ಕನ್ನಡಪ್ರಭ ವಾರ್ತೆ ಅಜ್ಜಂಪುರ

ಜನರು ಗೊತ್ತು ಗುರಿಗಳಿಲ್ಲದೆ ದಿಕ್ಕುತಪ್ಪಿ ಗಾಢಂಧಕಾರದಲ್ಲಿ ತೇಲಿ ಮುಳುಗುತ್ತಿದ್ದಾರೆ. ಸಂಸ್ಕಾರ ಮತ್ತು ಸಚ್ಚಾರಿತ್ರ್ಯದಿಂದ ಮಾತ್ರ ಬದುಕನ್ನು ಶ್ರೀಮಂತಗೊಳಿಸಲು ಸಾಧ್ಯವಿದೆ. ಗುರುವಿನ ಜ್ಞಾನ ಬೋಧಾಮೃತದಿಂದ ಮಾನವ ಜೀವನ ಉಜ್ವಲಗೊಳ್ಳುವುದೆಂದು ಬಾಳೆಹೊನ್ನೂರು ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ತಾಲೂಕಿನ ಚೆನ್ನಾಪುರದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ, ಯುಗಮಾನೋತ್ಸವ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪರಮ ಪುರುಷಾರ್ಥಗಳು ಎಲ್ಲರಿಗೂ ಬೇಕೇ ಬೇಕು. ಜೀವನ ವಿಧಾನವೇ ನಿಜವಾದ ಧರ್ಮ, ಸಕಲರ ಬಾಳಿನಲ್ಲಿ ಬಲವನ್ನು ತಂದು ಕೊಡುವುದೇ ಗುರುವಿನ ಪರಮಧರ್ಮವಾಗಿದೆ, ಶಿವ ಜ್ಞಾನದ ಹರಿವನ್ನು ಉಂಟುಮಾಡುವ ಶಕ್ತಿ ಗುರುವಿಗಲ್ಲದೆ ಬೇರೆ ಯಾರಿಗೂ ಇಲ್ಲ. ಜ್ಞಾನ ಸಂಜೀವಿನಿಯಾದ ಈ ಗುರುವಿನ ಕಾರುಣ್ಯವಿಲ್ಲದೆ ಬಾಳು ವಿಕಾಸಗೊಳ್ಳದು. ಮನುಷ್ಯನ ಮನಸ್ಸು ಲೌಕಿಕದಲ್ಲಿ ಬೆರೆತು ಮಲಿನಗೊಂಡ ಬಟ್ಟೆಯಂತಾಗಿದೆ. ಮನದ ಕನ್ನಡಿಯ ಮೇಲೆ ಧೂಳು ಮುಸುಕಿದ ಅಂಟಿದ ಜಾಡ್ಯ ಜಾಡಿಸಿ ಪರಿಶುದ್ಧಗೊಳಿಸಲು ಶ್ರೀ ಗುರುವಿನ ಜ್ಞಾನ ಬೋಧಾಮೃತ ಅವಶ್ಯಕವಾಗಿಬೇಕು ಎಂದು ಹೇಳಿದರು.

ಸುಂದರವಾದ ಉಡುಗೆ ತೊಡಿಗೆಗಳಿಂದ ವ್ಯಕ್ತಿತ್ವವನ್ನು ಬದಲಿಸಿಕೊಳ್ಳಬಹುದು ವಿನಃ ಬದುಕನ್ನು ಬದಲಿಸಿಕೊಳ್ಳಲು ಸಾಧ್ಯವಿಲ್ಲ. ಧರ್ಮ ಸಂಸ್ಕೃತಿ ಸಬ್ಯತೆ ಸದ್ಗುಣ ಮತ್ತು ಸಂಸ್ಕಾರ ಜನರ ನಿಜವಾದ ಆಸ್ತಿ ಎಂದು ಶ್ರೀ ಜಗದ್ಗುರು ರೇಣುಕಾಚಾರ್ಯರು ಬೋಧಿಸಿದ್ದಾರೆ. ಹೊರಗಿನ ಸಿರಿ ಸಂಪತ್ತು ಹೆಚ್ಚುತ್ತಿದೆ ವಿನ ಒಳಗಿನ ಜ್ಞಾನ ಸಂಪತ್ತು ಬೆಳೆಯುತ್ತಿಲ್ಲ. ನಾಗರಿಕತೆಯ ಹೆಸರಿನಲ್ಲಿ ನಿಜವಾದ ಜೀವನ ಮೌಲ್ಯಗಳು ಕಣ್ಮರೆಯಾಗಬಾರದು ಎಂದರು.

ಚಿಕ್ಕಮಗಳೂರು ಕುಮಾರಸ್ವಾಮಿ ರೇಣುಕಾಚಾರ್ಯರ ಸಾಮಾಜಿಕ ಸತ್ಕ್ರಾಂತಿ ಕುರಿತು ಉಪನ್ಯಾಸ ನೀಡಿದರು. ಎನ್‌.ಡಿ. ಪರಮೇಶ್ವರಪ್ಪ, ನಿವೃತ್ತ ಸೇನಾಧಿಕಾರಿ ಬಿ.ಎಸ್.ರಾಜು ಬಗ್ಗವಳ್ಳಿ ಮೊದಲಾದ ಗಣ್ಯರಿಗೆ ವಿಶೇಷ ಗುರು ರಕ್ಷೆ ನೀಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ರೇಣುಕಾಚಾರ್ಯರ ಭಾವಚಿತ್ರ ಅನಾವರಣ ನಡೆಯಿತು.


ಮಾಜಿ ಶಾಸಕ ಡಿ.ಎಸ್ ಸುರೇಶ್, ತಾಲೂಕಿನ ಜಂಗಮ ಸಮಾಜದ ಅಧ್ಯಕ್ಷ ಎನ್.ವಿ.ಗಂಗಾಧರಯ್ಯ, ಎಡೆಯೂರು ಕ್ಷೇತ್ರದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಬಿಳಕಿ ರಾಚೋಟೇಶ್ವರ ಶಿವಾಚಾರ್ಯರು, ತಂಡೆಕೆರೆ ಗಂಗಾಧರ ಶಿವಾಚಾರ್ಯರು, ನಂದಿಪುರ ನಂದೀಶ್ವರ ಶಿವಾಚಾರ್ಯರು, ಬೀರೂರು ರುದ್ರಮುನಿ ಶಿವಾಚಾರ್ಯರು, ಹಣ್ಣೆ ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯರು, ತಾವರೆಕೆರೆ ಡಾ|| ಅಭಿನವ ಸಿದ್ದಲಿಂಗ ಶಿವಾಚಾರ್ಯರು, ತೆಂಡೆಕೆರೆ ಗಂಗಾಧರ ಶಿವಾಚಾರ್ಯರು, ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಬಡಗನಾಡು, ಹೇಮರೆಡ್ಡಿ ಸಮಾಜದ ಅಧ್ಯಕ್ಷ ರೇವಣಸಿದ್ದಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ ಪಾಲ್ಗೊಂಡು ಗುರು ರಕ್ಷೆ ಸ್ವೀಕರಿಸಿದರು ಪಿಡಿಒ ಸುನಿಲ್ ಸ್ವಾಗತಿಸಿದರು.

ಹುಣಸಘಟ್ಟದ ಗುರುಮೂರ್ತಿ ಶಿವಾಚಾರ್ಯರು ನಿರೂಪಿಸಿದರು, ಸಾಣೆಹಳ್ಳಿ ಕಲಾ ತಂಡದವರಿಂದ ಪ್ರಾರ್ಥನೆ ನಡೆಯಿತು ಸಮಾರಂಭಕ್ಕೂ ಮುನ್ನ ಗ್ರಾಮದಲ್ಲಿ ಬಾಳೆಹೊನ್ನೂರು ರಂಭಾಪುರಿ ಜಗದ್ಗುರುಗಳವರ ಅಡ್ಡ ಪಲ್ಲಕ್ಕಿ ಮಹೋತ್ಸವ ಸಕಲ ವಾದ್ಯ ವೈಭವ ಕಳಸ ಕನ್ನಡಿಯೊಂದಿಗೆ ಸಂಭ್ರಮದಿಂದ ಜರುಗಿತು. ಅಜ್ಜಂಪುರ ತಾಲೂಕು ಜಂಗಮ ಸಮಾಜದ ಎಲ್ಲಾ ಪದಾಧಿಕಾರಿಗಳು, ಗಣ್ಯರು ಪಾಲ್ಗೊಂಡಿದ್ದರು, ಸಮಾರಂಭದ ನಂತರ ಅನ್ನದಾಸೋಹ ಜರುಗಿತು.