ಸಾರಾಂಶ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ತಾಲೂಕಿನ ರೈತರು ವಿವಿಧ ಬೆಳೆಗಳ ಬೆಳೆಯುವ ಜತೆಗೆ ಸಮಗ್ರ ಕೃಷಿಯಲ್ಲಿ ಅರಣ್ಯ ಕೃಷಿಗೂ ಮುಂದಾಗುತ್ತಿದ್ದಾರೆ. ದೀರ್ಘಾವಧಿ ಬೆಳೆಗಳಿಂದ ಹೆಚ್ಚು ಆದಾಯದ ನಿರೀಕ್ಷೆಯಲ್ಲಿರುವ ರೈತರು, ಶ್ರೀಗಂಧ, ಮಹಾಗನಿಯಂತಹ ಸಸಿಗಳನ್ನು ಅರಣ್ಯ ಇಲಾಖೆಯಲ್ಲಿ ಖರೀದಿಗೆ ಮುಗಿಬಿದ್ದಿದ್ದಾರೆ.ಇಲ್ಲಿನ ಸಾಮಾಜಿಕ ವಲಯ ಅರಣ್ಯ ಇಲಾಖೆಯು, ಕೋಮಾರನಹಳ್ಳಿ ತಾಂಡ ಹತ್ತಿರದ ಫಾರಂ ಹೌಸ್ನಲ್ಲಿ ರೈತರ ಬೇಡಿಕೆಗೆ ತಕ್ಕಂತೆ ಹತ್ತಾರು ರೀತಿಯ ಸಸಿಗಳನ್ನು ಬೆಳೆಸಿ, ರೈತರಿಗೆ ಮಾರುಕಟ್ಟೆ ದರಕ್ಕಿಂತ ಅತಿ ಕಡಿಮೆ ಬೆಲೆಯಲ್ಲಿ ಸಸಿಗಳನ್ನು ವಿತರಣೆ ಮಾಡುತ್ತಿದ್ದಾರೆ.
ಇಲಾಖೆ ವತಿಯಿಂದ 10200 ಶ್ರೀಗಂಧ, 5200 ಮಹಾಗನಿ, 6 ಸಾವಿರ ಸಿಲ್ವರ್ ಟ್ರೀ, 2 ಸಾವಿರ ಹೆಬ್ಬೇವು, 800 ರಕ್ತಚಂದನ, 2 ಸಾವಿರ ನುಗ್ಗೆ ಸಸಿಗಳು ಸೇರಿದಂತೆ ಒಟ್ಟಾರೆ 30500 ಸಸಿಗಳನ್ನು ಬೆಳೆಸಿದ್ದಾರೆ. ಈ ಎಲ್ಲ ಸಸಿಗಳನ್ನು 300 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಬಹುದು. 8-12 ಅಳತೆಯ 28 ಸಾವಿರ ಸಸಿಗಳನ್ನು ₹6 ದರದಲ್ಲಿ ಮಾರಾಟ, 6-9 ಅಳತೆಯ 2500 ಸಸಿಗಳನ್ನು ₹3 ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಈ ಸಸಿಗಳನ್ನು ಖರೀದಿ ಮಾಡಲು ರೈತರು ತಮ್ಮ ಜಮೀನಿನ ಪಹಣಿ ಹಾಗೂ ಆಧಾರ್ ಕಾರ್ಡ್ ಸಲ್ಲಿಸಬೇಕಿದೆ.ಮುಂಗಾರು ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಸಿಗಳನ್ನು ಖರೀದಿ ಮಾಡಲು ರೈತರು ಮುಂದಾಗಿದ್ದು, ಈಗಾಗಲೇ 10 ಸಾವಿರಕ್ಕೂ ಅಧಿಕ ಸಸಿಗಳನ್ನು ಮಾರಾಟ ಮಾಡಲಾಗಿದೆ. ಶ್ರೀಗಂಧ ಹಾಗೂ ಮಹಾಗನಿ ಸಸಿಗಳು ಮಾರುಕಟ್ಟೆಯಲ್ಲಿ ₹50ರಿಂದ ₹60ಗೆ ಮಾರಾಟ ಮಾಡಲಾಗುತ್ತಿದೆ. ಆದರೆ ಅತಿ ಕಡಿಮೆ ದರದಲ್ಲಿ ಸಸಿಗಳು ಸಿಗುತ್ತಿದ್ದು, ರೈತರು ಖರೀದಿಗೆ ದಾಂಗುಡಿ ಇಟ್ಟಿದ್ದಾರೆ.
ಪ್ರತಿ ವರ್ಷ ನರೇಗಾ ಯೋಜನೆಯಡಿ ಅರಣ್ಯ ಇಲಾಖೆ ಸಸಿಗಳನ್ನು ಬೆಳೆಸಿ, ರೈತರಿಗೆ ಉಚಿತವಾಗಿ ವಿತರಣೆ ಮಾಡಲಾಗುತ್ತಿತ್ತು. ಆದರೆ 2024-25ನೇ ಸಾಲಿನಲ್ಲಿ ನರೇಗಾ ಯೋಜನೆಯಲ್ಲಿ ಸಸಿಗಳನ್ನು ಬೆಳೆಸಲು, ಅಂಕಿ-ಅಂಶಗಳ ಪಟ್ಟಿ ನರೇಗಾದಲ್ಲಿ ನೀಡಿಲ್ಲ. ಮೊದಲು ರೈತರು ಅರಣ್ಯ ಇಲಾಖೆಯಿಂದ ಸಸಿಗಳನ್ನು ತೆಗೆದುಕೊಂಡು ಹೋಗಿ ತಮ್ಮ ಜಮೀನುಗಳಲ್ಲಿ ನರೇಗಾ ಯೋಜನೆಯಡಿ ಸಸಿಗಳನ್ನು ಬೆಳೆಸುತ್ತಿದ್ದರು. ಇದಕ್ಕೆ ಜತೆಯಾಗಿ ಅರಣ್ಯ ಇಲಾಖೆ ಮುಖೇನ ಪ್ರತಿ ಸಸಿಗಳನ್ನು ಬೆಳೆಸಲು ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಈ ಬಾರಿ ಈ ಯೋಜನೆ ರೈತರಿಗೆ ಸಿಕ್ಕಿಲ್ಲ.ಸಾಮಾಜಿಕ ವಲಯ ಅರಣ್ಯ ಇಲಾಖೆಯಿಂದ ಕೋಮಾರನಹಳ್ಳಿ ತಾಂಡದ ಫಾರಂ ಹೌಸ್ನಲ್ಲಿ ವಿವಿಧ ಬಗೆಯ 30500 ಸಸಿಗಳನ್ನು ಬೆಳೆಸಲಾಗಿದೆ. ರೈತರಿಗೆ ರಿಯಾಯ್ತಿ ದರದಲ್ಲಿ ಮಾರಾಟ ಮಾಡುತ್ತಿದೆ. 2024-25ನೇ ಸಾಲಿನ ನರೇಗಾ ಯೋಜನೆಯಲ್ಲಿ ಸಸಿಗಳನ್ನು ಬೆಳೆಸಲು ಡಾಟಾ ಸೀಟ್ ನೀಡದಿರುವ ಹಿನ್ನೆಲೆಯಲ್ಲಿ ರೈತರಿಗೆ ಉಚಿತವಾಗಿ ಸಸಿಗಳನ್ನು ವಿತರಣೆ ಮಾಡುತ್ತಿಲ್ಲ ಎನ್ನುತ್ತಾರೆ ಹೂವಿನಹಡಗಲಿ ಸಾಮಾಜಿಕ ವಲಯ ಅರಣ್ಯಾಧಿಕಾರಿ ಗುಡ್ಡಪ್ಪ.
ಅರಣ್ಯ ಇಲಾಖೆಯಿಂದ ಬೆಳೆಸುವ ಶ್ರೀಗಂಧ, ಮಹಾಗನಿ, ರಕ್ತಚಂದನದಂತಹ ಸಸಿಗಳಿಗೆ ಮಾರುಕಟ್ಟೆಯಲ್ಲಿ ದುಬಾರಿ ಬೆಲೆ ತೆತ್ತು ಸಸಿಗಳನ್ನು ತರಬೇಕಿತ್ತು. ಆದರೆ ಇಲಾಖೆಯಿಂದ ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸುತ್ತಿರುವುದು ರೈತರಿಗೆ ಅನುಕೂಲವಾಗಿದೆ ಎನ್ನುತ್ತಾರೆ ರೈತ ಮಹದೇವಪ್ಪ.