ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯನ್ನು ಕೊಂದು ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಪತ್ನಿಯನ್ನು ಕೊಂದು ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಜಗೋಪಾಲ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಲಗ್ಗೆರೆ ಹತ್ತಿರದ ರಾಜೇಶ್ವರಿ ನಗರದ ಪದ್ಮಾವತಿ (29) ಮೃತ ದುರ್ದೈವಿ. ಈ ಹತ್ಯೆ ಬಳಿಕ ಮೃತಳ ಪತಿ ಸುಮಂತ್ ಜೈನ್ (32) ಆತ್ಮಹತ್ಯೆಗೆ ಶರಣಾಗಿದ್ದಾರೆ. ತನ್ನ ಸಾವಿಗೂ ಮುನ್ನ ತಾಯಿಗೆ ವಾಟ್ಸಪ್ನಲ್ಲಿ ವಾಯ್ಸ್ ಮೆಸೇಜ್ ಅನ್ನು ಸುಮಂತ್ ಕಳುಹಿಸಿದ್ದ. ವಿಚಾರ ತಿಳಿದು ಮೃತನ ಮನೆಗೆ ಕುಟುಂಬದವರು ಬಂದಾಗ ಶುಕ್ರವಾರ ಕೃತ್ಯ ಬೆಳಕಿಗೆ ಬಂದಿದೆ.4 ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಎಳನೀರು ಗ್ರಾಮದ ಸುಮಂತ್ ಜೈನ್ ಹಾಗೂ ಧಾರವಾಡ ಜಿಲ್ಲೆ ಕಲ್ಗಟ್ಟಗಿಯ ಪದ್ಮಾವತಿ ಪ್ರೇಮ ವಿವಾಹವಾಗಿದ್ದರು. ಮದುವೆ ಬಳಿಕ ರಾಜೇಶ್ವರಿ ನಗರದಲ್ಲಿ ದಂಪತಿ ನೆಲೆಸಿದ್ದರು. ಸತಿ-ಪತಿ ಎಂಜಿನಿಯರ್ ಪದವೀಧರಾಗಿದ್ದರು. ನಂದಿನಿ ಲೇಔಟ್ನ ಖಾಸಗಿ ಕಂಪನಿಯಲ್ಲಿ ಸುಮಂತ್ ಹಾಗೂ ವೈಟ್ಫೀಲ್ಡ್ ಸಮೀಪದ ಕಂಪನಿಯಲ್ಲಿ ಪದ್ಮಾವತಿ ಉದ್ಯೋಗದಲ್ಲಿದ್ದರು. ಆದರೆ ಇತ್ತೀಚಿಗೆ ಕೌಟುಂಬಿಕ ವಿಚಾರಗಳಿಗೆ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಈ ಹಿನ್ನಲೆಯಲ್ಲಿ ಮನೆಯಲ್ಲಿ ಪರಸ್ಪರ ಜಗಳ ಸಹ ಮಾಡಿಕೊಂಡಿದ್ದರು ಎನ್ನಲಾಗಿದೆ.
ನಾನು ಸಾಯುವೆ ಎಂದುತಾಯಿಗೆ ಸಂದೇಶ ರವಾನೆ
ನಾನು ಸಾಯುತ್ತಿದ್ದೇನೆ. ನಾಳೆ ಮನೆಗೆ ಬಂದು ನನ್ನ ಉಳಿತಾಯದ ಹಣ ಹಾಗೂ ವಸ್ತುಗಳನ್ನು ತೆಗೆದುಕೊಂಡು ಹೋಗುವಂತೆ ತಾಯಿಗೆ ಗುರುವಾರ ರಾತ್ರಿ ಸುಮಂತ್ ವಾಯ್ಸ್ ಮೆಸೇಜ್ ಕಳುಹಿಸಿದ್ದ. ಇದಾದ ಬಳಿಕ ಪತ್ನಿಯನ್ನು ಉಸಿರುಗಟ್ಟಿಸಿ ಕೊಂದು ಬಳಿಕ ತಾನು ನೇಣಿಗೆ ಸುಮಂತ್ ಕೊರಳೊಡ್ಡಿದ್ದಾನೆ. ತನ್ನ ಮಗನ ಸಂದೇಶ ಕೇಳಿ ಆತಂಕಗೊಂಡ ಮೃತನ ತಾಯಿ, ಕೂಡಲೇ ಮಗನ ಮನೆ ಬಳಿಗೆ ಸಂಬಂಧಿಕರನ್ನು ಕಳುಹಿಸಿದ್ದಾರೆ. ಅಂತೆಯೇ ಶುಕ್ರವಾರ ಮೃತನ ಮನೆಗೆ ಬಂದು ಕುಟುಂಬದವರು ಬಾಗಿಲು ಬಡಿದಾಗ ತೆರೆದಿಲ್ಲ. ಕೊನೆಗೆ ಬಾಗಿಲು ಮುರಿದು ಒಳ ಪ್ರವೇಶಿಸಿದಾಗ ಹಾಸಿಗೆಯಲ್ಲಿ ಪದ್ಮಾವತಿ ಹಾಗೂ ನೇಣಿನ ಕುಣಿಕೆಯಲ್ಲಿ ಸುಮಂತ್ ಮೃತದೇಹಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.