ಮಕ್ಕಳಲ್ಲಿ ಕ್ಷೀಣಿಸುತ್ತಿರುವ ಮಾನವೀಯತೆ

| Published : Oct 26 2025, 02:00 AM IST

ಸಾರಾಂಶ

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಆಸ್ತಿಗಾಗಿ ತೊಂದರೆ ಕೊಡುವ ಕೆಲಸಗಳು ಆಗುತ್ತಿವೆ.

ಹುಬ್ಬಳ್ಳಿ:

ಮಕ್ಕಳಲ್ಲಿ ಮಾನವೀಯತೆ, ಆತ್ಮಸಾಕ್ಷಿ ಕ್ಷೀಣಿಸುತ್ತಿರುವುದು ಕಳವಳಕಾರಿ ಸಂಗತಿ. ಬರಿ ಹಣ ಗಳಿಕೆ, ಪ್ರತಿಷ್ಠೆಯೇ ಹೆಚ್ಚಾಗಿ ಮಾನವೀಯ ಸಂಬಂಧ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಕಳವಳ ವ್ಯಕ್ತಪಡಿಸಿದರು.

ಇಲ್ಲಿನ ಶ್ರೀಸಿದ್ಧಾರೂಢ ಮಠದ ಆವರಣದಲ್ಲಿರುವ ಹತ್ತಿಮತ್ತೂರ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿರಿಯ ನಾಗರಿಕರು ಹಾಗೂ ನಿವೃತ್ತ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ನೀವು ಇರುವವರೆಗೂ ಆಸ್ತಿಯನ್ನು ಯಾರಿಗೂ ನೀಡಬೇಡಿ. ವ್ಯಕ್ತಿ ಮೃತಪಟ್ಟ ಬಳಿಕ ಯಾವುದೇ ಆಸ್ತಿ ಇರಲಿ ಅದು ನಿಮ್ಮ ವಾರಾಸುದಾರರಿಗೆ ಹೋಗಲಿದೆ ಎಂಬುವುದನ್ನು ಗಮನದಲ್ಲಿಟ್ಟುಕೊಳ್ಳಿ. ನಿಮ್ಮ ಆಸ್ತಿಗಾದರೂ ನಿಮ್ಮವರು ನಿಮ್ಮನ್ನು ನೋಡಿಕೊಳ್ಳುತ್ತಾರೆ ಎಂದರು.

ಇಲಾಖೆಯಿಂದ ಹಗಲು ಯೋಗಕ್ಷೇಮ ಸೇರಿದಂತೆ ಹತ್ತಾರು ಯೋಜನೆ ಜಾರಿಯಲ್ಲಿವೆ ಎಂದ ಹಿರಿಯ ನಾಗರಿಕರ ಇಲಾಖೆ ಜಿಲ್ಲಾಧಿಕಾರಿ ಸವಿತಾ ಕಾಳೆ, ಮಕ್ಕಳಿಗಾಗಿ ಆಸ್ತಿ ಮಾಡಬೇಡಿ. ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಆಸ್ತಿಗಾಗಿ ತೊಂದರೆ ಕೊಡುವ ಕೆಲಸಗಳು ಆಗುತ್ತಿವೆ. ಸಹಾಯವಾಣಿಗೆ ಕರೆ ಮಾಡಿದರೆ ಕೂಡಲೇ ನಿಮ್ಮ ಸಂಕಷ್ಟಕ್ಕೆ ನೆರವಾಗುತ್ತೇವೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಮಾತನಾಡಿ, ಸಂಘದಲ್ಲಿ ನಿವೃತ್ತ ಅಧಿಕಾರಿಗಳು, ಸಿಬ್ಬಂದಿ ಹಾಗೂ 60 ವರ್ಷ ದಾಟಿದ ಜನಪ್ರತಿನಿಧಿಗಳು ಹಾಗೂ ಸಾಮಾನ್ಯರು ಇದ್ದಾರೆ. ಹಿರಿಯ ನಾಗರಿಕರ ಕಾನೂನು ಬಂದು ಹಲವು ವರ್ಷಗಳಾಗಿವೆ. ಆದರೆ, ಅದೆಷ್ಟೊ ಜನರಿಗೆ ಕಾನೂನಿನ ಅರಿವಿಲ್ಲ. ಅಗತ್ಯ ಕಾನೂನಿನ ಮಾಹಿತಿ ನೀಡಲು ಹಿರಿಯ ವಕೀಲರು, ಕಾನೂನು ಸೇವ ಪ್ರಾಧಿಕಾರವಿದೆ ಎಂದು ತಿಳಿಸಿದರು

ಈ ವೇಳೆ ಶ್ರೀಸಿದ್ಧಾರೂಢ ಟ್ರಸ್ಟ್ ಕಮಿಟಿ ಚೇರ್‌ಮನ್ ಚನ್ನವೀರ ಮುಂಗರವಾಡಿ, ಮಹಾವೀರ ಲಿಂಬ್ ಸೆಂಟರ್ ಅಧ್ಯಕ್ಷ ಮಹೇಂದ್ರ ಸಿಂಘಿ, ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಲಿಂಗರಾಜ ಅಂಗಡಿ, ಸಂಘದ ಪದಾಧಿಕಾರಿಗಳಾದ ಡಾ. ಸ್ವಾಮಿ ಕಮಲ ಮನೋಹರ, ಧರಣೇಂದ್ರ ಜವಳಿ ಸೇರಿದಂತೆ ಹಲವರಿದ್ದರು.