ಹುಬ್ಬಳ್ಳಿ ಧಾರವಾಡ ಕಮೀಷನರೇಟ್‌ ಯಾರ ಒತ್ತಡಕ್ಕೂ ಮಣಿಯುವುದಿಲ್ಲ: ಎನ್‌. ಶಶಿಕುಮಾರ್

| Published : Mar 16 2025, 01:49 AM IST

ಹುಬ್ಬಳ್ಳಿ ಧಾರವಾಡ ಕಮೀಷನರೇಟ್‌ ಯಾರ ಒತ್ತಡಕ್ಕೂ ಮಣಿಯುವುದಿಲ್ಲ: ಎನ್‌. ಶಶಿಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಹು ಧಾ ಪೊಲೀಸರು ಇಲ್ಲಿಯ ವರೆಗೂ ಯಾರ ಒತ್ತಡಕ್ಕೂ ಮಣಿದಿಲ್ಲ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದರು.

ಹುಬ್ಬಳ್ಳಿ: ಹು-ಧಾ ಪೊಲೀಸರು ಇಲ್ಲಿಯ ವರೆಗೂ ಯಾರ ಒತ್ತಡಕ್ಕೂ ಮಣಿದಿಲ್ಲ. ನೈತಿಕ ಅಧಃಪತನಕ್ಕೆ ಇಲಾಖೆ ಇಳಿದಿಲ್ಲ ಎಂದು ಹು-ಧಾ ಮಹಾನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಸ್ಪಷ್ಟಪಡಿಸಿದರು.

ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಶನಿವಾರ ನಗರದ ಪ್ರೆಸ್‌ಕ್ಲಬ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಮೀಟ್ ದಿ ಪ್ರೆಸ್ ಸಂವಾದದಲ್ಲಿ ಅವರು ಮಾತನಾಡಿದರು.

ಕಮಿಷನರೇಟ್ ವ್ಯಾಪ್ತಿಯಲ್ಲಿ ಪ್ರತಿ ವರ್ಷ 3 ಸಾವಿರ ಪ್ರಕರಣ ದಾಖಲಾಗುತ್ತಿವೆ. ಅತಿ ಸೂಕ್ಷ್ಮ ಪ್ರದೇಶ ವ್ಯಾಪ್ತಿಯ ಕೆಲ ಠಾಣೆಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದರೆ, ಕೆಲ ಠಾಣೆಗಳಲ್ಲಿ ನಿಯಮಿತ ಪ್ರಕರಣಗಳು ದಾಖಲಾಗುತ್ತಿವೆ. ಎಲ್ಲ ಪ್ರಕರಣಗಳಲ್ಲಿಯೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಗೂಂಡಾ ಕಾಯ್ದೆಯಡಿ 50ಕ್ಕೂ ಹೆಚ್ಚು ಜನರನ್ನು ಗಡಿಪಾರು ಮಾಡಿದ್ದರೆ, ಅಂತಾರಾಜ್ಯದ 6 ಗ್ಯಾಂಗ್‌ಗಳನ್ನು ಪತ್ತೆ ಮಾಡುವಲ್ಲಿ ಯಶಸ್ಸು ಸಾಧಿಸಿದ್ದೇವೆ. ಹಾಗಂತ ರಾಜಕೀಯ ಒತ್ತಡಕ್ಕೆ ಮಣಿದಿಲ್ಲ, ಅಗತ್ಯ ಸಾಕ್ಷ್ಯಾಧಾರಗಳ ಮೇಲೆ ನಿರಂತರ ಕಠಿಣ ಕಾನೂನು ಕ್ರಮ ವಹಿಸಲಾಗುತ್ತಿದೆ. ಪೊಲೀಸ್ ಬೀಟ್ ಕೂಡ ಸುಸ್ಥಿರಗೊಳಿಸಿ ಮತ್ತಷ್ಟು ಪರಿಣಾಮಕಾರಿಯಾಗಿಸಲು ಕ್ರಮ ವಹಿಸಲಾಗುವುದು ಎಂದರು.

32 ಜನರ ಬಂಧನ

ಅಂಗನವಾಡಿ ಪೌಷ್ಟಿಕ ಆಹಾರ ಅಕ್ರಮ ದಾಸ್ತಾನು ಪ್ರಕರಣದಲ್ಲಿ 32 ಜನರ ವಿರುದ್ಧ ಕ್ರಮವಹಿಸಲಾಗಿದೆ. ಆದರೆ, ಪ್ರಮುಖ ಆರೋಪಿಗಳ ಪತ್ತೆಗೂ 4 ತಂಡಗಳು ನಿರಂತರ ಕಾರ್ಯಾಚರಣೆ ನಡೆಸುತ್ತಿದ್ದು, ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು. ಯಾರ ಒತ್ತಡದಿಂದಲೂ ಆರೋಪಿ ಪತ್ತೆಯಲ್ಲಿ ಹಿನ್ನೆಡೆಯಾಗಿಲ್ಲ ಎಂದರು.

ಸವಾಲಿನ ಕೆಲಸವಾಗಿತ್ತು:

ಕಳೆದ 8 ತಿಂಗಳ ಹಿಂದೆ ಹು-ಧಾ ಪೊಲೀಸ್ ಆಯುಕ್ತನಾಗಿ ಅಧಿಕಾರ ವಹಿಸಿಕೊಂಡ 2-3 ತಿಂಗಳು ದೊಡ್ಡ ಸವಾಲಿನ ಕೆಲಸವಾಗಿತ್ತು. ಪ್ರತಿ ಠಾಣೆ ವ್ಯಾಪ್ತಿಯಲ್ಲಿ ವಾರದಲ್ಲಿ 3 ದಿನ ಏರಿಯಾ ಡಾಮಿನೇಷನ್, ಏರಿಯಾ ಫೆಮಿಲೈಜೇಷನ್ ಮೂಲಕ ಜನರನ್ನು ತಲುಪುವ ಕಾರ್ಯ ಮಾಡಲಾಯಿತು. ಆ ಮೂಲಕ ಅಪರಾಧ ಕೃತ್ಯ ಎಸಗುವವರು, ರೌಡಿಶೀಟರ್‌ಗಳು, ಕಿರಿಕಿರಿ ಉಂಟು ಮಾಡುವವರ ವಿರುದ್ಧ ಕ್ರಮ ಜರುಗಿಸುವ ಜತೆಗೆ ಅವರ ಹಿಂದಿರುವ ಶಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಬಿಗಿ ಕ್ರಮ ಕೈಗೊಳ್ಳಲಾಯಿತು. ಡ್ರಗ್ಸ್‌ ಬಳಕೆದಾರರು, ಪೆಡ್ಲರ್ಸ್, ಮೀಟರ್ ಬಡ್ಡಿ, ರೌಡಿಶೀಟರ್‌ಗಳನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲಾಯಿತು.

₹16 ಕೋಟಿ ಸೈಬರ್‌ ವಂಚನೆ

ಮಹಾನಗರದಲ್ಲಿ ಪ್ರಸಕ್ತ ಸಾಲಿನಲ್ಲಿ ₹16 ಕೋಟಿ ವಂಚನೆಯಾಗಿದೆ. ಇದರಲ್ಲಿ ಹಣ ವರ್ಗಾವಣೆ ಆಗುತ್ತಿದ್ದಂತೆ ಖಾತೆಯನ್ನು ಫ್ರೀಜ್ ಮಾಡಿ ಪ್ರಕರಣಗಳನ್ನು ಪತ್ತೆ ಹಚ್ಚಿ ಒಟ್ಟು ₹12 ಕೋಟಿ ರಿಕವರಿ ಮಾಡಲಾಗಿದೆ. ರಾಜ್ಯದಲ್ಲಿ ಹು-ಧಾ ಕಮಿಷನರೇಟ್ ಘಟಕ ವ್ಯಾಪ್ತಿಯಲ್ಲಿ 112 ಹೊಯ್ಸಳ ಅತ್ಯುತ್ತಮ ಕಾರ್ಯ ನಿರ್ವಹಿಸುತ್ತಿದ್ದು, ಕೇವಲ 5.20 ನಿಮಿಷದಲ್ಲಿ ಜನರನ್ನು ತಲುಪುತ್ತಿದೆ. ಇದರಿಂದ ಸಾಕಷ್ಟು ಪರಿಣಾಮಕಾರಿ ಕೆಲಸ ನಡೆದಿದೆ. ಇನ್ನು ಆಟೋಗಳ ಉಪಟಳ ಮತ್ತು ಮೀಟರ್ ಅಳವಡಿಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ, ಆರ್‌ಟಿಓ ಜತೆಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಶೀಘ್ರ ಸಂಚಾರಿ ಸಮಸ್ಯೆಗೆ ಮುಕ್ತಿ

ಹುಬ್ಬಳ್ಳಿಯಲ್ಲಿ ಫ್ಲೈಓವರ್, ಯುಜಿಡಿ ಸೇರಿದಂತೆ ಹಲವು ಕಾಮಗಾರಿಗಳು ನಡೆಯುತ್ತಿವೆ. ರಸ್ತೆಗಳು ಇಕ್ಕಟ್ಟಾಗಿರುವುದರಿಂದ ಟ್ರಾಫಿಕ್ ನಿರ್ವಹಣೆಯಲ್ಲಿ ಲೋಪಗಳು ಆಗುತ್ತಿವೆ. ಮಹಾನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಸೂಕ್ತ ಯೋಜನೆ ರೂಪಿಸಲಾಗುವುದು. ಸದ್ಯ ಕಮಿಷನರೇಟ್‌ ವ್ಯಾಪ್ತಿಯಲ್ಲಿ 4 ಸಂಚಾರ ಠಾಣೆಗಳಿದ್ದು, 120ಕ್ಕೂ ಹೆಚ್ಚು ಸಿಬ್ಬಂದಿಗಳಿದ್ದಾರೆ. ಎರಡು ಶಿಫ್ಟ್‌ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಮಿಷನರೇಟ್‌ ವ್ಯಾಪ್ತಿಯಲ್ಲಿ ಶೇ. 10-15 ರಷ್ಟು ಸಿಬ್ಬಂದಿ ಕೊರತೆ ಇರುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಧಾರವಾಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಲೋಚನೇಶ ಹೂಗಾರ, ಪ್ರಧಾನ ಕಾರ್ಯದರ್ಶಿ ಸುಶಿಲೇಂದ್ರ ಕುಂದರಗಿ, ಸಂಘದ ರಾಜ್ಯಕಾರಿಣಿ ಸದಸ್ಯ ಗಣಪತಿ ಗಂಗೊಳ್ಳಿ ಸೇರಿದಂತೆ ಹಲವರಿದ್ದರು.