ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭೀಕರ ಬರಗಾಲ ಎದುರಾಗಿದ್ದರೂ ಶ್ರೀ ಹುಲಿಗೆಮ್ಮ ದೇವಸ್ಥಾನದ ಆದಾಯದಲ್ಲಿ ಭಾರಿ ಏರಿಕೆಯಾಗಿದೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಶ್ರೀಹುಲಿಗೆಮ್ಮ ದೇವಸ್ಥಾನದಲ್ಲಿನ ವಿಶೇಷ ದರ್ಶನ ಹಾಗೂ ಲಡ್ಡು ಪ್ರಸಾದ ವಿತರಣೆಯಿಂದ ಕೇವಲ ನಾಲ್ಕು ತಿಂಗಳ ಅವಧಿಯಲ್ಲಿ ಎರಡು ಕೋಟಿಗೂ ಅಧಿಕ ಆದಾಯ ಬಂದಿದೆ.ಆಡಳಿತ ಮಂಡಳಿಯ ವಿಶೇಷ ಕಾಳಜಿಯಿಂದ ರೂಪಿಸಿದ ಯೋಜನೆ ಫಲ ನೀಡಿವೆ. ಇದರಿಂದ ದೇವಸ್ಥಾನದ ಆದಾಯದಲ್ಲಿ ಭಾರಿ ಏರಿಕೆಯಾಗಿದೆ. ಪ್ರಸಕ್ತ ವರ್ಷ ಅಳವಡಿಸಿರುವ ಶೀಘ್ರ ದರ್ಶನ, ವಿಶೇಷ ದರ್ಶನ ಹಾಗೂ ಲಡ್ಡು ಪ್ರಸಾದದಿಂದ ಆದಾಯದಲ್ಲಿ ತೀವ್ರ ಹೆಚ್ಚಳವಾಗಿದೆ. 2026 ಏಪ್ರಿಲ್ನಿಂದ ಜುಲೈ ವರೆಗೆ ಈ ಮೂರು ಕ್ರಮಗಳಿಂದ ಎರಡು ಕೋಟಿಗೂ ಅಧಿಕ ಆದಾಯ ಆಗಿರುವುದು ವಿಶೇಷ.
ಕೇವಲ ನಾಲ್ಕು ತಿಂಗಳಲ್ಲಿ ಶೀಘ್ರ ದರ್ಶನದಿಂದ ₹50,40,256, ವಿಶೇಷ ದರ್ಶನದಿಂದ ₹75,01,850 ಹಾಗೂ ಲಡ್ಡು ಪ್ರಸಾದದಿಂದ ₹65,72,080 ಆಗಿದೆ.ಬರದಲ್ಲೂ ಭರಪೂರ ಆದಾಯ: ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಭೀಕರ ಬರಗಾಲ ಎದುರಾಗಿದ್ದರೂ ಶ್ರೀ ಹುಲಿಗೆಮ್ಮ ದೇವಸ್ಥಾನದ ಆದಾಯದಲ್ಲಿ ಭಾರಿ ಏರಿಕೆಯಾಗಿದೆ. ದೇವಸ್ಥಾನಕ್ಕೆ ಬರುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಉಚಿತ ಪ್ರಯಾಣ ಭಕ್ತರ ಸಂಖ್ಯೆ ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.
ಕೋಟಿ ಭಕ್ತರು: ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಈ ಹಿಂದೆ ಪ್ರತಿ ವರ್ಷ ಸರಾಸರಿ 50 ಲಕ್ಷ ಭಕ್ತರು ಬರುತ್ತಿದ್ದರು. ಆದರೆ ಈಗ ಅದರ ಸಂಖ್ಯೆಯಲ್ಲಿ ಏರಿಕೆಯಾಗಿದೆ. ಕಳೆದೊಂದು ವರ್ಷದ ಅಂದಾಜು ಲೆಕ್ಕಾಚಾರದಲ್ಲಿ ಶ್ರೀ ಹುಲಿಗಮ್ಮ ದೇವಸ್ಥಾನಕ್ಕೆ 90 ಲಕ್ಷದಿಂದ ಕೋಟಿಗೆ ಏರಿಕೆಯಾಗಿದೆ. ಭಕ್ತರ ಸಂಖ್ಯೆ ಲೆಕ್ಕಾಚಾರ ಮಾಡುವ ತಲೆ ಎಣಿಕೆ ಯಂತ್ರ ಅಷ್ಟಾಗಿ ಕಾರ್ಯ ನಿರ್ವಹಿಸದೆ ಇರುವುದರಿಂದ ತಂತ್ರಜ್ಞಾನ ಇನ್ನಷ್ಟು ಅಭಿವೃದ್ಧಿಪಡಿಸಿ ಅಳವಡಿಸಲು ದೇವಸ್ಥಾನ ಸಮಿತಿ ತೀರ್ಮಾನಿಸಿದೆ.₹100 ಕೋಟಿ: ಶ್ರೀ ಹುಲಿಗೆಮ್ಮ ದೇವಸ್ಥಾನದ ಬ್ಯಾಂಕ್ ಖಾತೆಯಲ್ಲಿ ₹92 ಕೋಟಿ ಸಂಗ್ರಹವಿದೆ. ಈಗಾಗಲೇ ದೇವಸ್ಥಾನದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹತ್ತಾರು ಕೋಟಿ ವೆಚ್ಚ ಮಾಡಿರುವುದನ್ನು ಲೆಕ್ಕ ಹಾಕಿದರೆ ನೂರು ಕೋಟಿಗೂ ಅಧಿಕ ಹಣ ದೇವಸ್ಥಾನದ ಆದಾಯದಿಂದ ಬಂದಿದೆ.
ಪ್ರತಿ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಹುಂಡಿ ತುಂಬಿದಾಗಲೆಲ್ಲ ತೆರೆಯಲಾಗುತ್ತದೆ. ಹೀಗೆ ತೆರೆದಾಗ ಸರಾಸರಿ ₹70 ರಿಂದ ₹80 ಲಕ್ಷ ಕಾಣಿಕೆಯಿಂದಲೇ ಬರುತ್ತದೆ. ಇದರ ಜತೆಗೆ ಬಂಗಾರ, ಬೆಳ್ಳಿ ಪ್ರತ್ಯೇಕವಾಗಿ ಹಾಕಲಾಗಿರುತ್ತದೆ. ಇದೆಲ್ಲವನ್ನು ಲೆಕ್ಕಾಚಾರ ಮಾಡಿದಾಗ ಪ್ರತಿವರ್ಷ ₹10ರಿಂದ 12 ಕೋಟಿ ಹುಂಡಿಯಿಂದ ಬರುತ್ತದೆ. ಈಗ ಶೀಘ್ರ ದರ್ಶನ, ವಿಶೇಷ ದರ್ಶನ ಹಾಗೂ ಲಡ್ಡು ಪ್ರಸಾದದಿಂದ ವರ್ಷಕ್ಕೆ ₹6-8 ಕೋಟಿ ಹೆಚ್ಚುವರಿಯಾಗಿ ಸಂಗ್ರಹವಾಗಲಿದೆ. ದೇವಸ್ಥಾನ ಆಡಳಿತ ಮಂಡಳಿ ಕೈಗೊಂಡ ಈ ಕ್ರಮಗಳಿಂದ ಇನ್ಮುಂದೆ ದೇವಸ್ಥಾನದ ಆದಾಯ ದುಪ್ಪಟ್ಟಾಗಲಿದೆ.ಶ್ರೀ ಹುಲಿಗೆಮ್ಮ ದೇವಸ್ಥಾನದಲ್ಲಿ ಅಳವಡಿಸಿರುವ ಶೀಘ್ರ ದರ್ಶನ, ವಿಶೇಷ ದರ್ಶನ ಹಾಗೂ ಲಡ್ಡು ಪ್ರಸಾದದಿಂದ ಕೇವಲ ನಾಲ್ಕು ತಿಂಗಳಲ್ಲಿ ಎರಡು ಕೋಟಿ ರು.ಗೂ ಅಧಿಕ ಆದಾಯ ಜಮೆಯಾಗಿದೆ. ಇದರಿಂದ ದೇವಸ್ಥಾನದ ಆದಾಯ ಹೆಚ್ಚಳವಾಗಲಿದೆ ಎಂದು ಶ್ರೀ ಹುಲಿಗೆಮ್ಮ ದೇವಸ್ಥಾನ ಸಮಿತಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ಎಂ.ಎಚ್ ತಿಳಿಸಿದ್ದಾರೆ.