂಡೇಲಿ ನಗರದ ಸಮಸ್ತ ಸಾರ್ವಜನಿಕರು ನಿಖರವಾದ ಮಾಹಿತಿಯನ್ನು ನೀಡಿ ಸಹಕರಿಸಬೇಕೆಂದು ವಿನಂತಿಸಿದರು.