ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ನಗರದಲ್ಲಿ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ 300 ಮೀಟರ್ ಉದ್ದದ ಬೃಹತ್ ತಿರಂಗಾ ಯಾತ್ರೆ ನಡೆಸಲಾಯಿತು. ಯಾತ್ರೆಯಲ್ಲಿ ನೂರಾರು ವಿದ್ಯಾರ್ಥಿಗಳು ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ದೇಶ ಮೊದಲು ಎನ್ನುವ ಘೋಷಣೆಗಳನ್ನು ಕೂಗುತ್ತಾ ತಿರಂಗಾವನ್ನು ಹಿಡಿದು ನಗರದ ಶಿವಾಜಿ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಸಿದ್ದೇಶ್ವರ ದೇವಸ್ಥಾನದವರೆಗೆ ತಿರಂಗಾ ಯಾತ್ರೆಯನ್ನು ನಡೆಸಿದರು.ಈ ವೇಳೆ ಎಬಿವಿಪಿ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಯುವಶಕ್ತಿಯ ಕೊಡುಗೆ ಅಪಾರವಿದೆ. ಅವರಲ್ಲಿದ್ದ ದೇಶಪ್ರೇಮ ಇಂದಿನ ಯುವಕರಿಗೆ ಆದರ್ಶವಾಗಬೇಕು. ಭಾರತ ದೇಶಕ್ಕೆ ಸ್ವಾತಂತ್ರ್ಯ ದೊರಕಿದ್ದು ಸಾವಿರಾರು ಜನರ ಬಲಿದಾನದಿಂದ. ಆ ಬಲಿದಾನವನ್ನು ಎಲ್ಲರೂ ನೆನಪಿಸಿಕೊಳ್ಳಬೇಕು. ಯಾವ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಬಲಿದಾನಗಳನ್ನು ಸ್ಮರಿಸಿಕೊಳ್ಳುವುದಿಲ್ಲವೋ ಈ ದೇಶದ ಭವಿಷ್ಯ ಕರಾಳವಾಗಿರುತ್ತದೆ. ಆ ರೀತಿಯ ಉದಾಹರಣೆಯನ್ನು ನಾವು ವಿದೇಶಗಳಲ್ಲಿ ನೋಡಿದ್ದೇವೆ. ಇಂತಹ ಸಮಯದಲ್ಲಿ ದೇಶದ ಅಭಿವೃದ್ಧಿಯ ವೇಗವನ್ನು ಹೆಚ್ಚಳ ಮಾಡುವುದು ಪ್ರತಿಯೊಬ್ಬ ನಾಗಕರಿನ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಎಬಿವಿಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಹರ್ಷ ನಾಯಕ ಮಾತನಾಡಿ, ಯಾತ್ರೆಯಲ್ಲಿ ನಗರದ ಎಕ್ಸಲಂಟ್ ಶಿಕ್ಷಣ ಸಂಸ್ಥೆ, ಶಾಂತಿನಿಕೇತನ ಕಾಲೇಜು, ಸೇಂಟ್ ಜೋಸೆಫ್ ಕಾಲೇಜು ಹಾಗೂ ಹಲವಾರು ಕಾಲೇಜುಗಳ 1,200 ವಿದ್ಯಾರ್ಥಿಗಳು ತಿರಂಗಾ ಯಾತ್ರೆಯಲ್ಲಿ ಭಾಗವಹಿಸಿದ್ದರು.ಎಬಿವಿಪಿ ರಾಜ್ಯ ಉಪಾಧ್ಯಕ್ಷೆ ಸುಮಾ ಬೋಳರೆಡ್ಡಿ, ಅಮಿತಕುಮಾರ ಬಿರಾದಾರ, ಸಂಜು ಕುಲಕರ್ಣಿ, ಸಂದೀಪ ಅರಳಗುಂಡಿ, ಶಶಿಕಾಂತ ರಾಕ್ಲೆ, ಮಂಜುನಾಥ ಹಳ್ಳಿ, ಐಶ್ವರ್ಯ ಕುಲಕರ್ಣಿ, ಸ್ನೇಹಾ ಹಿರೇಮಠ, ಪ್ರವೀಣ ಬಿರಾದಾರ, ಸುರೇಖಾ ಕುಲಕರ್ಣಿ, ಚೇತನ ಕೋರವಾರ, ದಾನಮ್ಮ ಹೊಸಮನಿ, ತ್ರಿಶೀಲಾ ರಾಠೋಡ, ಸುನೀಲ ರಾಠೋಡ, ಸಂಪತ್, ಮೋಹನ ಗುಣದಾಳ, ಸುರೇಶ ಲೋನಾರ ಇತರರು ಉಪಸ್ಥಿತರಿದ್ದರು.