ಸಾರಾಂಶ
ಯುವಕನೊಬ್ಬ ಹಳೆ ಹುಬ್ಬಳ್ಳಿಯ ಪತೇಶಾವಲಿ ದರ್ಗಾದ ಮೇಲೆ ಪ್ರಚೋದನಕಾರಿ ಲೇಸರ್ ಬಿಟ್ಟಿದ್ದು ಒಂದು ಕೋಮಿನ ಪ್ರಚೋದನೆಗೆ ಕಾರಣವಾಗಿತ್ತು. ಇದರಿಂದ ಗಲಭೆ ನಡೆದಿತ್ತು. ಇದನ್ನು ಖಂಡಿಸಿ 2022ರ ಏಪ್ರಿಲ್ 16ರಂದು ರಾತ್ರಿ 10.30ರಿಂದ 11.30ರ ವರೆಗೆ ಹಳೇ ಹುಬ್ಬಳ್ಳಿ ಠಾಣೆಯ ಬಳಿ ಗಲಭೆಯಾಗಿತ್ತು
ಶಿವಾನಂದ ಗೊಂಬಿ
ಹುಬ್ಬಳ್ಳಿ: 2022ರಲ್ಲಿ ಹಳೇಹುಬ್ಬಳ್ಳಿ ಗಲಭೆ ಕೇಸ್ ಅನ್ನು ಕಾಂಗ್ರೆಸ್ ಸರ್ಕಾರ ಹಿಂಪಡೆದಿದ್ದಕ್ಕೆ ಹೈಕೋರ್ಟ್ ಛಿಮಾರಿ ಹಾಕಿದೆ. ಜತೆಗೆ ಇಂಥ ಕೇಸ್ಗಳನ್ನು ಹಿಂಪಡೆಯುವಂತಿಲ್ಲ ಎಂದು ಸೂಚ್ಯವಾಗಿ ತಿಳಿಸಿದೆ. ಆದರೆ, ಆಗ ಪೊಲೀಸ್ ಕಮಿಷನರೇಟ್ ಕೂಡ ಈ ಕೇಸನ್ನು ಹಿಂಪಡೆಯುವುದು ಸರಿಯಲ್ಲ ಎಂಬ ಅಭಿಪ್ರಾಯ ತಿಳಿಸಿದ್ದರೂ ಸರ್ಕಾರ ಅದನ್ನು ಮಾನ್ಯ ಮಾಡದೇ ಹಿಂಪಡೆದಿತ್ತು ಎಂಬ ವಿಷಯ ಇದೀಗ ಬಹಿರಂಗಗೊಂಡಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಏನಿದು ಕೇಸ್: ಯುವಕನೊಬ್ಬ ಹಳೆ ಹುಬ್ಬಳ್ಳಿಯ ಪತೇಶಾವಲಿ ದರ್ಗಾದ ಮೇಲೆ ಪ್ರಚೋದನಕಾರಿ ಲೇಸರ್ ಬಿಟ್ಟಿದ್ದು ಒಂದು ಕೋಮಿನ ಪ್ರಚೋದನೆಗೆ ಕಾರಣವಾಗಿತ್ತು. ಇದರಿಂದ ಗಲಭೆ ನಡೆದಿತ್ತು. ಇದನ್ನು ಖಂಡಿಸಿ 2022ರ ಏಪ್ರಿಲ್ 16ರಂದು ರಾತ್ರಿ 10.30ರಿಂದ 11.30ರ ವರೆಗೆ ಹಳೇ ಹುಬ್ಬಳ್ಳಿ ಠಾಣೆಯ ಬಳಿ ಗಲಭೆಯಾಗಿತ್ತು. ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ, ಪೊಲೀಸ್ ಜೀಪನ್ನು ಎತ್ತಿ ಹಾಕಿ ಬೆಂಕಿ ಹಚ್ಚಿದ್ದರು. ಮನೆ, ದೇವಸ್ಥಾನದ ಮೇಲೆ ಕಲ್ಲು ತೂರಾಟ ನಡೆದಿತ್ತು. ಪೊಲೀಸರ ಮೇಲೂ ಹಲ್ಲೆ ನಡೆದಿದ್ದವು. ಅಕ್ಷರಶಃ ಅಂದು ಇಡೀ ಹುಬ್ಬಳ್ಳಿ ಹೊತ್ತಿ ಉರಿದಿತ್ತು. ಮುಂದೆ ಒಂದು ವಾರ ಕಾಲ ಗಲಭೆಯ ಸದ್ದು ಇಡೀ ಊರಲ್ಲಿ ಕಂಡು ಬಂದಿತ್ತು. ಸಾರ್ವಜನಿಕ ಆಸ್ತಿಪಾಸ್ತಿ ಸಾಕಷ್ಟು ಹಾನಿಯಾಗಿತ್ತು. ಸಾಮಾಜಿಕ ಶಾಂತಿ ಕದಡಿತ್ತು.
ಪೊಲೀಸ್ ಠಾಣೆ ಹಾಗೂ ಪೊಲೀಸರ ಮೇಲೆ ಹಲ್ಲೆ ಹೆಚ್ಚಾಗಿ ನಡೆದಿದ್ದರಿಂದ ಪೊಲೀಸ್ ಅಧಿಕಾರಿಗಳೇ ಹೆಚ್ಚು ಕೇಸುಗಳನ್ನು ದಾಖಲಿಸಿದ್ದರು. ಬರೋಬ್ಬರಿ 43ಕ್ಕೂ ಅಧಿಕ ಕೇಸ್ಗಳು ದಾಖಲಾಗಿದ್ದವು. 156 ಜನ ಆರೋಪಿತರನ್ನು ಬಂಧಿಸಿತ್ತು. ಅವರೆಲ್ಲರೂ ಇದೀಗ ಜಾಮೀನಿನ ಮೇಲೆ ಹೊರಗೆ ಇದ್ದಾರೆ.
ಕೇಸ್ ಹಿಂಪಡೆಯಲು ಒತ್ತಡ: ಈ ನಡುವೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಹಳೇಹುಬ್ಬಳ್ಳಿ ಕೇಸ್ ಹಿಂಪಡೆಯುವಂತೆ ಒತ್ತಾಯ ಕೇಳಿ ಬರಲಾರಂಭಿಸಿತು. ಈ ಗಲಭೆಯಲ್ಲಿ ಅಮಾಯಕರ ಬಂಧನವಾಗಿದೆ. ಕೇಸ್ ಹಿಂಪಡೆಯುವಂತೆ ಕೋರಿ ಗೃಹ ಮಂತ್ರಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ ಪತ್ರ ಬರೆದಿದ್ದರು. ಇದಾದ ಮೇಲೆ ಶಾಸಕ ತನ್ವೀರ್ ಸೇಠ್ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಹೀಗೆ ಹಲವರು, ಬಂಧಿತರ ಪರವಾಗಿ ಬ್ಯಾಟಿಂಗ್ ಮಾಡಿ ಕೇಸ್ ಹಿಂಪಡೆಯುವಂತೆ ಕೋರಿದ್ದರು.
ಬೇಡ ಎಂದಿದ್ದ ಕಮಿಷನರ್: ಈ ನಡುವೆ ಡಿಸಿಎಂ ಸೇರಿದಂತೆ ಹಲವರಿಂದ ಹಿಂಪಡೆಯಲು ಒತ್ತಡ ಬರುತ್ತಿದ್ದಂತೆ ಸರ್ಕಾರ ಪೊಲೀಸ್ ಇಲಾಖೆಯ ಅಭಿಪ್ರಾಯ ಕೇಳಿತ್ತು. ಪೊಲೀಸ್ ಮಹಾನಿರ್ದೇಶಕರು, ಪೊಲೀಸ್ ಕಮಿಷನರೇಟ್ನ ಅಭಿಪ್ರಾಯ ಕೇಳಿದ್ದರು. ಆಗ ಪೊಲೀಸ್ ಮಹಾನಿರ್ದೇಶಕರಿಗೆ ಇಲ್ಲಿನ ಕಮಿಷನರ್ ತಮ್ಮ ಅಭಿಪ್ರಾಯ ತಿಳಿಸಿದ್ದರು. ಆ ವರದಿಯ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.
ವರದಿಯಲ್ಲಿ "ಯಾವುದೇ ಕಾರಣಕ್ಕೂ ಹಳೇಹುಬ್ಬಳ್ಳಿ ಗಲಭೆಯನ್ನು ಹಿಂಪಡೆಯಬಾರದು " ಎಂದು ಕಮಿಷನರ್ ಸ್ಪಷ್ಟವಾಗಿ ತಮ್ಮ ಅಭಿಪ್ರಾಯ ತಿಳಿಸಿದ್ದರು. ಜತೆಗೆ ಯಾಕೆ ಹಿಂಪಡೆಯಬಾರದು. ಹಿಂಪಡೆದರೆ ಏನೆಲ್ಲ ಸಮಸ್ಯೆಯಾಗಬಹುದು ಎಂಬುದನ್ನೂ ವಿವರಿಸಿದ್ದರು.
ಆದರೂ ಕಮಿಷನರ್ ವರದಿಗೆ ಮಾನ್ಯ ಮಾಡದ ಸರ್ಕಾರ ಸಚಿವ ಸಂಪುಟದಲ್ಲಿ ಚರ್ಚೆ ನಡೆಸಿ ಕೇಸ್ಗಳನ್ನು ಹಿಂಪಡೆದಿತ್ತು. ಕೇಸ್ ಹಿಂಪಡೆದಿದ್ದನ್ನು ಖಂಡಿಸಿ ಬಿಜೆಪಿ, ಜೆಡಿಎಸ್, ಹಿಂದೂಪರ ಸಂಘಟನೆಗಳೆಲ್ಲ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಹೋರಾಟವನ್ನೂ ಮಾಡಿದ್ದವು. ಆದರೂ ಸರ್ಕಾರ ಮಾತ್ರ ಕ್ಯಾರೆ ಎಂದಿರಲಿಲ್ಲ.
ವಿಧಾನಸಭೆ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ ಮತ್ತಿತರರು ಸದನದೊಳಗೆ ಹಾಗೂ ಹೊರಗೆ ಸರ್ಕಾರದ ಕ್ರಮಕ್ಕೆ ಆಕ್ಷೇಪಿಸಿದ್ದರು.
ಇದೀಗ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ಛಿಮಾರಿ ಹಾಕಿದೆ. ಸರ್ಕಾರದ ಮುಂದಿನ ನಡೆಯೇನು? ಎಂಬುದನ್ನು ಕಾಯ್ದು ನೋಡಬೇಕಷ್ಟೇ..!
ಕಮಿಷನರ್ ಅಭಿಪ್ರಾಯ?: ಪ್ರಕರಣವನ್ನು ಹಿಂತೆಗೆದುಕೊಳ್ಳುವುದರಿಂದ ಇಂಥ ಘಟನೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ಹಿಂದೇಟು ಹಾಕುವ ಮನೋಭಾವ ಪೊಲೀಸರಲ್ಲಿ ಬೆಳೆಯುತ್ತದೆ. ಪೊಲೀಸರ ಮನೋಸ್ಥೈರ್ಯಕ್ಕೆ ದಕ್ಕೆ ಉಂಟಾಗುತ್ತದೆ. ಪ್ರಕರಣ ಹಿಂಪಡೆಯುವುದರಿಂದ ಆರೋಪಿತರು ಮುಂದೆಯೂ ಸಹ ಇಂಥ ಕೃತ್ಯ ಮುಂದುವರಿಸಲು ಪ್ರೋತ್ಸಾಹಿಸಿದಂತಾಗುತ್ತದೆ. ಕಾನೂನು ಪರಿಪಾಲಕರಾದ ಪೊಲೀಸರ ಮೇಲಿನ ಗೌರವ ಕಡಿಮೆಯಾಗಿ ಕಾನೂನು ಬಾಹಿರ ಕೃತ್ಯ ಮಾಡುವವರಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ. ಆದ್ದರಿಂದ ಪ್ರಕರಣವನ್ನು ಹಿಂಪಡೆಯಬಾರದು ಎಂದು ವಿನಂತಿ.