ನಾನು ಯಾರ ಹತ್ತಿರ ಹೋಗಿ ನನ್ನನ್ನು ಮಂತ್ರಿ ಮಾಡಿ ಎಂದು ಕೇಳುವ ವ್ಯಕ್ತಿ ನಾನಲ್ಲ ಎಂದು ಎಂದು ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್. ಆರ್.ಶ್ರೀನಿವಾಸ್ ಹೇಳಿದರು.
ಕನ್ನಡಪ್ರಭ ವಾರ್ತೆ ಗುಬ್ಬಿ
ನಾನು ಯಾರ ಹತ್ತಿರ ಹೋಗಿ ನನ್ನನ್ನು ಮಂತ್ರಿ ಮಾಡಿ ಎಂದು ಕೇಳುವ ವ್ಯಕ್ತಿ ನಾನಲ್ಲ ಎಂದು ಎಂದು ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಶಾಸಕ ಎಸ್. ಆರ್.ಶ್ರೀನಿವಾಸ್ ಹೇಳಿದರು. ಪಟ್ಟಣದಲ್ಲಿ 9 ಕೋಟಿ ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಕಾಮಗಾರಿಗೆ ಹಾಗೂ ಬಿಲ್ಲೆಪಾಳ್ಯ, ಬಸವನಗರ,ಸುಭಾಷ್ ನಗರ, ತೋಟದಸಾಲು ನಗರದಲ್ಲಿ ಸುಮಾರು 2.24 ಕೋಟಿ ವೆಚ್ಚದ ಕಾಮಗಾರಿಗಳಿಗೆ ಗುದ್ದಲಿ ಪೂಜೆ ಮಾಡಿ ಮಾತನಾಡಿದ ಅವರು, ನನಗೆ ಮಂತ್ರಿ ಪದವಿ ನೀಡಿದರೆ ಜವಾಬ್ದಾರಿಯಿಂದ ಕೆಲಸ ನೆರವೇರಿಸುತ್ತೇನೆ. ದಾವಣಗೆರೆ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ವಿರೋಧ ಚಟುವಟಿಕೆಗಳು ಮಾಡಿದವರನ್ನು ಮೇಲೆ ಹೈಕಮಾಂಡರ್ ಕ್ರಮ ಕೈಗೊಳ್ಳುತ್ತಾರೆ. ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣ ಇಲ್ಲ. ದೇವೇಗೌಡರ ಕುಟುಂಬ ಎಲ್ಲರೂ ರಾಜಕಾರಣಿಗಳು, ಯಡಿಯೂರಪ್ಪ ಅವರ ಮನೆಯಲ್ಲೂ ಸಹ ಇದೆ. ಬಿಜೆಪಿ ಜೆಡಿಎಸ್ ಎಲ್ಲಾ ಪಕ್ಷದಲ್ಲಿ ಕುಟುಂಬ ರಾಜಕಾರಣ ಇರುವಾಗ, ಆತ್ಮಸಾಕ್ಷಿ, ಮಾನ ಮರ್ಯಾದೆ ಇರುವವರು ಕುಟುಂಬ ರಾಜಕಾರಣ ಎಂಬ ಮಾತೇ ಆಡುವಂತಿಲ್ಲ. ವಿ.ಸೋಮಣ್ಣ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ ಎಂದು ನಾವು ನೇರವಾಗಿ ಹೇಳ್ತಾ ಇದ್ದೀವಿ. ಆದರೆ ಸರ್ಕಾರದ ಖಜಾನೆಯಲ್ಲಿ ಹಣವಿಲ್ಲ ಎಂದು ಸುಳ್ಳು ಹೇಳಿಕೆ ನೀಡಿರುವುದು ಸರಿಯಲ್ಲ. ಅಧಿಕಾರ ಇದ್ದಾಗ ಒಂದು ಮಾತು, ಇಲ್ಲದಾಗ ಒಂದು ಮಾತು ಆಡಿದರೆ ಜನ ಉಗಿಯುತ್ತಾರೆ. ಛೀಮಾರಿ ಹಾಕುತ್ತಾರೆ. ಅಧಿಕಾರ ಬೇಕೆಂದು ಸುಳ್ಳು ಹೇಳಿಕೆ ನೀಡುವುದು ಸರಿಯಲ್ಲ. ಕ್ಷೇತ್ರ ಪುನರ್ ವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ಒಟ್ಟಿಗೆ ಜಾರಿಗೊಳ್ಳುವ ಸಾಧ್ಯತೆ ಇದೆ. ಎಲ್ಲಾ ರಂಗದಲ್ಲಿಯೂ ಮಹಿಳೆಯರೇ ಮುಂದೆ ಇದ್ದು ನಮ್ಮ ತಾಲೂಕಿನಲ್ಲಿಯೂ ಮಹಿಳಾ ಅಧಿಕಾರಿಗಳು ಹೆಚ್ಚಾಗಿದ್ದಾರೆ. ಪ್ರಾಮಾಣಿಕ ಕೆಲಸ ಇಲ್ಲಿ ನಡೆದಿದೆ. ತಾಲೂಕಿನ ಜನರ ನಿರೀಕ್ಷೆಯಂತೆ ಗುಬ್ಬಿ ಪಟ್ಟಣದಲ್ಲಿ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾಗುತ್ತದೆ ಇಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ದೊರೆಯುವ ನಿಟ್ಟಿನಲ್ಲಿ ಕಾಮಗಾರಿ ನಡೆಯುತ್ತದೆ. ತಾಲೂಕಿನ ಜನತೆಗೆ ಸಂಚಾರ ವ್ಯವಸ್ಥೆ ಸುಗಮವಾಗುವ ನಿಟ್ಟಿನಲ್ಲಿ ವೇಗದೂತ ಬಸ್ ಗಳನ್ನು ಸಹ ಬಿಡಿಸಲಾಗುತ್ತದೆ ಎಂದು ತಿಳಿಸಿದರು. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯಿತಿ ಮಾಜಿ ಸದಸ್ಯರು, ಗುತ್ತಿಗೆದಾರರು, ಶಾಸಕರ ಅಭಿಮಾನಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು, ಎಂಜಿನಿಯರ್ ಇತರರು ಇದ್ದರು.