ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ಗೌರಿ ಗಣೇಶ ಹಬ್ಬದ ಪ್ರಯುಕ್ತ ನಗರದ ಮುಖ್ಯ ರಸ್ತೆಯ ಎರಡೂ ಬದಿ ಗಣೇಶ ಮೂರ್ತಿಯ ಖರೀದಿ ಭರಾಟೆ ಜೋರಾಗಿತ್ತು. ಅಂಗಡಿ ಮಳಿಗೆ, ದಿನಸಿ ಅಂಗಡಿ, ಬಟ್ಟೆ ಅಂಗಡಿಗಳು ಜನರಿಂದ ತುಂಬಿ ಹೋಗಿದ್ದವು. ಪ್ರತಿ ವರ್ಷದಂತೆ ಈ ಬಾರಿಯೂ ಸಹ ನಗರಕ್ಕೆ ನಾನಾ ಕಡೆಯಿಂದ ಸಾವಿರಾರು ಗಣೇಶನ ಮೂರ್ತಿಗಳು ಬಂದಿಳಿದಿವೆ.ಎಲ್ಲಾ ವರ್ಷಗಳಲ್ಲೂ ಹಬ್ಬಕ್ಕೆ ಒಂದು ವಾರವಿರುವಾಗಲೇ ಗೌರಿ ಗಣೇಶನ ಮೂರ್ತಿಗಳ ವ್ಯಾಪಾರ ಶುರುವಾಗುತ್ತಿತ್ತು. ಆದರೆ ಈ ಬಾರಿ ಕೊನೆಯ 2 ದಿನ ವ್ಯಾಪಾರ ಜೋರಾಗಿದೆ. ಈ ಸಲ ಹಳ್ಳಿಗಳಲ್ಲಿ ಸಹ ವ್ಯಾಪಾರಸ್ಥರು ಗಣೇಶನ ಮೂರ್ತಿಗಳನ್ನು ಮಾರುವುದು ಕಂಡು ಬಂದಿದೆ. ಶುಕ್ರವಾರ ನಗರದಲ್ಲೂ ವ್ಯಾಪಾರ ಜೋರಾಗಿತ್ತು. ಹಣ್ಣು ಹೂವುಗಳ ದುಬಾರಿ ದರಕ್ಕೆ ಹಳ್ಳಿಗರು ಬೇಸರಿಸಿಕೊಂಡು ನಾವು ಬೆಳೆದ ಮಾಲನ್ನು ಯಾಕೆ ಈ ದರಕ್ಕೆ ಕೊಳ್ಳುವುದಿಲ್ಲ ಎಂದು ಗೊಣಗಿಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.
ಹಳ್ಳಿಗಳಿಂದ ಬಂದ ಯುವಕರು ಸಾವಿರಾರು ರೂಗಳ ಗಣೇಶ ಮೂರ್ತಿಗಳನ್ನು ಕೊಂಡು ಆಟೋ, ಟಾಟಾ ಎಸಿಗಳಲ್ಲಿ ಸಾಗಿಸುವ ದೃಶ್ಯ ಸಂಜೆಯವರೆಗೂ ಚಾಲ್ತಿಯಲ್ಲಿತ್ತು. ಕಳೆದ ವರ್ಷಕ್ಕಿಂತ ಈ ವರ್ಷ ಒಂದಿಷ್ಟು ವ್ಯಾಪಾರ ಕಡಿಮೆಯೇ ಎನ್ನುವ ವ್ಯಾಪಾರಸ್ಥರು ಬಿಸಿಲಲ್ಲಿ ನಿಂತು ಗ್ರಾಹಕರನ್ನು ಸೆಳೆಯುವ ಕಾಯಕ ಮಾಡುತ್ತಿದ್ದರು.ನಗರದ ನೆಹರೂ ಮೈದಾನದಲ್ಲಿ ಸುಮಾರು 52 ವರ್ಷಕ್ಕೂ ಹೆಚ್ಚು ಕಾಲದಿಂದ ಕೂರಿಸುತ್ತಿರುವ ಗಣೇಶ ಉತ್ಸವಕ್ಕೆ ಈಗಾಗಲೇ ಭರದ ಸಿದ್ಧತೆ ನಡೆದು ಈ ವರ್ಷ ಗಣೇಶ ಉತ್ಸವ ಗಣೇಶ ಸಮಿತಿಯವರ ಕೈಯಿಂದ ನಗರಸಭೆ ವ್ಯಾಪ್ತಿಗೆ ಬಂದಿದೆ. ನಗರಸಭೆಯವರ ಸಹಯೋಗದಲ್ಲಿ ಶಕ್ತಿ ಗಣಪತಿ ಪ್ರತಿಷ್ಟಾಪನೆಯಾಗುತ್ತಿದೆ. ಈಗಾಗಲೇ ನೆಹರೂ ಮೈದಾನ ಮದುವೆ ಮನೆಯಂತೆ ಸಿಂಗಾರಗೊಂಡಿದ್ದು ತರಹೇವಾರಿ ಆಟಗಳ ಎಗ್ಸಿಬಿಶನ್ ಮುಕ್ಕಾಲು ಮೈದಾನ ಆವರಿಸಿಕೊಂಡು ನೋಡುಗರನ್ನು ಸೆಳೆಯುತ್ತಿದೆ.
ಬರೋಬ್ಬರಿ 30 ದಿನಗಳ ಕಾಲ ನಗರ ಮತ್ತು ಹಳ್ಳಿಗಳ ಭಾಗದ ಜನರಿಗೆ ಮನರಂಜನೆ ನೀಡುವ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದ್ದು, ಗಂಗಾವತಿ ಪ್ರಾಣೇಶ್, ಮಿಮಿಕ್ರಿ ಗೋಪಿ, ಟೆನಿಸ್ ಕೃಷ್ಣ, ಜೂನಿಯರ್ ವಿಷ್ಣುವರ್ಧನ್ ಮುಂತಾದವರ ಕಾರ್ಯಕ್ರಮಗಳ ಜತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.ದಿನಾಂಕ 06-10-2024 ರಂದು ಶಕ್ತಿ ಗಣೇಶನ ಅದ್ಧೂರಿ ವಿಸರ್ಜನೆ ಕಾರ್ಯಕ್ರಮ, ಮೆರವಣಿಗೆ ಇರುತ್ತದೆ ಎಂದು ಕಾರ್ಯಕ್ರಮ ಆಯೋಜಕರು ತಿಳಿಸಿದ್ದಾರೆ.