ವಸತಿ ಹಗರಣ: ಬೀದರ್‌ ತಾಪಂ ಕಚೇರಿ ಮುತ್ತಿಗೆ ಯತ್ನ

| Published : Jun 25 2025, 11:50 PM IST

ವಸತಿ ಹಗರಣ: ಬೀದರ್‌ ತಾಪಂ ಕಚೇರಿ ಮುತ್ತಿಗೆ ಯತ್ನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಹಣದ ವ್ಯವಹಾರ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬುಧವಾರ ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ ನಡೆಸಿ ಬೀದರ್‌ ತಾಲೂಕು ಪಂಚಾಯತ್‌ ಕಚೇರಿ ಮುತ್ತಿಗೆ ಹಾಕುವ ಯತ್ನ ನಡೆಯಿತು.

ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ । ಮೇಲ್ಮನೆ ವಿಪಕ್ಷದ ನಾಯಕ ಛಲವಾದಿ ನೇತೃತ್ವ । ಸಚಿವ ಜಮೀರ್‌ ರಾಜೀನಾಮೆಗೆ ಆಗ್ರಹ

ಕನ್ನಡಪ್ರಭ ವಾರ್ತೆ ಬೀದರ್‌

ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಹಣದ ವ್ಯವಹಾರ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಬುಧವಾರ ಬಿಜೆಪಿಯಿಂದ ಪ್ರತಿಭಟನಾ ರ್ಯಾಲಿ ನಡೆಸಿ ಬೀದರ್‌ ತಾಲೂಕು ಪಂಚಾಯತ್‌ ಕಚೇರಿ ಮುತ್ತಿಗೆ ಹಾಕುವ ಯತ್ನ ನಡೆಯಿತು.

ಸರ್ಕಾರದ ಮನೆಗಳೆಲ್ಲವೂ ಭ್ರಷ್ಟರ ಪಾಲು, ಬಡವರೆಲ್ಲ ಬೀದಿ ಪಾಲು ಎಂಬ ಬ್ಯಾನರಡಿ ಮೈಲೂರ ಕ್ರಾಸ್‌ ರಸ್ತೆಯಲ್ಲಿರುವ ಕಾಜಿ ಕಲ್ಯಾಣ ಮಂಟಪದಿಂದ ಪ್ರಾರಂಭವಾದ ಪ್ರತಿಭಟನಾ ಮೆರವಣಿಗೆಯು ನಗರದ ತಾಲೂಕು ಪಂಚಾಯಿತಿ ಕಚೇರಿ ತಲುಪಿ ಮುತ್ತಿಗೆ ಹಾಕಲು ಯತ್ನಿಸಲಾಯಿತು. ಬಿಗಿ ಪೊಲೀಸ್‌ ಬಂದೋಬಸ್ತ್‌ ಹಾಗೂ ಕಚೇರಿ ಮುಂದೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದ್ದರಿಂದ ಪ್ರತಿಭಟನಾಕಾರರು ಕೊನೆಗೆ ಗೇಟಿನ ಮುಂದೆ ಪ್ರತಿಭಟನೆ ನಡೆಸಬೇಕಾಯಿತು.

ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣ ಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಮನೆ ಹಂಚಿಕೆಯ ಅಕ್ರಮದ ಹಿನ್ನೆಲೆಯಲ್ಲಿ ಸಚಿವ ಜಮೀರ್‌ ಅಹ್ಮದಖಾನ್‌ ಅವರು ರಾಜೀನಾಮೆ ಕೊಡಬೇಕೆಂದು ಆಗ್ರಹಿಸಲಾಯಿತು.

ಮಳೆಯ ಮಧ್ಯದಲ್ಲಿಯೇ ನಡೆದ ಕಚೇರಿ ಮುತ್ತಿ ಯತ್ನದ ಹಿನ್ನಲೆಯಲ್ಲಿ ಪ್ರತಿಭಟನಾಕಾರ ಮುಖಂಡರು ಮಳೆ ನೀರಿನಲ್ಲಿ ನೆನೆದರು. ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್‌, ಶಾಸಕರು ಹಾಗೂ ರಾಜ್ಯ ಕಾರ್ಯದರ್ಶಿ ಡಾ. ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿ ಎಮಜಿ ಮೂಳೆ, ಮಾಜಿ ಎಂಎಲ್ಸಿ ರಘು ನಾಥರಾವ್‌ ಮಲ್ಕಾಪೂರೆ, ಬುಡಾ ಮಾಜಿ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ್‌ ಗಾದಗಿ, ಗುರುನಾಥ ಜ್ಯಾಂತಿಕರ್‌, ಮಹಿಳಾ ಮೋರ್ಚಾ ಅಧ್ಯಕ್ಷ ಲುಂಬಣಿ ಗೌತಮ, ವಿಜಯಲಕ್ಷ್ಮಿ ಕೌಟಗೆ, ನಗರ ಅಧ್ಯಕ್ಷ ಶಶಿಧರ ಹೋಸಳ್ಳಿ, ಪೀರಪ್ಪ ಯರನಳ್ಳಿ ಸೇರಿದಂತೆ ಇನ್ನಿತರ ಪ್ರಮುಖರು ಭಾಗವಹಿಸಿದರು.