ಸಾರಾಂಶ
ಕನ್ನಡಪ್ರಭ ವಾರ್ತೆ ಉಳ್ಳಾಲ
ಕರಾವಳಿ ಇಂದು ಶಿಕ್ಷಣದ ವ್ಯಾಪಾರೀಕರಣ ಮತ್ತು ಅಭಿವೃದ್ಧಿಯ ಭೌತಿಕತೆಯ ಭಾರದಲ್ಲಿ ಕುಸಿಯುತ್ತಿದೆ. ಮಾನವೀಯತೆ ಮಾಯವಾಗಿದೆ. ಮನುಷ್ಯ ಇನ್ನೊಬ್ಬರನ್ನು ಪ್ರೀತಿಯಿಂದ ನೋಡದೆ ಅನುಮಾನ, ಭಯದಿಂದ ನೋಡುವಂತಾಗಿದೆ. ಕನಕ, ನಾರಾಯಣಗುರುಗಳಂತಹ ಸಂತರ ಸಂದೇಶ ಹೃದಯವನ್ನು ಮುಟ್ಟಿದರೆ ನಾವು ಮತ್ತೆ ಮನುಷ್ಯರಾಗುತ್ತೇವೆ ಎಂದು ಪುತ್ತೂರಿನ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ನರೇಂದ್ರ ರೈ ದೇರ್ಲ ಹೇಳಿದರು.ಅವರು ಮಂಗಳೂರು ವಿಶ್ವವಿದ್ಯಾನಿಲಯದ ಕನಕದಾಸ ಸಂಶೋಧನ ಕೇಂದ್ರದ ವತಿಯಿಂದ ಮಂಗಳಗಂಗೋತ್ರಿಯ ಡಾ. ಯು.ಆರ್. ರಾವ್ (ಹಳೆಯ ಸೆನೆಟ್) ಸಭಾಂಗಣದಲ್ಲಿ ಮಂಗಳವಾರ ನಡೆದ ‘ಕನಕ ಸ್ಮೃತಿ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕನಕದಾಸರಿಗೆ ಅವಸರ ಪಡದೆ, ಪ್ರತಿಭಟಿಸದೆ ಕಾಯುವ ತಾಳ್ಮೆಯಿತ್ತು. ಕಾಯುವುದರ ಮೂಲಕ ಒಂದು ಅರಿವು ಸೃಷ್ಟಿಯಾಗುತ್ತದೆ ಎಂಬುದನ್ನು ನಾವು ಕನಕರಿಂದ ಹಾಗೂ ಅವರ ಚಿಂತನೆಗಳಿಂದ ಅರ್ಥ ಮಾಡಿಕೊಳ್ಳಬೇಕು. ನೈಜವಾಗಿ ಕನಕದಾಸರ ಅರಿವೇ ಭಗವಂತ ಅಥವಾ ಕೃಷ್ಣನಾಗಿದ್ದಾನೆ. ಮಂಗಳೂರು ವಿವಿಯ ಕನಕ ಅಧ್ಯಯನ ಕೇಂದ್ರ ಕನಕ ಚಿಂತನೆಗಳನ್ನು ವೈಚಾರಿಕ ಚಿಂತನೆಗೆ ಒಡ್ಡಿ ಹೊಸ ಬೆಳಕನ್ನು ಮೂಡಿಸಿದೆ ಎಂದರು.ಕಾರ್ಯಕ್ರಮದಲ್ಲಿ ಹಾವೇರಿ ವಿ.ವಿ. ವಿಶ್ರಾಂತ ಕುಲಪತಿ, ಜಾನಪದ ವಿದ್ವಾಂಸ ಪ್ರೊ. ಚಿನ್ನಪ್ಪ ಗೌಡ ಮಾತನಾಡಿ, ಅವರ ಕೃತಿಯಲ್ಲಿ ಸಕಾಲಿಕವೂ, ಸಾರ್ವಕಾಲಿಕ ಸಂಗತಿಗಳು ಇರುವುದನ್ನು ನಾವು ಮುಖ್ಯವಾಗಿ ಗಮನಿಸಬೇಕಿದೆ. ಸಮಾಜದ ನೈತಿಕ ಅಧಃಪತನದ ಕಾಲಘಟ್ಟದಲ್ಲಿ ಮೌಲ್ಯಯುತ ಸಂಗತಿಗಳನ್ಜು ಸಮಾಜದಲ್ಲಿ ಪಸರಿಸಿ ಸಮನ್ವಯತೆಯನ್ನು ಬೆಳೆಸಿದವರು. ರಿವನ್ನು ಬೆಳೆಸುವ ಕನಕನ ಚಿಂತನೆಗಳು ಸಾರ್ವಕಾಲಿಕವಾಗಿದೆ ಎಂದರು.ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಸದಸ್ಯರಾದ ರಘುರಾಜ್ ಕದ್ರಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ 2023- 24ನೇ ಸಾಲಿನ ಕನಕ ಕೀರ್ತನ ಗಂಗೋತ್ರಿ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ 23 ಅಭ್ಯರ್ಥಿಗಳಿಗೆ ‘ಕನಕ ಪುರಸ್ಕಾರ’ ಪ್ರದಾನ ಮಾಡಲಾಯಿತು. ಮತ್ತು ಕೀರ್ತನ ಪ್ರಸ್ತುತಿ ನಡೆಯಿತು.
ಕನಕದಾಸ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ಧನಂಜಯ ಕುಂಬ್ಳೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ಬಾಗತಿಸಿದರು. ಡಾ.ಯಶುಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪ್ರತಿಕ್ಷಾ ವಂದಿಸಿದರು. ತೇಜಶ್ರೀ ಪುರಸ್ಕೃತರ ವಿವರ ವಾಚಿಸಿದರು.