ಗ್ರಾಮದ ಹಲವರಲ್ಲಿ ಈ ರೀತಿಯ ರೋಗ ಕಾಣಿಸಿಕೊಳ್ಳುತ್ತಿರುವುದಕ್ಕೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ

ಕನಕಗಿರಿ: ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂ ವ್ಯಾಪ್ತಿಯ ಹುಡೇಜಾಲಿ ಗ್ರಾಮದ ಅನೇಕ ಜನರಲ್ಲಿ ಚರ್ಮ ರೋಗ ಕಾಣಿಸಿಕೊಂಡಿದ್ದು, ಈ ಬಗ್ಗೆ ಗ್ರಾಪಂ ಹಾಗೂ ಆರೋಗ್ಯ ಇಲಾಖೆಯವರ ಗಮನಕ್ಕಿದ್ದರೂ ನಿರ್ಲಕ್ಷ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಗ್ರಾಮಕ್ಕೆ 2 ಬೋರ್‌ವೆಲ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದ್ದು, ಈ ಬೋರ್‌ವೆಲ್‌ಗಳ ಪೈಕಿ ಒಂದು ಬೋರ್‌ವೆಲ್ ಚಿಕ್ಕಮಾದಿನಾಳ ರಸ್ತೆಯ ತಿಪ್ಪೆಗುಂಡಿಯಲ್ಲಿದೆ. ತಿಪ್ಪೆಗುಂಡಿಯ ಕೊಳಚೆ ನೀರು ಈ ಬೋರ್‌ವೆಲ್‌ಗೆ ಇಂಗಿ ಕಲುಷಿತಗೊಳ್ಳುತ್ತಿದೆ. ಈ ಬೋರ್‌ವೆಲ್‌ ನೀರನ್ನು ಬಳಕೆಗೆ ಮಾತ್ರ ಸೀಮಿತವಾಗಿದೆ. ರಾಂಪುರ ರಸ್ತೆಯಲ್ಲಿರುವ ಕೊಳವೆಬಾವಿಯಿಂದ ಟ್ಯಾಂಕ್‌ನಲ್ಲಿ ನೀರು ಸಂಗ್ರಹಿಸಿ ಅಲ್ಲಿಂದ ಕುಡಿಯಲು ಈ ನೀರನ್ನು ಸರಬರಾಜು ಮಾಡಲಾಗುತ್ತಿದೆ.

ಚಿಕ್ಕ ಮಾದಿನಾಳ ರಸ್ತೆಯಲ್ಲಿನ ಬೋರವೆಲ್ ಬಳಸುವ ನೀರಿನಿಂದಲೇ ದೇಹದ ನಾನಾ ಕಡೆಗಳಲ್ಲಿ ಕಜ್ಜಿ (ಗಜಕರ್ಣ) ಚರ್ಮ ಸಂಬಂಧಿತ ಕಾಯಿಲೆ ಶುರುವಾಗಿದೆ. ಗ್ರಾಮದ ಹಲವು ಕುಟುಂಬಗಳಲ್ಲಿ ಈ ರೋಗ ಕಾಣಿಸಿಕೊಂಡಿದ್ದು, ನಿತ್ಯವೂ ಸರ್ಕಾರಿ ಆಸ್ಪತ್ರೆಗಳಿಗೆ ಅಲೆದಾಡುತ್ತಿದ್ದಾರೆ. ರೋಗದಿಂದ ತುರಿಕೆ ಹೆಚ್ಚಾಗುತ್ತಿದ್ದು, ತುರಿಕೆ ಹೆಚ್ಚಾಗಿ ಕೆಲವರಿಗೆ ರಕ್ತಸ್ರಾವವೂ ಉಂಟಾಗಿದೆ ಎಂದು ಗ್ರಾಮಸ್ಥರು ದೂರಿದರು.

ಈ ಬಗ್ಗೆ ಗ್ರಾಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆಯಾದರೂ ಸೂಕ್ತ ಕ್ರಮವಾಗಿಲ್ಲ. ಗ್ರಾಮದ ಹಲವರಲ್ಲಿ ಈ ರೀತಿಯ ರೋಗ ಕಾಣಿಸಿಕೊಳ್ಳುತ್ತಿರುವುದಕ್ಕೆ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಈ ರೋಗದಿಂದ ದೇಹದ ಹಲವು ಕಡೆಗಳಲ್ಲಿ ವೃತ್ತಾಕಾರವಾಗಿ ಮೈತುಂಬ ಗಾಯವಾಗಿ ಉರಿಯಲು ಆರಂಭವಾಗುತ್ತದೆ. ವೈದ್ಯರ ಬಳಿಗೆ ಚಿಕಿತ್ಸೆ ಪಡೆದರೂ ರೋಗ ನಿಯಂತ್ರಣವಾಗುತ್ತಿಲ್ಲ. ಉರಿಯುವುದಕ್ಕೆ ತಡೆಯಲಾಗುತ್ತಿಲ್ಲ ಎಂದು ಗ್ರಾಮದ ಮುಖಂಡ ಕನಕಪ್ಪ ಮಮ್ಮಳಿ ಅಳಲು ತೋಡಿಕೊಂಡಿದ್ದಾರೆ.

ಚರ್ಮ ರೋಗ ಕಾಣಿಸಿಕೊಳ್ಳುತ್ತಿದ್ದಂತೆ ಕೆಲವರು ಉಡುಪಿ, ಚಿಕ್ಕಮಂಗಳೂರಿಗೆ ಹೋಗಿ ಮುಲಾಮು ತಂದು ಹಚ್ಚಿಕೊಂಡಿದ್ದು, ಗುಣಮುಖರಾಗಿದ್ದಾರೆ. ಗ್ರಾಮದಲ್ಲಿನ ಹಲವರಿಗೆ ಕಜ್ಜಿ ರೋಗ ತಗುಲಿದ್ದು, ನಿಯಂತ್ರಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತ ಮುಖಂಡ ನಿಂಗಪ್ಪ ತಿಳಿಸಿದ್ದಾರೆ.

ಹುಡೇಜಾಲಿ ಗ್ರಾಮದಲ್ಲಿ ಆಗಿರುವ ಸಮಸ್ಯೆಯ ಬಗ್ಗೆ ಅಭಿವೃದ್ದಿ ಅಧಿಕಾರಿಗಳನ್ನು ಕರೆದು ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಕನಕಗಿರಿ ಇಒ ತಾಪಂ ರಾಜಶೇಖರ ತಿಳಿಸಿದ್ದಾರೆ.