ಸಾರಾಂಶ
ಕನ್ನಡಪ್ರಭ ವಾರ್ತೆ, ಕೆ.ಆರ್.ಪೇಟೆ
ಯಾವುದೇ ಧರ್ಮವು ಸಮಾಜದ ಸ್ವಾಸ್ತ್ಯವನ್ನು ಹಾಳು ಮಾಡಿ ಅಶಾಂತಿ ನಿರ್ಮಿಸಲು ಉತ್ತೇಜನ ನೀಡುವುದಿಲ್ಲ. ಸಮಾಜದಲ್ಲಿ ವಾಸಿಸುವ ಎಲ್ಲಾ ಜಾತಿ ವರ್ಗಗಳ ಜನರು ಪರಸ್ಪರ ಪ್ರೀತಿ ವಿಶ್ವಾಸಗಳಿಂದ ಒಂದಾಗಿ ಜೀವನ ನಡೆಸಿ ಎಂದು ತಿಳಿಸುವುದೇ ನಿಜವಾದ ಮಾನವ ಧರ್ಮ ಎಂದು ಮೈಸೂರಿನ ಜೆಎಸ್ಎಸ್ ಉನ್ನತ ಶಿಕ್ಷಣ ಸಂಶೋಧನಾ ಅಕಾಡೆಮಿಯ ಸಹಾಯಕ ಪ್ರಾಧ್ಯಾಪಕ ಭೀಮರಾಜ್ ಈರೇಗೌಡ ಹೇಳಿದರು.ತಾಲೂಕಿನ ಬೂಕನಕೆರೆ ಹೋಬಳಿಯ ಶರಣ ಸ್ಥಳ ಕಾಪನಹಳ್ಳಿ ಗವಿಮಠದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಿಕ್ಕೇರಿ ವಲಯದ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟಗಳ ವತಿಯಿಂದ ಸಾಮೂಹಿಕ ಸತ್ಯನಾರಾಯಣ ಸ್ವಾಮಿ ಪೂಜೆ ಹಾಗೂ ಗಣ್ಯರಿಗೆ ಅಭಿನಂದನಾ ಸಮಾರಂಭ ಉಪನ್ಯಾಸ ನೀಡಿದರು.
ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಹೊಂದುವ ಜೊತೆಗೆ ಕೈಹಿಡಿದ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಕೂಡಾ ಪಡೆಯಬಹುದಾಗಿದೆ. ಭಗವಂತನ ಒಲುಮೆಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ ಎಂದರು.ರಾಜ್ಯ ಸರ್ಕಾರಿ ನೌಕರರ ಸಂಘದ ಪರಿಷತ್ ಸದಸ್ಯ ಆರ್.ಟಿ.ಓ ಮಲ್ಲಿಕಾರ್ಜುನ ಮಾತನಾಡಿ, ತಂದೆ ತಾಯಿಗಳಿಗಿಂತ ಮಿಗಿಲಾದ ದೇವರು ವಿಶ್ವದಲ್ಲಿಯೇ ಯಾವುದೂ ಇಲ್ಲ. ಸಮಾಜದಲ್ಲಿ ಬದುಕುವ ಮಾರ್ಗವನ್ನು ತೋರಿಸಿಕೊಟ್ಟ ತಂದೆ ತಾಯಿಗಳು ಹಾಗೂ ಗುರು-ಹಿರಿಯರನ್ನು ಭಕ್ತಿ ಭಾವದಿಂದ ಕಂಡು ಪೂಜಿಸಿ ಗೌರವಿಸುವ ಸಂಸ್ಕಾರವನ್ನು ಯುವಜನರು ಹಾಗೂ ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಮೈಸೂರು ವಿಭಾಗದ ಪ್ರಾದೇಶಿಕ ನಿರ್ದೇಶಕ ಜಯರಾಮ್ ನೆಲ್ಲಿತ್ತಾಯ ಮಾತನಾಡಿ, ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ದಿಕ್ಕಿನಲ್ಲಿ ಕೆಲಸ ಮಾಡಲಾಗುತ್ತಿದೆ. ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ, ವೃತ್ತಿ ಕೌಶಲ್ಯ ಮಾರ್ಗದರ್ಶನ, ಮಹಿಳಾ ಸಬಲೀಕರಣ ಹಾಗೂ ಹೈನುಗಾರಿಕೆಗೆ ಒತ್ತು ನೀಡಲಾಗುತ್ತಿದೆ. ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಬೆಳೆಸುವ ಸಂಕಲ್ಪದೊಂದಿಗೆ ಕೆಲಸ ಮಾಡುತ್ತಿದೆ ಎಂದರು.ಹರಳಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಟಿ.ಲೋಕೇಶ್, ಪ್ರಥಮ ದರ್ಜೆ ಗುತ್ತಿಗೆದಾರ ವಿ.ಡಿ.ಮೋಹನ್, ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗವಿಮಠದ ಪೀಠಾಧಿಪತಿ ಶ್ರೀಸ್ವತಂತ್ರ ಚನ್ನವೀರ ಶಿವಯೋಗಿ ಸ್ವಾಮೀಜಿ ಮಾತನಾಡಿ, ಒಂದು ಚುನಾಯಿತ ಸರ್ಕಾರವು ಮಾಡಲಾಗದ ಎಲ್ಲಾ ಕೆಲಸ ಕಾರ್ಯಗಳನ್ನು ಧರ್ಮಸ್ಥಳ ಸಂಸ್ಥೆಯು ಮಾಡಿ ಶ್ರೀಸಾಮಾನ್ಯರ ನೋವಿಗೆ ಧನಿಯಾಗಿದೆ ಎಂದರು.ವಿಠಲಾಪುರ ಗ್ರಾಪಂ ಅಧ್ಯಕ್ಷ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ವಿ.ಡಿ.ಹರೀಶ್, ಪ್ರಥಮ ದರ್ಜೆ ಗುತ್ತಿಗೆದಾರ ವಿ.ಡಿ.ಮೋಹನ್, ಗ್ರಾಪಂ ಸದಸ್ಯರಾದ ರಾಧಾ ಹರೀಶ್, ಡಿ.ಸಿ.ನಾರಾಯಣ, ಡಿ.ಎನ್. ಗಿರಿಧರ್, ಶಿವಕುಮಾರ್, ನಾಗೇಶ್, ಲತಾ, ಹರೀಶ್, ಪುಟ್ಟರಾಜು, ನವೀನ್, ಸಾವಿತ್ರಮ್ಮ ಸ್ವಾಮಿಗೌಡ ಇತರರಿದ್ದರು.