ಬಾಗಲಕೋಟೆಯಲ್ಲಿ ಬೃಹತ್‌ ತಿರಂಗಾ ಯಾತ್ರೆ

| Published : May 20 2025, 01:36 AM IST

ಸಾರಾಂಶ

ದೇಶದ ರಕ್ಷಣೆಗೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ಆಪರೇಶನ್‌ ಸಿಂದೂರ ಕಾರ್ಯಾಚರಣೆ ಹಾಗೂ ದೇಶದ ಸೈನಿಕರನ್ನು ಬೆಂಬಲಿಸಿ ಸೋಮವಾರ ಬಾಗಲಕೋಟೆ ನಗರದಲ್ಲಿ ಬೃಹತ್‌ ತಿರಂಗಾ ಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ರಕ್ಷಣೆಗೆಗಾಗಿ ನಮ್ಮೆಲ್ಲರ ನಡೆ ಎಂಬ ಧ್ಯೇಯವಾಕ್ಯದೊಂದಿಗೆ ಆಪರೇಶನ್‌ ಸಿಂದೂರ ಕಾರ್ಯಾಚರಣೆ ಹಾಗೂ ದೇಶದ ಸೈನಿಕರನ್ನು ಬೆಂಬಲಿಸಿ ಸೋಮವಾರ ನಗರದಲ್ಲಿ ಬೃಹತ್‌ ತಿರಂಗಾ ಯಾತ್ರೆ ನಡೆಯಿತು.

ನಗರದ ಬಿವಿವಿ ಸಂಘದ ಆವರಣದಲ್ಲಿರುವ ಶ್ರೀ ಬೀಳೂರ ಅಜ್ಜನ ದೇವಸ್ಥಾನದಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಪಶು ಆಸ್ಪತ್ರೆ, ಟೀಕಿನ ಮಠದ ರಸ್ತೆ, ಅಡತ ಬಜಾರ್‌, ವಲ್ಲಬಾಯಿ ಚೌಕ, ಪೊಲೀಸ್ ಚೌಕ್, ಮಹಾತ್ಮ ಗಾಂಧಿ ರಸ್ತೆ ಮೂಲಕ ಬಸವೇಶ್ವರ ವೃತ್ತದಲ್ಲಿ ಸಮಾವೇಶಗೊಂಡಿತು.

ನಂತರ ಬಸವೇಶ್ವರ ವೃತ್ತದಲ್ಲಿ ಸಾರ್ವಜನಿಕರ ಉದ್ದೇಶಿಸಿ ಮಾತನಾಡಿದ ಸಂಸದ ಪಿ.ಸಿ. ಗದ್ದಿಗೌಡರ, ಪಾಕಿಸ್ತಾನದಲ್ಲಿ ಉಗ್ರಗಾಮಿಗಳನ್ನು ತಯಾರು ಮಾಡುವ ನೆಲೆಗಳನ್ನು ಕೇವಲ 27 ಸೆಕೆಂಡ್‌ಗಳಲ್ಲಿ ನಮ್ಮ ಯೋಧರು ಧ್ವಂಸಗೊಳಿದ್ದಾರೆ. ದೇಶದ ವ್ಯವಸ್ಥೆ ಬುಡಮೇಲು ಮಾಡುವ ದುರಾಲೋಚನೆಗೆ ಸೈನಿಕರು ತಕ್ಕ ಪಾಠ ಕಲಿಸಿದ್ದಾರೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ದೇಶ ಉಗ್ರವಾದ ಎದುರಿಸಲು ಸಮರ್ಥವಾಗಿದೆ ಎಂದರು.

ಗುಳೆದಗುಡ್ಡದ ಒಪ್ಪತ್ತೇಶ್ವರಮಠದ ಒಪ್ಪತ್ತೇಶ್ವರಸ್ವಾಮೀಜಿ ಮಾತನಾಡಿ, ಭಾರತ ಶಾಂತಿಪ್ರೀಯ ದೇಶವಾದರೂ ನಮ್ಮನ್ನು ತುಳಿಯಲು ಬಂದವರನ್ನು ಸುಮ್ಮನೆ ಬಿಡುವ ದೇಶವಲ್ಲ ಎನ್ನುವ ಎಚ್ಚರಿಕೆಯನ್ನು ಆಪರೇಶನ್‌ ಸಿಂದೂರ ಮೂಲಕ ಮಾಡಿ ತೋರಿಸಿದೆ. ಗುಡಿಯೋಳಗಿನ ದೇವರಗಿಂತ ಗಡಿಯೋಳಗಿನ ದೇವರು ದೊಡ್ಡವ ಎನ್ನುವ ಹಾಗೆ ಗಡಿಯಲ್ಲಿನ ಸೈನಿಕರಿಂದಾಗಿ ನಾವೆಲ್ಲ ಇಂದು ಸುರಕ್ಷಿತವಾಗಿದ್ದೇವೆ. ಅಂಥ ಸೈನಿಕರಿಗೆ ಶಕ್ತಿ ತುಂಬುವ ತಿರಂಗಾ ಯಾತ್ರೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ಸಾನ್ನಿಧ್ಯ ವಹಿಸಿದ್ದ ಚರಂತಿಮಠದ ಪ್ರಭುಸ್ವಾಮಿಗಳು ಮಾತನಾಡಿ, ಆಪರೇಶನ್ ಸಿಂದೂರ ಭಾರತ ಮಹಿಳೆಯರ ಗೌರವದ ಸಂಕೇತ. ಈ ಕಾರ್ಯಾಚರಣೆ ಮೂಲಕ ಜನಸಾಮಾನ್ಯರಿಗೆ ಹಾನಿ ಮಾಡದೇ ಉಗ್ರರು ಹಾಗೂ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸಿರುವುದನ್ನು ಇಡೀ ಜಗತ್ತೇ ಮೆಚ್ಚಿಕೊಂಡಿದೆ. ಆಪರೇಶನ್ ಸಿಂದೂರ ಜಗತ್ತಿಗೆ ಭಾರತದ ಶಕ್ತಿ ಸಾಮರ್ಥ್ಯ ಏನೆಂಬುದು ಗೊತ್ತಾಗಿದೆ. ಇದು ಅನೇಕ ವೈರಿ ದೇಶಗಳಿಗೆ ನಡುಕ ಉಂಟುಮಾಡಿದೆ, ಜಗತ್ತಿನ ಬಹುತೇಕ ದೇಶಗಳು ಭಾರತದ ಬೆಂಬಲಕ್ಕೆ ನಿಂತಿವೆ ಎಂದು ಹೇಳಿದರು.

ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಮಾತನಾಡಿದರು. ಅಮೀನಗಡದ ಮಾತೆ ಮಾಣಿಕೇಶ್ವರಿ ಅಮ್ಮನವರು, ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ, ನಂದು ಗಾಯಕವಾಡ, ಕ್ಯಾಪ್ಟನ್ ಕೋರಿ ಸೇರಿದಂತೆ ವೀರ ಯೋಧರು, ನಿವೃತ್ತ ಯೋಧರು ಪಾಲ್ಗೊಂಡಿದ್ದರು.

ಗಮನ ಸೆಳೆದ ತಿರಂಗಾ: ತಿರಂಗಾ ಯಾತ್ರೆಯಲ್ಲಿ ಸುಮಾರು 300 ಅಡಿ ಉದ್ದದ ತ್ರಿವರ್ಣ ಧ್ವಜ ಗಮನ ಸೆಳೆಯಿತು. ಬೀಳೂರ ಅಜ್ಜನ ದೇವಸ್ಥಾನದಲ್ಲಿ ಚರಂತಿಮಠದ ಪ್ರಭುಸ್ವಾಮೀಜಿ, ಸಂಸದ ಪಿ.ಸಿ. ಗದ್ದಿಗೌಡರ, ರಾಜ್ಯಸಭಾ ಸದಸ್ಯ ಡಾ.ವೀರಣ್ಣ ಚರಂತಿಮಠ, ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ತಿರಂಗಾ ಯಾತ್ರೆಗೆ ಚಾಲನೆ ನೀಡಿದರು. ಎನ್.ಸಿ.ಸಿ ವಿದ್ಯಾರ್ಥಿಗಳು, ಅಕ್ಕನ ಬಳಗದ ಸದಸ್ಯರು, ಮಹಿಳಾ ಸ್ವ ಸಹಾಯ ಸಂಘಗಳ ಸದಸ್ಯೆಯರು, ವಕೀಲರ ಸಂಘ, ವೈದ್ಯರ ಸಂಘ, ರೋಟರಿ ಹಾಗೂ ಲಯನ್ಸ್‌ ಕ್ಲಬ್‌ ಸೇರಿದಂತೆ ಅನೇಕ ಸಂಘ-ಸಂಸ್ಥೆಗಳು, ವಿದ್ಯಾರ್ಥಿಗಳು ಸೇರಿದಂತೆ 6 ಸಾವಿರಕ್ಕೂ ಅಧಿಕ ಜನರು ಭಾಗವಹಿಸಿದ್ದರು.