ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಜೀತು.ಆರ್.ಎಸ್

ಕನ್ನಡಪ್ರಭ ವಾರ್ತೆ ಶೃಂಗೇರಿ

ಅಬಿವೃದ್ಧಿ ಹೆಸರಲ್ಲಿ ಪರಿಸರ ನಾಶವಾಗುತ್ತಿದೆ. ಅಭಿವೃದ್ದಿಯೂ ಬೇಕು ಪರಿಸರವೂ ಉಳಿಯಬೇಕು. ಮನುಷ್ಯನ ದುರಾಸೆಯೇ ಪರಿಸರ ನಾಶಕ್ಕೆ ಮೂಲ ಕಾರಣ. ಅಭಿವೃದ್ಧಿ ಹೆಸರಲ್ಲಿ ಅರಣ್ಯ ನಾಶವಾಗುತ್ತಿರುವುದು ಶೋಚನೀಯ ಎಂದು ಶೃಂಗೇರಿ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ಜೀತು.ಆರ್.ಎಸ್ ಹೇಳಿದರು.

ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚಾರಣೆಯಲ್ಲಿ ಸಸಿ ನೆಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಾಗರಿಕ ಪ್ರಪಂಚ ಬೆಳೆಯುತ್ತಿದೆ. ಮಾನವನ ಮೂಲಭೂತ ಸೌಕರ್ಯಗಳ ಅವಶ್ಯಕತೆ ಹೆಚ್ಚುತ್ತಿದೆ.ಅರಣ್ಯ ನಾಶ ಸೇರಿದಂತೆ ಪರಿಸರ ನಾಶವು ಹೆಚ್ಚುತ್ತಿದೆ.ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಅರಣ್ಯಗಳನ್ನು ಬೆಳೆಸಿ ಉಳಿಸಿಕೊಂಡು ಬರಲಾಗುತ್ತಿದೆ. ವೃಕ್ಷವನ್ನು ಪೂಜಿಸಿಕೊಂಡು ಬರುವ ಸಂಸ್ಕ್ರತಿ ಹಿಂದಿನಿಂದಲೂ ಬಂದಿದೆ. ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆ ಜಗತ್ತಿನಲ್ಲಿಯೇ ಶ್ರೇಷ್ಠವಾದುದು ಎಂದರು.

ಪ್ರಕೃತಿಯಲ್ಲಿರುವ ಪ್ರತಿಯೊಂದು ಜೀವರಾಶಿಗೂ ನಮ್ಮಂತೆ ಬದುಕುವ ಹಕ್ಕಿದೆ. ನಾವು ಬದುಕುವ ಜೊತೆಗೆ ಅವುಗಳನ್ನು ಬದುಕಲು ಬಿಡಬೇಕು. ಸಕಲ ಜೀವರಾಶಿಗಳಿಗೂ ಪ್ರಕೃತಿಯೇ ಮೂಲಾದಾರ. ನಾವು ಪ್ರಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕಿದೆ. ಇಂದು ಪರಿಸರ ಹಾನಿ ತಡೆಗಟ್ಟಲು ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲಿ ಕಾನೂನು ಕಾಯ್ದೆಗಳನ್ನು ರೂಪಿಸಲಾಗಿದೆ. ಭಾರತದಲ್ಲಿಯೂ ರೂಪಿಸಲಾಗಿದೆ.ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ಮಾರಕ. ಪ್ಲಾಸ್ಟಿಕ್ ಮುಕ್ತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಪಣ ತೊಡಬೇಕು ಎಂದರು.


ವಲಯಾರಣ್ಯಾಧಿಕಾರಿ ಮಧುಕರ್ ಮಾತನಾಡಿದರು. ಬಿಜಿಎಸ್ ಶಿಕ್ಷಣ ಸಂಸ್ಥೆ ನಾಗೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಇ.ಮಹೇಶ್,ಶಿಕ್ಷಕ ಕಿರಣ್ ಕುಮಾರ್ ಮತ್ತಿತರರು ಇದ್ದರು.

5 ಶ್ರೀ ಚಿತ್ರ 3-

ಶೃಂಗೇರಿ ಪಟ್ಟಣದ ಬಿಜಿಎಸ್ ಶಿಕ್ಷಣ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚಾರಣೆಯನ್ನು ನ್ಯಾ.ಜೀತು.ಆರ್.ಎಸ್.ಸಸಿ ನೆಡುವ ಮೂಲಕ ಉದ್ಘಾಟಿಸಿದರು.