ಸಾರಾಂಶ
ಕನ್ನಡಪ್ರಭ ವಾರ್ತೆ ಬೇಲೂರು
ಕಾಡಾನೆ ದಾಳಿಯಿಂದ ತಾಲೂಕಿನ ಹಿರಿಕೋಲೆ ಗ್ರಾಮದ ಸುತ್ತಮುತ್ತಲಿನಲ್ಲಿ ಬೆಳೆ ಹಾನಿಯಾಗಿದೆ.ಕಟಾವಿಗೆ ಬಂದ ಮುಸುಕಿನ ಜೋಳ, ಭತ್ತದ ಗದ್ದೆ, ತೆಂಗು ಬೆಳೆಗಳು ಆನೆ ದಾಳಿಗೆ ತುತ್ತಾಗಿದೆ. ನಾಗರತ್ನ ಅವರಿಗೆ ಸೇರಿದ ೨೦ ತೆಂಗಿನ ಮರದ ಜೊತೆ ಜೋಳದ ಬೆಳೆ ತುಳಿದು ನಾಶಪಡಿಸಿದೆ. ಯೋಗೇಶ್ ಎಂಬುವವರ ಒಂದೂವರೆ ಎಕರೆಯಷ್ಟು ಮುಸುಕಿನ ಜೋಳ ಹಾಡುಗೆಡವಿದೆ. ಚಂದ್ರಶೇಖರ್ ಅವರ ಎರಡು ಎಕರೆ ಜೋಳ, ದೇವರಾಜ್ ಅವರಿಗೆ ಸೇರಿದ ಗುಡ್ಡೆಹಾಕಿದ್ದ ಜೋಳದ ಮೇತೆಯನ್ನು ತಿಂದು ಹಾಕಿವೆ. ಮಲ್ಲೇಶ್ ಎಂಬುವರ ೬ ವರ್ಷದ ೧೨ ತೆಂಗಿನ ಮರವನ್ನು ಬುಡ ಸಹಿತ ಕಿತ್ತುಹಾಕಿವೆ.
ಗುರುದೇವ್ ಅವರಿಗೆ ಸೇರಿದ ೨೪ ತೆಂಗಿನ ಮರ, ಜಯರಾಜ್ ೧ ಎಕರೆ ಜೋಳ, ೧ ಎಕರೆ ಗದ್ದೆಯನ್ನು ತುಳಿದು ನಾಶಪಡಿಸಿವೆ. ಮಹಂತೇಗೌಡರಿಗೆ ಸೇರಿದ ಮಾವಿನ ತೋಟದ ಗೇಟ್ ಜಖಂ ಮಾಡಿವೆ. ಗ್ರಾಮದ ಸಂದೀಪ್ ಅವರು ಮಾತನಾಡಿ, ನಮಗೆ ಆನೆಗಳ ಹಾವಳಿಯಿಂದ ಬದುಕು ಸಾಕಾಗಿದೆ. ಫಸಲಿಗೆ ಬಂದಂತ ತೆಂಗು, ಮೋತೆ ಕಾಳು ಕಟ್ಟಿದ ಜೋಳ ಮನಬಂದಂತೆ ತುಳಿದು ಹಾನಿಮಾಡಿವೆ. ತಂತಿ ಬೇಲಿಯ ಕಲ್ಲುಗಳನ್ನು ಒಡೆದು ಹಾಕಿವೆ. ಸಪೋಟ ಮರದ ಕೊಂಬೆಗಳ ಮುರಿದಿದೆ. ಒಟ್ಟು ಹತ್ತಾರು ಎಕರೆಯಷ್ಟು ಬೆಳೆನಾಶವಾಗಿದೆ ಎಂದು ನೋವು ವ್ಯಕ್ತಪಡಿಸಿದರು.ರಾತ್ರಿ ಸುಮಾರು ೮ ಆನೆಗಳು ಇಲ್ಲಿಗೆ ಬಂದಿರುವುದಾಗಿ ತಿಳಿದುಬಂದಿದೆ. ಆನೆಗಳು ಹಿರಿಕೋಲೆ ಸಮೀಪದ ಜಗಬೋರನಹಳ್ಳಿ ಗ್ರಾಮದ ಬಳಿಯಿಂದ ಬಂದಿರುವ ಶಂಕೆಯಿದ್ದು ಆ ಭಾಗದಲ್ಲಿ ಬೆಳೆ ಇಲ್ಲದ ಕಾರಣ, ನಮ್ಮ ಜಮೀನಿನ ಕಡೆ ಬಂದಿರಬಹುದು. ಸಂಜೆ ೭ ಗಂಟೆ ನಂತರ ಬೆಳಗಿನ ಜಾವ ೫ ಗಂಟೆ ನಡುವೆ ಈ ರೀತಿ ದಾಳಿ ನಡೆಸುತ್ತಿವೆ. ಆನೆಗಳ ಹಾವಳಿಯಿಂದ ಮುಕ್ತಿ ಸಿಗದ ನಾವು ಜೀವಭಯದಲ್ಲೇ ಕಾಲ ದೂಡುವಂತಾಗಿದೆ. ಆನೆ ನಿಯಂತ್ರಣ ಮಾಡುವಲ್ಲಿ ಸರಕಾರ, ಅರಣ್ಯ ಇಲಾಖೆ ನಿರ್ಲಕ್ಷ್ಯ ತಾಳಿದೆ. ನಮಗೆ ನಮಗೆ ಅರಣ್ಯ ಇಲಾಖೆಯಿಂದ ಸೂಕ್ತ ಪರಿಹಾರ ಕೊಡಬೇಕೆಂದು ಆಗ್ರಹಿಸಿದರು.
ಈ ಸಂದರ್ಭ ಬೆಳೆಗಾರರಾದ ಯೋಗೇಶ್, ಗುರುದೇವ್, ದೇವರಾಜ್, ನಾಗರತ್ನ, ಚಂದ್ರಶೇಖರ್, ಜಯರಾಜ್, ಜಗದೀಶ್, ಚಂದನ್, ಚಿರತ್ ಇದ್ದರು.