ನಮ್ಮ ಮಠವು ಹಿಂದೂ- ಮುಸ್ಲಿಂ ಭಾವೈಕ್ಯತೆಯ ಜೀವಂತ ಪ್ರತೀಕವಾಗಿದೆ. ಮುಹಮ್ಮದ್ ಪೈಗಂಬರರು ಬೋಧಿಸಿದ ಮಾನವೀಯತೆ, ಉಪವಾಸ ಹಾಗೂ ಪರೋಪಕಾರದ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು.
ಮುಂಡರಗಿ: ಧರ್ಮಗಳು ಬೇರೆಯಾಗಿರಬಹುದು. ಆದರೆ ಅವು ಸಾರುವ ಸಂದೇಶ ಒಂದೇ. ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೊಳ್ಳೂರು ಶಿವಲಿಂಗೇಶ್ವರ ಮಠದ ಮೃತ್ಯುಂಜಯ ದೇವರು ಕರೆ ನೀಡಿದರು.ಪಟ್ಟಣದ ಬುಧವಾರ ನೂರಾನಿ ಮಸೀದಿ ವತಿಯಿಂದ ಆಯೋಜಿಸಿದ್ದ ಈದ್ ಮಿಲಾದ್ ಪ್ರಯುಕ್ತ ಅನ್ನಸಂತರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಮಠವು ಹಿಂದೂ- ಮುಸ್ಲಿಂ ಭಾವೈಕ್ಯತೆಯ ಜೀವಂತ ಪ್ರತೀಕವಾಗಿದೆ. ಮಹಮ್ಮದ್ ಪೈಗಂಬರರು ಬೋಧಿಸಿದ ಮಾನವೀಯತೆ, ಉಪವಾಸ ಹಾಗೂ ಪರೋಪಕಾರದ ಗುಣಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು. ಇತರರಿಗೆ ನೋವಾಗದಂತೆ, ತಮಗೆ ಬಡತನ ಬಾರದ ರೀತಿಯಲ್ಲಿ ದಾನ- ಧರ್ಮ ಮಾಡಬೇಕು ಎಂದರು.ತಾಲೂಕು ಬ್ಲಾಕ್ ಕಾಂಗ್ರೆಸ್ ಕಮಿಟಿ ಅಧ್ಯಕ್ಷ ಡಿ.ಡಿ. ಮೋರನಾಳ ಮಾತನಾಡಿ, ಧರ್ಮಗಳು ಬೇರೆಯಾದರೂ ಜಗತ್ತಿನ ಎಲ್ಲ ಮಹಾಪುರುಷರ ಮೂಲ ಸಿದ್ಧಾಂತ ಶಾಂತಿ, ಸೌಹಾರ್ದತೆ ಮತ್ತು ಸಮಾನತೆಯೇ ಆಗಿದೆ. 6ನೇ ಶತಮಾನದ ಪ್ರವಾದಿ ಮಹಮ್ಮದ್ ಪೈಗಂಬರ್, 12ನೇ ಶತಮಾನದ ಬಸವಣ್ಣನವರು ಹಾಗೂ 16ನೇ ಶತಮಾನದ ಕನಕದಾಸರಂತಹ ಮಹಾನ್ ಚೇತನಗಳ ಸಂದೇಶ ಒಂದೇ ಆಗಿತ್ತು ಎಂದರು.ಅಂಜುಮನ್ ಎ ಇಸ್ಲಾಂ ಕಮಿಟಿ ಮಾಜಿ ಅಧ್ಯಕ್ಷ ಡಿ.ಎಂ. ಕಾತರಕಿ, ಕೆಜಿಎನ್ ಶಾಮಿಯಾನ ಮಾಲೀಕ ಎಂ.ಬಿ. ತಾಂಬೋಟಿ ಮಾತನಾಡಿ, ನಾವೆಲ್ಲರೂ ಮೊದಲು ಭಾರತೀಯರು ಹಾಗೂ ಈ ದೇಶದ ಮುಸ್ಲಿಮರು ಎಂಬುದನ್ನು ಎಂದಿಗೂ ಮರೆಯಬಾರದು. ಸೌಹಾರ್ದತೆ ಮತ್ತು ಸಹಬಾಳ್ವೆಯೇ ನಮ್ಮ ಶಕ್ತಿ ಎಂದರು.ಹಾಜಿ ಖಾಜೆಸಾಬ್ ಮುಲ್ಲಾ ಮಾತನಾಡಿ, ಜಗತ್ತಿನಲ್ಲಿ ಕ್ರೌರ್ಯ, ಅನ್ಯಾಯ ಹಾಗೂ ಹೆಣ್ಣು ಶಿಶುಗಳ ಹತ್ಯೆಯಂತಹ ಕರಾಳ ಆಚರಣೆಗಳು ತಾಂಡವವಾಡುತ್ತಿದ್ದ ಕಾಲದಲ್ಲಿ ಜನಿಸಿದ ಪ್ರವಾದಿ ಮಹಮ್ಮದ ಪೈಗಂಬರರು, ಸಮಸ್ತ ಮಾನವಕುಲಕ್ಕೆ ಮೊದಲ ಪಾಠವಾಗಿ ಮಾನವೀಯತೆಯನ್ನು ಬೋಧಿಸಿದರು. ಜಾತಿ, ಮತ, ಭೇದವಿಲ್ಲದೆ ಪ್ರತಿಯೊಬ್ಬರಲ್ಲೂ ಪ್ರೀತಿ ಮತ್ತು ಕರುಣೆ ತೋರುವುದನ್ನು ಕಲಿಸಿದರು.ಕಾರ್ಯಕ್ರಮದಲ್ಲಿ ವೈ.ಎನ್. ಗೌಡರ್, ಸುಬಾನಸಾಬ್ ಜವಳಿ, ನಬೀಸಾಬ್ ಗರಡಿಮನಿ, ನಬಿಸಾಬ್ ಕೆಲೂರ, ಕರೀಂಸಾಬ್ ಮುಲ್ಲಾ, ಡಾ. ಕುಮಾರಸ್ಮಾಮಿ ಹಿರೇಮಠ, ವಿ.ಎಸ್. ಗಟ್ಟಿ, ರಾಮು ಭಜಂತ್ರಿ, ವಿಶ್ವನಾಥಗೌಡ ಪಾಟೀಲ, ರಾಜಾಸಾಬ್ ಬೆಟಗೇರಿ, ಇಸ್ಮಾಯಿಲ್ ನಮಾಜಿ, ಹುಸೇನಬಾಷಾಸಾಬ್ ಮುಲ್ಲಾ, ಮಹ್ಮದಲಿಸಾಬ್ ದೊಡ್ಡಮನಿ, ಡಾ. ಬಿ.ಎಸ್. ಮೇಟಿ, ಆರ್.ಎಂ. ಸೈದರ್, ನಜೀರಾಹ್ಮದ್ ಬೆಟಗೇರಿ, ಮೈನುಸಾಬ್ ರಾಟಿ, ಎ.ಪಿ. ದಂಡಿನ, ನಿಂಗರಾಜ ಹಾಲಿನವರ, ಫರೀದ್ ಮಿರ್ಜಿ, ಮೌಲಾಸಾಬ್ ಬಾಗವಾನ ಉಪಸ್ಥಿತರಿದ್ದರು. ಅಮಿನಸಾಬ್ ಬಿಸನಳ್ಳಿ ಸ್ವಾಗತಿಸಿ, ಮೆಹಬೂಬಸಾಬ್ ತಳಗಡೆ ನಿರೂಪಿಸಿ, ರಾಜಾಭಕ್ಷಿ ಬೆಟಗೇರಿ ವಂದಿಸಿದರು.